ಗಣೇಶ್ 'ದಿಲ್ ರಂಗೀಲಾ' ಗೀತೆಗೆ ರು.35 ಲಕ್ಷ
ಗೋಲ್ಡನ್ ಸ್ಟಾರ್ ಗಣೇಶ್ ಎಲ್ಲರಿಗೂ 'ಸಕ್ಕರೆ' ಹಂಚಲು ಅಣಿಯಾಗಿದ್ದಾರೆ. ಅವರ ಸಕ್ಕರೆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಅವರ ಮತ್ತೊಂದು ಚಿತ್ರ 'ದಿಲ್ ರಂಗೀಲಾ' ಚಿತ್ರೀಕರಣವೂ ಭರದಿಂದ ಸಾಗುತ್ತಿದೆ.
ಈ ಚಿತ್ರದ ಬಗ್ಗೆ ಗಣೇಶ್ ಹೇಳುವುದೇನೆಂದರೆ, ಇದೊಂದು ಕ್ಯೂಟ್ ಲವ್ ಸ್ಟೋರಿ. ತುಂಬಾ ತಮಾಷೆಯಾಗಿ ಚಿತ್ರವನ್ನು ತರುತ್ತಿದ್ದೇವೆ ಎನ್ನುತ್ತಾರೆ. ಬುಲ್ ಬುಲ್ ಚಿತ್ರದ ರಚಿತಾ ರಾಮ್ ಚಿತ್ರದ ನಾಯಕಿ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಇತ್ತೀಚೆಗೆ ಈ ಚಿತ್ರಕ್ಕೆ ಅದ್ದೂರಿ ಗೀತೆಯನ್ನು ಚಿತ್ರೀಕರಿಸಲಾಯಿತು. ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ "ಅರ್ಲಿ ಮಾರ್ನಿಂಗು ಬೀಚ್ ಗೆ ಬಂದು ಬಿಡಿ" ಎಂಬ ಹಾಡಿನ ಚಿತ್ರೀಕರಣ ಗೋವಾದಲ್ಲಿ ನಡೆದಿದೆ. ಈ ಹಾಡಿಗಾಗಿ ಭಾರಿ ಖರ್ಚು ಮಾಡಲಾಗಿದೆ.ಮೂವತ್ತೈದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಮೂಡಿ ಬಂದಿರುವ ಈ ಹಾಡಿನ ಚಿತ್ರೀಕರಣದಲ್ಲಿ ಗಣೇಶ್, ರಚಿತಾರಾಂ ಹಾಗೂ ರಷ್ಯನ್ ನರ್ತಕರು ಅಭಿನಯಿಸಿದ್ದರು. ಐದು ದಿನಗಳ ಕಾಲ ಚಿತ್ರೀಕರಣಗೊಂಡ ಈ ಹಾಡಿಗೆ ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ರಚಿತರಾಂ, ಪ್ರಿಯಾಂಕಾ ರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರೀತಂ ಗುಬ್ಬಿ ನಿರ್ದೇಶಿಸಿ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಯೋಗಿ ಸಹನಿರ್ದೇಶನವಿರುವ 'ದಿಲ್ ರಂಗೀಲಾ'ಕ್ಕೆ ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಯೋಗರಾರ್ಜ್ ಭಟ್, ಜಯಂತ ಕಾಯ್ಕಿಣಿ ಗೀತರಚನೆ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












