ಮೋದಿ ಹಾಗೂ ರಾಹುಲ್: ರಿಷಬ್ ರೀತಿ 'ನೋ ಕಮೆಂಟ್ಸ್' ಎನ್ನಲಿಲ್ಲ ಡಾಲಿ
'ಕಾಂತಾರ' ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತ. ಎಲ್ಲ ವರ್ಗದ ಜನರೂ ಸಿನಿಮಾವನ್ನು ಹೊಗಳುತ್ತಿರುವ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಿರ್ದೇಶಕ ರಿಷಬ್ ಶೆಟ್ಟಿಯ ವಿಡಿಯೋ ಒಂದು ಸಿನಿಮಾದ ವಿರುದ್ಧ ಕೆಲವರು ಮಾತನಾಡಲು ಕಾರಣವಾಯ್ತು.
ಕನ್ನಡ ಮಾಧ್ಯಮದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ, ನರೇಂದ್ರ ಮೋದಿಯ ಬಗ್ಗೆ ಅಭಿಪ್ರಾಯ ಕೇಳಿದಾಗ ಅದ್ಭುತ ಪ್ರಧಾನಿ, ನಾಯಕ ಎನ್ನುತ್ತಾರೆ ಬಳಿಕ ರಾಹುಲ್ ಗಾಂಧಿಯ ಬಗ್ಗೆ ಕೇಳಿದಾಗ 'ನೋ ಕಮೆಂಟ್ಸ್' ಎನ್ನುತ್ತಾರೆ. ಇದರಿಂದಾಗಿ ಬಿಜೆಪಿಯ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ತುಸು ಗದ್ದಲ ಎಬ್ಬಿಸಿದರು. ಅದು 'ಕಾಂತಾರ' ಕಡೆಗೂ ತಿರುಗಿ ಸಿನಿಮಾದ ಬಗ್ಗೆ ಕಟು ವಿಮರ್ಶೆಗಳು ಆರಂಭವಾದವು.
ಇದೀಗ ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ 'ಹೆಡ್ ಬುಷ್' ಸಿನಿಮಾ ಬಿಡುಗಡೆ ಆಗಿದ್ದು, ಅದೇ ಮಾಧ್ಯಮದಲ್ಲಿ ಡಾಲಿ ಧನಂಜಯ್ಗೆ ಅದೇ ಸಂದರ್ಶಕಿ, ರಿಷಬ್ ಶೆಟ್ಟಿಗೆ ಕೇಳಿದ್ದ ಪ್ರಶ್ನೆಯನ್ನೇ ಕೇಳಿದ್ದಾರೆ. ಆದರೆ ಡಾಲಿ, ರಿಷಬ್ರಂತೆ 'ನೋ ಕಮೆಂಟ್ಸ್' ಎಂದಿಲ್ಲ, ಬದಲಿಗೆ ಇಬ್ಬರೂ ವ್ಯಕ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿ-ರಾಹುಲ್ ಗಾಂಧಿ: ಡಾಲಿ ಉತ್ತರವೇನು?
ನರೇಂದ್ರ ಮೋದಿ ಬಗ್ಗೆ ಕೇಳಿದಾಗ ಸರಳವಾಗಿ 'ಪ್ರಧಾನ ಮಂತ್ರಿಗಳು' ಎಂದು ಉತ್ತರಿಸಿರುವ ಡಾಲಿ ಧನಂಜಯ್, ರಾಹುಲ್ ಗಾಂಧಿ ಎಂದು ಕೇಳಿದಾಗ 'ವಿರೋಧ ಪಕ್ಷದ ಮುಖಂಡ' ಎಂದಿದ್ದಾರೆ. ಇಬ್ಬರನ್ನೂ ಹೊಗಳಿಲ್ಲ, ಅಥವಾ ಯಾವೊಬ್ಬ ನಾಯಕನ ಪರವಾಗಿರುವಂತೆ ತೋರಿಸಿಕೊಂಡಿಲ್ಲ. 'ನಿಮ್ಮ ಪ್ರಕಾರ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಲ್ಲಿ ಉತ್ತಮ ಸಿಎಂ ಯಾರು?' ಎಂದಾಗ ಮೂವರು ಸಹ ಒಳ್ಳೆಯ ಮಾಸ್ ಲೀಡರ್ಗಳೇ ಎಂದರು.

