'ದಂಡಿ'ಯಾಗಿ ಬರಲಿದೆ ಉತ್ತರಕನ್ನಡದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರಕನ್ನಡ ಜಿಲ್ಲೆಯೂ ಮಹತ್ವದ ಪಾತ್ರವನ್ನ ವಹಿಸಿದ್ದು ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆಯನ್ನ ನೀಡಿದೆ. ಅದರಲ್ಲಿಯೂ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಸಾಮೂಹಿಕ ಹೋರಾಟದ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನ ಹೊತ್ತಿಸಿದ್ದು ಅಂದಿನ ಹೋರಾಟವನ್ನು 'ದಂಡಿ' ಹೆಸರಿನ ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಕಟ್ಟಿಕೊಡಲು ಚಿತ್ರತಂಡವೊಂದು ಸಿದ್ಧವಾಗಿದೆ.
ಸ್ವಾತಂತ್ರ್ಯ ಚಳುವಳಿಗೆ ಜಿಲ್ಲೆ ನೀಡಿದ್ದ ಕೊಡುಗೆಯನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ ಚಿತ್ರವೊಂದು ಸಿದ್ಧವಾಗುತ್ತಿದ್ದು ಚಿತ್ರೀಕರಣಕ್ಕೆ ಇಂದು(ಮಾರ್ಚ್ 18) ಚಾಲನೆ ನೀಡಲಾಯಿತು. ಇಲ್ಲಿನ ಮೂಡ ಗಣಪತಿ ದೇವಸ್ಥಾನದಲ್ಲಿ 'ದಂಡಿ' ಚಿತ್ರತಂಡದ ಸದಸ್ಯರು ಒಟ್ಟಾಗಿ ವಿಶೇಷ ಪೂಜೆಯನ್ನ ಸಲ್ಲಿಸಿದರು.
ಚಿತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉತ್ತರಕನ್ನಡದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟದ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಅದರಲ್ಲೂ ವಿಶೇಷವಾಗಿ ಅಹಿಂಸಾ ಮಾರ್ಗದ ಹೋರಾಟ ಎನಿಸಿಕೊಂಡಿದ್ದ ಉಪ್ಪಿನ ಸತ್ಯಾಗ್ರಹ ಸಂದರ್ಭದ ಚಿತ್ರಣವನ್ನ 'ದಂಡಿ' ಕಟ್ಟಿಕೊಡಲಿದ್ದು ವಿನೂತನವಾಗಿ ತೆರೆಯ ಮೇಲೆ ಮೂಡಿಬರುವ ನಿರೀಕ್ಷೆಯನ್ನು ನಟಿ ತಾರಾ ಅನುರಾಧಾ ವ್ಯಕ್ತಪಡಿಸಿದ್ದಾರೆ.

ದೇಶ ಸ್ವಾತಂತ್ರ್ಯವನ್ನು ಪಡೆದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆ ಇಂತಹದ್ದೊಂದು ಕಥೆಯನ್ನು ತೆರೆಯ ಮೇಲೆ ತರಲು ನಿರ್ದೇಶಕರು ಮುಂದಾಗಿದ್ದಾರೆ. ಡಾ. ರಾಜಶೇಖರ ಮಠಪತಿ ಅವರ 'ದಂಡಿ' ಕಾದಂಬರಿ ಆಧರಿತ ಚಿತ್ರ ಇದಾಗಿದ್ದು ವಿಶಾಲರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಕಲ್ಯಾಣಿ ಪ್ರೊಡಕ್ಷನ್ನ ಅಡಿಯಲ್ಲಿ ಚೊಚ್ಚಲ ಚಿತ್ರವಾಗಿ ಹೊರಬರಲಿದ್ದು ಉಷಾರಾಣಿ.ಎಸ್.ಸಿ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿರ್ಮಾಪಕಿಯ ಪುತ್ರ ಯುವಾನ್ ದೇವ್ ನಾಯಕ ನಟನಾಗಿದ್ದು ಶಾಲಿನಿ ಭಟ್ ನಾಯಕಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಬರುತ್ತಿದ್ದಾರೆ.

Recommended Video
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯದ ಚಳುವಳಿಗಳು ನಡೆದಿದ್ದ ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಕರ್ನಾಟಕದ ಬಾರ್ಡೋಲಿ ಖ್ಯಾತಿಯ ಅಂಕೋಲಾದ ಗ್ರಾಮೀಣ ಭಾಗಗಳಲ್ಲಿ ಮುಂದಿನ ಒಂದು ತಿಂಗಳು ಚಿತ್ರೀಕರಣ ನಡೆಯಲಿದ್ದು ಚಿತ್ರದಲ್ಲಿ ಉತ್ತರಕನ್ನಡದ ಸೊಗಡನ್ನೇ ಸಾಧ್ಯವಾದಷ್ಟರ ಮಟ್ಟಿಗೆ ಕಟ್ಟಿಕೊಡುವ ಆಶಯವನ್ನ ಹೊಂದಿರುವುದಾಗಿ ನಿರ್ದೇಶಕ ವಿಶಾಲರಾಜ್ ತಿಳಿಸಿದ್ದಾರೆ.


Click it and Unblock the Notifications











