ದಂಡುಪಾಳ್ಯ ಊರಿನವರಿಗೆ ಹೆಣ್ಣು ಕೋಡೋರೆ ಇಲ್ಲ
ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮಸ್ಥರಿಂದಲೂ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಅವರು ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಇವರ ಅಹವಾಲನ್ನು ಒಪ್ಪಿಲ್ಲ.
ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಯಾರೋ ಕೆಲವರು ಮಾಡಿದ ದರೋಡೆ ಹಾಗೂ ಕೊಲೆ ಕೃತ್ಯಗಳಿಂದಾಗಿ ಇಡೀ ನಮ್ಮ ಊರಿಗೆ ಕೆಟ್ಟ ಹೆಸರು ಬಂದಿದೆ. ಕೃತ್ಯದಲ್ಲಿ ತೊಡಗಿದ್ದವರನ್ನು ದಂಡುಪಾಳ್ಯ ಗ್ಯಾಂಗ್ ಎಂದು ಕರೆದಿರುವುದು ಸರಿಯಲ್ಲ ಎಂದು ಅರ್ಜಿದಾರರಾದ ಎಂ ಮುನಿವೆಂಕಟಪ್ಪ ಹಾಗೂ ಇನ್ನಿತರರು ಕೋರ್ಟ್ ಗೆ ವಿವರಿಸಿದ್ದರು.
ಇಡೀ ಊರಿಗೆ ಅಂಟಿಕೊಂಡಿರುವ ಈ ಕುಖ್ಯಾತಿಯಿಂದಾಗಿ ನಮ್ಮ ಊರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ನಮೂರಿನೊಂದಿಗೆ ಸಂಬಂಧ ಬೆಳೆಸುತ್ತಿಲ್ಲ. ಊರಿನವರೆಲ್ಲರನ್ನೂ ಕೆಟ್ಟಭಾವದಿಂದ ನೋಡಲಾಗುತ್ತಿದೆ ಎಂದು ಅರ್ಜಿದಾರರು ತಮ್ಮ ನೋವನ್ನು ತೋಡಿಕೊಂಡಿದ್ದರು.
ಇವರ ವಾದವನ್ನು ಆಲಿಸಿದ ಘನ ನ್ಯಾಯಾಲಯದ ವಿಭಾಗೀಯ ಪೀಠದ ಮುಖ್ಯ ನ್ಯಾಯಾಧೀಶರಾದ ವಿಕ್ರಮಜಿತ್ ಸೇನ್ ಹಾಗೂ ಬಿ.ವಿ. ನಾಗರತ್ನ ಅವರು, "ನೀವ್ಯಾಕೆ ನಿಮ್ಮ ಊರಿನ ಹೆಸರನ್ನು ಫ್ಲೋರಿಡಾ ಎಂದು ಬದಲಾಯಿಸಿಕೊಳ್ಳ ಬಾರದು" ಎಂದು ತಿಳಿಹಾಸ್ಯದಲ್ಲಿ ಸಲಹೆ ನೀಡಿ ಅರ್ಜಿಯನ್ನು ತಳ್ಳಿಹಾಕಿತು.
ಪೋಸ್ಟರ್ ಹರಿದು ಪ್ರತಿಭಟನೆ: ಪೂಜಾಗಾಂಧಿ ಅಭಿನಯದ 'ದಂಡುಪಾಳ್ಯ' ಚಿತ್ರದ ಬಗ್ಗೆ ಆರಂಭದಿಂದಲೂ ವಿರೋಧ, ಪ್ರತಿಭಟನೆಗಳು ಎದುರಾಗುತ್ತಲೇ ಇದೆ. ಈ ಚಿತ್ರ ಶುಕ್ರವಾರ (ಜೂ.29) ತೆರೆಕಂಡಿದೆ. ಮೊದಲ ದಿನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಚಿತ್ರ ಪ್ರದರ್ಶನಕ್ಕೂ ವಿರೋಧ ವ್ಯಕ್ತವಾಯಿತು.
ಈ ಚಿತ್ರದಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನಗಳ ಇತರೆ ಸಮಾಜಘಾತುಕ ಕೃತ್ಯಗಳನ್ನು ವೈಭವೀಕರಿಸಲಾಗಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಂಬೇಡ್ಕರ್ ಕ್ರಾಂತಿ ಸೇನೆ ಬೆಂಗಳೂರು ಅನುಪಮ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿತು.
ಚಿತ್ರದಲ್ಲಿ ನಟಿ ಪೂಜಾಗಾಂಧಿ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಅವರ ವಿರುದ್ಧವೂ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಚಿತ್ರದಲ್ಲಿನ ಸಮಾಜಘಾತುಕ ಕೃತ್ಯಗಳಿಗೆ ಕತ್ತರಿ ಹಾಕಬೇಕು ಎಂದು ಅವರೆಲ್ಲರು ಆಗ್ರಹಿಸಿದರು.
ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸನ್ನಿವೇಶಗಳಿಗೆ ಕತ್ತರಿ ಹಾಕದಿದ್ದರೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಅಂಬೇಡ್ಕರ್ ಕ್ರಾಂತಿಸೇನೆಯ ಅಧ್ಯಕ್ಷ ಕ್ರಾಂತಿರಾಜ್ ಎಚ್ಚರಿಸಿದರು. ಸಂಘಟನೆಯ ಕಾರ್ಯಕರ್ತರು ಚಿತ್ರಮಂದಿರದ ಮುಂದಿದ್ದ ಪೋಸ್ಟರ್ ಹಾಗೂ ಕಟೌಟ್ ಗಳನ್ನು ಹರಿದು ತಮ್ಮ ಆಕ್ರೋಶವನ್ನು ಹೊರಹಾಕಿದರು. (ಏಜೆನ್ಸೀಸ್)


Click it and Unblock the Notifications











