ಜೀ ಕನ್ನಡದ ಆಸೆ ಗೋವಿಂದಾಯ ನಮಃ
ಇತ್ತೀಚೆಗಷ್ಟೇ ಜಯರಾಮ್ ಎಂಬುವವರು, 'ಗೋವಿಂದಾಯ ನಮಃ' ಚಿತ್ರದ ವಿತರಣೆ ಹಕ್ಕುನ್ನು 9.5 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರು. ಆದರೆ ನಿರ್ಮಾಪಕ ಕೆ ಎ ಸುರೇಶ್ ವಿತರಣೆ ಹಕ್ಕುನ್ನು ಜಯರಾಮ್ ಗೆ ಮಾರಾಟ ಮಾಡಿ, ಇನ್ನೊಂದೆಡೆ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲು ಅನುಮತಿ ನೀಡಿದ್ದರು.
ಆದರೆ ಇದರಿಂದ ಮನನೊಂದ ಜಯರಾಮ್ ರವರು ನೀವು ಈ ರೀತಿ ಮಾಡುವುದು ಸರಿಯಲ್ಲವೆಂದು ಈ ರೀತಿ ಮಾಡಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಇಷ್ಟಕ್ಕೆ ಸುಮ್ಮನಿರದ ಜಯರಾಮ್ ಕೋರ್ಟ್ ಮೆಟ್ಟಿಲೇರಿದ್ದರು. ಇದರ ಫಲಿತಾಂಶವಾಗಿ ನ್ಯಾಯಾಲಯವು ಚಿತ್ರ ಪ್ರಸಾರ ಮಾಡದಂತೆ ತಡೆ ನೀಡಿದೆ.
ಜಯರಾಮ್ ರವರ ಹೋರಾಟಕ್ಕೆ ವಿತರಕ ಇಕ್ಬಾಲ್ ಪಾಷಾ ಕೂಡಾ ಕೈ ಜೋಡಿಸಿದ್ದಾರೆ. ಇಬ್ಬರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಜಯರಾಮ್ ಅವರ ದೂರನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯವು , ಜುಲೈ 25 ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸೂಚಿಸಿದೆ. ಈ ಹಿಂದೆ ಜೀ ಕನ್ನಡ ಘೋಷಿಸಿದಂತೆ 'ಗೋವಿಂದಾಯ ನಮಃ' ಚಿತ್ರವನ್ನು ಜೂನ್ 30 ಮತ್ತು ಜುಲೈ 1ರಂದು ಪ್ರಸಾರ ಮಾಡುವಂತಿಲ್ಲ.
'ಗೋವಿಂದಾಯ ನಮಃ' ಚಿತ್ರದ ನಾಯಕ ಕೋಮಲ್ ಕುಮಾರ್ ಮಾತಿನ ಪ್ರಕಾರ ನಿರ್ಮಾಪಕ ಸುರೇಶ್ ಪಕ್ಕಾ ಸ್ವಾರ್ಥಿ. ಈ ದಿನಗಳಲ್ಲಿ ಚಿತ್ರವೊಂದು 100 ದಿನಗಳನ್ನು ಪೂರೈಸುವುದೇ ದೊಡ್ಡ ಸಂಗತಿ. ಈಗಾಗಲೇ ಈ ಚಿತ್ರ ಆರೇಳು ಕೋಟಿ ರೂಪಾಯಿಗಳ ಲಾಭ ಮಾಡಿದೆ. ಸ್ವಲ್ಪ ಸಮಯದ ನಂತರ ಮತ್ತೆ ಬಿಡುಗಡೆ ಮಾಡಿದರೂ ಲಾಭ ಖಚಿತ. ಈ ಸಮಯದಲ್ಲಿ ಚಿತ್ರವನ್ನು ಬರೀ ಏಳೆಂಟು ಲಕ್ಷ ರೂಪಾಯಿಗಳಿಗೆ ಟಿವಿಗೆ ಮಾರಾಟ ಮಾಡಿದರೆ ವಿತರಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.
ಯಾಕೆಂದರೆ ವಿತರಕರು ಹತ್ತಿಪ್ಪತ್ತು ಲಕ್ಷ ಕೊಟ್ಟು ವಿತರಣೆ ಹಕ್ಕು ಖರೀದಿಸಿರುತ್ತಾರೆ. ನಿರ್ಮಾಪಕ ಸುರೇಶ್ ಯಾಕೆ ಹೀಗೆ ಪಕ್ಕಾ ಸ್ವಾರ್ಥಿಯಾಗಿ ವರ್ತಿಸುತ್ತಿದ್ದಾರೆ. ನಿರ್ಮಾಪಕರು ತಪ್ಪು ಮಾಡುತ್ತಿದ್ದಾರೆ. ಹಾಗಾಗಿ ನಾನು ವಿತರಕರನ್ನು ಬೆಂಬಲಿಸಿದ್ದೇನೆ. ಈಗ ನ್ಯಾಯಾಲಯವು ಚಿತ್ರದ ಪ್ರಸಾರಕ್ಕೆ ತಡೆಯಾಜ್ಞೆ ಕೊಟ್ಟಿದೆ. ಈ ಮಾಹಿತಿಯನ್ನು ಜೀ ಕನ್ನಡ ವಾಹಿನಿಗೂ ತಲುಪಿಸಲಾಗಿದೆ ಎಂದು ನಾಯಕ ಕೋಮಲ್ ವಿವರಿಸಿದ್ದಾರೆ.
ಗಂಡ ಹೆಂಡತಿ ಜಗಳದಲಿ ಕೂಸು ಬಡವಾಯಿತು ಅಂತಾರೆ, ಆ ಮಾತು ಅಕ್ಷರಸಃ ಸತ್ಯವಾಗಿದೆ. ನಿರ್ಮಾಪಕ ಹಾಗೂ ವಿತರಕರ ಜಗಳದಲ್ಲಿ ಜೀ ಕನ್ನಡ ವಾಹಿನಿ ಬಡವಾಗಿದೆ. ಜೀ ಕನ್ನಡ ವಾಹಿನಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಯೊಂದು ಮಾಡಿದೆ. ಹೊಸದಾಗಿ ಬಿಡುಗಡೆಯಾದ ಚಲನಚಿತ್ರವನ್ನು ಯಾವಾಗ ಪ್ರಸಾರ ಮಾಡಬೇಕು ಅಥವಾ ಮಾಡಬಾರದು ಎಂಬ ಸಮಸ್ಯೆ ಪರಿಹರಿಸಬೇಕು. ಈ ಜಗಳದಲ್ಲಿ ವಾಹಿನಿಗಳನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಜೀ ತನ್ನ ಮನವಿಯಲ್ಲಿ ತಿಳಿಸಿದೆ.


Click it and Unblock the Notifications












