ಹುಬ್ಬಳ್ಳಿಯಲ್ಲಿ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು, ಪೊಲೀಸರಿಂದ ಲಾಠಿಚಾರ್ಜ್
ಭಾನುವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿಯಲ್ಲಿ ರಾಬರ್ಟ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ (ಪ್ರಿ-ರಿಲೀಸ್ ಕಾರ್ಯಕ್ರಮ) ಆಯೋಜನೆಯಾಗಿದ್ದು, ಈ ಹಿನ್ನೆಲೆ ನಟ ದರ್ಶನ್ ಶನಿವಾರ ರಾತ್ರಿ ಗಂಡುಮೆಟ್ಟಿದ ನಾಡಿಗೆ ಬಂದಿಳಿದಿದ್ದಾರೆ.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ನಟ ದರ್ಶನ್ ರಾತ್ರಿ ಉಳಿದುಕೊಳ್ಳಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಡಿ ಫ್ಯಾನ್ಸ್ ಹೋಟೆಲ್ ಬಳಿ ಜಮಾಯಿಸಿದರು.
ಶನಿವಾರ ಸುಮಾರು 11.30 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ರಾಬರ್ಟ್ ತಂಡ ಹುಬ್ಬಳ್ಳಿಗೆ ಬಂದು ತಲುಪಿದೆ. ಹೋಟೆಲ್ ಬಳಿ ಡಿ ಬಾಸ್ ಕಾರು ಬರುತ್ತಿದ್ದಂತೆ ಕಾರು ಸುತ್ತುವರಿದ ಅಭಿಮಾನಿಗಳು ಕಾರಿನ ಮೇಲೆ ಹೂವು ಎಸೆದು ಸ್ವಾಗತಿಸಿದರು.

ಹೋಟಲ್ ಗೇಟ್ನಿಂದ ಬಾಗಿಲವರೆಗೂ ದರ್ಶನ್ ಕಾರು ಹಿಂಬಾಲಿಸಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ದರ್ಶನ್ ಅವರನ್ನು ಕಾರಿನಿಂದ ಇಳಿಯಲು ಸಹ ಸಾಧ್ಯವಾಗದ ರೀತಿ ಫ್ಯಾನ್ಸ್ ಸೇರಿದ್ದರು. ಕೊನೆಯದಾಗಿ ಅಭಿಮಾನಿಗಳು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಬೇಕಾಯಿತು.
ಬಳಿಕ ಕಾರಿನಿಂದ ಕೆಳಗೆ ಇಳಿದ ದರ್ಶನ್ ಅಭಿಮಾನಿಗಳನ್ನು ಒಡೆಯದಂತೆ ಪೊಲೀಸರಿಗೆ ಕೇಳಿಕೊಂಡಿದ್ದು ಕಂಡು ಬಂತು. ಇದಕ್ಕೂ ಮುಂಚೆ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಕಾರಿನಲ್ಲಿ ಡಿ ಬಾಸ್ ಬಂದರು. ಈ ಹಿನ್ನೆಲೆ ಹೆದ್ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ನಿಂತು ಸ್ವಾಗತಿಸಿದರು.

ಹುಬ್ಬಳ್ಳಿಯ ದೇಸಾಯಿ ಸರ್ಕಲ್ ಕೇಶ್ವಾಪುರ ರೋಡ್ ನ ರೈಲ್ವೆ ಮೈದಾನದಲ್ಲಿ ಸಂಜೆ 6 ಗಂಟೆಗೆ ರಾಬರ್ಟ್ ಕಾರ್ಯಕ್ರಮ ಆರಂಭವಾಗಲಿದೆ. ಹಿರಿಯ ನಟ ದೇವರಾಜ್, ತೆಲುಗು ನಟ ಜಗಪತಿ ಬಾಬು, ಚಿಕ್ಕಣ್ಣ, ನಟಿ ಆಶಾ ಭಟ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.


Click it and Unblock the Notifications











