ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!
ನಿರ್ಮಾಪಕರು ಬೀದಿಗಿಳಿದು ನಾಳೆಗೆ ಒಂದು ವಾರ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಳೆದ ಸೋಮವಾರದಿಂದ ಹಲವು ನಿರ್ಮಾಪಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರ್ಮಾಪಕರ ಧರಣಿಗೆ ಮಣಿದಿರುವ ಕಲಾವಿದರ ಸಂಘ ಇಂದು ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಸಲಿದೆ.
ರೆಬೆಲ್ ಸ್ಟಾರ್ ಅಂಬರೀಷ್ ನೇತೃತ್ವದಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಮತ್ತು ನಿರ್ಮಾಪಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ಕಲಾವಿದರ ಸಂಘದ ಸಭೆ ನಡೆಯಲಿದೆ. [ನಿರ್ಮಾಪಕರ ಧರಣಿ ; ಅಂಬರೀಶ್ ನಿಲುವೇನು?]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನಟಿ ತಾರಾ, ಸುದೀಪ್, ದರ್ಶನ್, ಗಣೇಶ್ ಸೇರಿದಂತೆ ಪ್ರಮುಖ ಕಲಾವಿದರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಕುರಿತು ಸಿಡಿದೆದ್ದಿರುವ ನಿರ್ಮಾಪಕರ ಪರ ಕಲಾವಿದರ ನಿಲುವೇನು ಅನ್ನೋದು ಇಂದು ನಡೆಯುವ ಸಭೆಯಲ್ಲಿ ನಿರ್ಣಯವಾಗಲಿದೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]
ನಿರ್ಮಾಪಕರ ಸಂಕಷ್ಟಕ್ಕೆ ಕಲಾವಿದರು ಸ್ಪಂದಿಸುವುದಿಲ್ಲ ಅಂತ ಬೀದಿಗೆ ಬಂದಿರುವ ನಿರ್ಮಾಪಕರಿಗೆ ಒಳಿತಾಗಲಿ ಅಂತ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಮನಸ್ಸು ಮಾಡಿ ಸಭೆ ಕರೆದಿದ್ದಾರೆ. ಅವರ ನಿರ್ಧಾರದ ಮೇಲೆ ಈಗೆಲ್ಲಾ ನಿರ್ಮಾಪಕರ ಕಣ್ಣಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











