ಅಭಿಮಾನಿಗಳಿಗೆ ಇನ್ನೊಂದು ಶಾಕ್ ಕೊಟ್ಟ ಕ್ರೇಜಿಸ್ಟಾರ್
ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮೇ 30ಕ್ಕೆ 52ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಆದರೆ ಅವರ ಮುಖದಲ್ಲಿ ಎಂದಿನ ಸಂಭ್ರಮ ಕಾಣುತ್ತಿಲ್ಲ. ಅವರ ಹಲವಾರು ಕನಸುಗಳು ನಿಂತ ನೀರಾಗಿವೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹೊಸ ಶಾಕ್ ಕೊಟ್ಟಿದ್ದಾರೆ.
ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದರು. ಶಿರಡಿ ಸಾಯಿಬಾಬಾ ಅವರ ಸಮ್ಮುಖದಲ್ಲಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೇನೆ. ಹಾಗಾಗಿ ಯಾರೂ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯ ನಮ್ಮ ಮನೆಗೆ ಬರಬೇಡಿ ಎಂದು ವಿನಂತಿಸಿಕೊಂಡಿದ್ದರು.
ತಮ್ಮ ನೆಚ್ಚಿನ ನಟ ಜೊತೆಗಿಲ್ಲವಲ್ಲ ಎಂಬ ಹತಾಶೆ ಅಭಿಮಾನಿಗಳನ್ನು ಕಾಡುತ್ತಿದೆ. ಇದೇ ಸಂದರ್ಭದಲ್ಲಿ ರವಿಚಂದ್ರನ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಅದೇನೆಂದರೆ ಅಭಿನಯಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿರುವುದು. ಈ ಸುದ್ದಿಯನ್ನು ಟೈಂಸ್ ಆಫ್ ಇಂಡಿಯಾ ಪತ್ರಿಕೆಯೂ ವರದಿ ಮಾಡಿದೆ.ಇದಕ್ಕೆ ಅವರು ಕೊಟ್ಟಿರುವ ಕಾರಣ ತಮ್ಮ ಇಬ್ಬರು ಮಕ್ಕಳು ಬೆಳೆದಿದ್ದಾರೆ. ಇನ್ನೇನಿದ್ದರೂ ತೆರೆಯ ಮೇಲೆ ಅವರ ಆಟ. ನಮ್ಮದೇನಿದ್ದರೂ ಅವರ ಆಟವನ್ನು ನೋಡುವುದು. ತಪ್ಪಾಗದಂತೆ ತಿದ್ದುವುದು. ಇನ್ನೇನಿದ್ದರೂ ತೆರೆಯ ಹಿಂದಿನ ಆಟ. ಅಂದರೆ ನಿರ್ದೇಶನ, ನಿರ್ಮಾಣ ಕೆಲಸಗಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ದೊಡ್ಡ ಮಗ ಮನೋರಂಜನ್ ನಾಯಕ ನಟನಾಗಿರುವ ಚಿತ್ರಕ್ಕೆ 'ಅಂದು' ಎಂದು ಹೆಸರಿಟ್ಟಿದ್ದಾರೆ. ಇನ್ನು ಚಿಕ್ಕವನು ವಿಕ್ರಂ ಇನ್ನೂ ಓದುತ್ತಿದ್ದಾನೆ. ಅವನ ಓದು ಮುಗಿದ ಬಳಿಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾನೆ. 'ಅವಳು ಆವರಿಸಿದಳು' ಎಂಬ ಚಿತ್ರಗಳು ಅವರ ಲಿಸ್ಟ್ ನಲ್ಲಿವೆ. ಬಹುಶಃ 'ಮಂಜಿನ ಹನಿ' ಚಿತ್ರದ ಮೂಲಕ ಮಂಗಳ ಹಾಡಲಿದ್ದಾರೆ ರವಿಚಂದ್ರನ್. (ಏಜೆನ್ಸೀಸ್)


Click it and Unblock the Notifications












