ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ದರ್ಶನ್ ಪ್ರತಿಕ್ರಿಯಿಸಿದ್ದು ಹೀಗೆ
ಕನ್ನಡ ಚಿತ್ರರಂಗದ ದಿಗ್ಗಜ ನಟ ದಿವಂಗತ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೊ ಕಿಡಿಗೇಡಿಗಳು ಹಾಳುಗೆಡವಿದ್ದು. ಈ ಘಟನೆ ಚಿತ್ರರಂಗದವರ ಬೇಸರಕ್ಕೆ ಕಾರಣವಾಗಿದೆ.
Recommended Video

ಮಾಗಡಿ ರಸ್ತೆಯ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಿಸಲಾಗಿತ್ತು. ಅದನ್ನು ನಿನ್ನೆ ರಾತ್ರಿ ಯಾರೊ ಕಿಡಿಗೇಡಿಗಳು ಕೆಡವಿ ಕೋಂಡೊಯ್ದಿದ್ದಾರೆ. ಘಟನೆ ಖಂಡಿಸಿ ವಿಷ್ಣು ಅಭಿಮಾನಿಗಳು ಇಂದು ಬೆಳಿಗ್ಗೆ ಪ್ರತಿಭಟನೆ ಸಹ ಮಾಡಿದ್ದಾರೆ.
ಕೆಲವು ನಟರೂ ಸಹ ವಿಷ್ಣು ಪ್ರತಿಮೆಗೆ ಆದ ಅಪಮಾನಕ್ಕೆ ಬೇಸರಗೊಂಡು ಪ್ರತಿಕ್ರಿಯಿಸಿದ್ದು, ನಟ ದರ್ಶನ್ ಸಹ ಘಟನೆ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ದುಷ್ಕರ್ಮಿಗಳಿಗೆ ಶಿಕ್ಷೆ ಆಗಲೇ ಬೇಕು: ದರ್ಶನ್
'ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ.ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ ನಟ ದರ್ಶನ್.

ನಟರೆಲ್ಲಾ ಒಂದಾಗಿ ಖಂಡಿಸಿದ್ದರು
ಇತ್ತೀಚೆಗೆ ತೆಲುಗು ನಟನೊಬ್ಬ ವಿಷ್ಣುವರ್ಧನ್ ಬಗ್ಗೆ ಅಸತ್ಯ ಮಾತನಾಡಿದ್ದಾಗಲೂ ದರ್ಶನ್ ಅದನ್ನು ವಿರೋಧಿಸಿದ್ದರು. ಆಗ ದರ್ಶನ್ ಮಾತ್ರವಲ್ಲದೆ ಪುನೀತ್ ರಾಜ್ಕುಮಾರ್, ಸುದೀಪ್, ಧನಂಜಯ್, ರಕ್ಷಿತ್ ಶೆಟ್ಟಿ ಇನ್ನೂ ಹಲವಾರು ಮಂದಿ ಭಾರಿ ವಿರೋಧ ವ್ಯಕ್ತಪಡಿಸಿದ್ದರು.

ಅಸಮಾಧಾನ ಹೊರಹಾಕಿದ ಅನಿರುದ್ಧ
ನಿನ್ನೆ ನಡೆದಿರುವ ಘಟನೆ ಬಗ್ಗೆ ನಟ ಅನಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಬೇರೆ ಉತ್ತಮ ಸ್ಥಳದಲ್ಲಿ ದೊಡ್ಡದಾಗಿ ನಿರ್ಮಿಸೋಣ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಸಚಿವ ಸೋಮಣ್ಣ ಸಹ ಪ್ರತಿಮೆಯನ್ನು ಬೇರೆಡೆ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.

ಉದ್ದೇಶಪೂರ್ವಕ ಕೃತ್ಯ?
ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಪುತ್ಥಳಿ ನಿರ್ಮಿಸಲಾಗಿತ್ತು. ಅಂದ್ಹಾಗೆ, ಇದು ಬಾಲಗಂಗಾಧರ ಸ್ವಾಮೀಜಿ ಸರ್ಕಲ್ ಆಗಿದ್ದರಿಂದ ಇಲ್ಲಿ ಬಾಲಗಂಗಾಧರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಿಸಬೇಕು, ವಿಷ್ಣುವರ್ಧನ್ ಅವರ ಪ್ರತಿಮೆ ಬೇಡ ಎಂದು ಈ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು ಎಂದು ವಿಷ್ಣು ಅಭಿಮಾನಿಗಳು ತಿಳಿಸಿದ್ದಾರೆ.


Click it and Unblock the Notifications