ಬಲಪಂಥೀಯರ ಟಾರ್ಗೆಟ್ ಆಗುತ್ತಿದ್ದಾರ ಧನಂಜಯ್?
ಇನ್ನು ಅದೇ ಸಂದರ್ಶನದಲ್ಲಿ ಡಾಲಿ ಧನಂಜಯ್ ಕೆಲವು ಎಡ-ಬಲ ಸಿದ್ಧಾಂತದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಎಡ-ಬಲದ ನಡುವೆ ಧನಂಜಯ್ ಬಡವಾದ್ರಾ? ಎಂಬ ಪ್ರಶ್ನೆಗೆ, ಧನಂಜಯ್ ಇರಬಹುದೇನೋ, 'ಕಲಾವಿದರ ವಿಷಯದಲ್ಲಿ ಈ ರೀತಿಯ ಬಣ ರಾಜಕೀಯ ಇರಬಾರದು' ಎಂದಿದ್ದಾರೆ. 'ಬಲಪಂಥೀಯರಿಂದ ಬಡವರ ಮನೆ ಹುಡ್ಗ ಧನಂಜಯ್ ಗುರಿಯಾಗುತ್ತಿದ್ದಾರೆ ಹೌದೆ?' ಎಂಬ ಪ್ರಶ್ನೆಗೆ ಉತ್ತರಿಸಿರುವ ಧನಂಜಯ್, ಅಲ್ಲ, ಅವರಷ್ಟೆ ಅಲ್ಲ, ಎರಡೂ ಥರಹದ ಐಡಿಯಾಲಜಿ ಇರುವವರು ಸಹ ನನಗೆ ಬೆಂಬಲ ಮಾಡಿದ್ದಾರೆ'' ಎಂದಿದ್ದಾರೆ.

ರಿಯಾಯಿತಿ ಬೇಡ, ಅವಕಾಶ ಕೊಡಿ: ಧನಂಜಯ್
'ಬಡವರ ಮಕ್ಳು ಬೆಳೀಬೇಕು' ಎಂದು ಧನಂಜಯ್ ಹುಟ್ಟುಹಾಕಿರುವ ಅಭಿಯಾನದ ಬಗ್ಗೆಯೂ ಧನಂಜಯ್ಗೆ ಪ್ರಶ್ನೆ ಎದುರಾಗಿದ್ದು, 'ಬಡವರ ಮಕ್ಳು ಬೆಳೀಬೇಕು' ಎಂದು ಧನಂಜಯ್ ಹೇಳಿರುವುದು ಚಿತ್ರರಂಗದವರಿಗಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲ, ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ಕ್ಷೇತ್ರದಲ್ಲಿಯೂ ಬೆಳೆಯಬೇಕು ಎಂದು ಉತ್ತರಿಸಿದ್ದಾರೆ ಧನಂಜಯ್. 'ಹಾಗಿದ್ದರೆ, ಬಡವರ ಮಕ್ಕಳು ಎಂದು ರಿಯಾಯಿತಿ ಕೊಡಬೇಕ?' ಎಂಬ ಪ್ರಶ್ನೆಗೆ ಬಡವರ ಮಕ್ಕಳು ಎಂದು ರಿಯಾಯಿತಿ ಕೊಡಬೇಡಿ, ಜಾಗ ಕೊಡಿ, ಅವಕಾಶ ಕೊಡಿ' ಎಂದಿದ್ದಾರೆ ಧನಂಜಯ್.

ಬಡವರ ಮಕ್ಳು ಬೆಳೀಬೇಕು ಕಣ್ರಿ
ಧನಂಜಯ್ ನಿರ್ಮಿಸಿ, ನಟಿಸಿರುವ 'ಹೆಡ್ ಬುಷ್' ಸಿನಿಮಾ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಸಿನಿಮಾದ ಸುತ್ತ ವಿವಾದಗಳು ಎದ್ದಿದ್ದವು. ಸಿನಿಮಾದಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಯ್ತು. ಹಲವೆಡೆ ಹಿಂದು ಸಂಘಟನೆಗಳು ದೂರು ಸಹ ದಾಖಲಿಸಿದವು. ಬಳಿಕ ಕರಗ ತೋರಿಸಿರುವ ರೀತಿಯ ಬಗ್ಗೆ ಅಪಸ್ವರ ಎತ್ತಲಾಯ್ತು. ಧನಂಜಯ್ ಈ ಬಗ್ಗೆ ಸ್ಪಷ್ಟನೆ ನೀಡಿದರು. ಬಳಿಕ ಧನಂಜಯ್ ಅನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂತು. ಧನಂಜಯ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲವೂ ವ್ಯಕ್ತವಾಯಿತು. 'ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ' ಅಭಿಯಾನ ಟ್ರೆಂಡ್ ಆಯಿತು.


Click it and Unblock the Notifications











