ಕ್ರಾಂತಿ ಟ್ರೈಲರ್ ಬಿಡುಗಡೆ ಕುರಿತಾಗಿ ಮಾಹಿತಿ ಹಂಚಿಕೊಂಡ ದರ್ಶನ್
2023ಗೆ ಕಾಲಿಟ್ಟಿರುವ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕ್ರಾಂತಿ ಚಿತ್ರ ಬಿಡುಗಡೆಯಾದ ದಿನದಂದು ಹೊಸ ವರ್ಷ ಆಚರಿಸಲು ಕಾಯುತ್ತಿದ್ದಾರೆ. ಇನ್ನು ಕ್ರಾಂತಿ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ತಿಂಗಳ 26ರ ಗಣ ರಾಜ್ಯೋತ್ಸವದಂದು ತೆರೆಗೆ ಬರಲಿದೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದ್ದು ಚಿತ್ರತಂಡ ಚಿತ್ರದ ಮೇಲಿನ ಹೈಪ್ ಹೆಚ್ಚಿಸಲು ಭಿನ್ನ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ.
ರಾಜ್ಯದ ವಿವಿಧ ಊರುಗಳಲ್ಲಿ ಕ್ರಾಂತಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ ಈಗ ಟ್ರೈಲರ್ ಬಿಡುಗಡೆಗೊಳಿಸಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವತ್ತ ಚಿತ್ತ ನೆಟ್ಟಿದೆ. ಇನ್ನು ಈ ಟ್ರೈಲರ್ ಬಿಡುಗಡೆಗೆ ಮುಹೂರ್ತವನ್ನೂ ಸಹ ಚಿತ್ರತಂಡ ಪ್ರಕಟಿಸಿದ್ದು, ನಾಳೆ ( ಜನವರಿ 7 ) ಸಂಜೆ 7.30ಕ್ಕೆ ಡಿ ಬೀಟ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳ್ಳಲಿದೆ.

ಈ ಕುರಿತಾಗಿ ಇದೀಗ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ದರ್ಶನ್ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ "ಎಲ್ರಿಗೂ ನಮಸ್ಕಾರ. ಧರಣಿ ಹಾಡಾಗಬಹುದು, ಬೊಂಬೆ ಬೊಂಬೆ ಹಾಡಾಗಬಹುದು, ಪುಷ್ಪವತಿ ಹಾಡಾಗಬಹುದು. ಅದನ್ನ ನೋಡಿ ಹರಸಿದ್ದೀರ ಹಾಗೂ ಹಾರೈಸಿದ್ದೀರ. ಈಗ ಮತ್ತೆ ನಿಮ್ಮ ಕ್ರಾಂತಿಯ ಅಪ್ಡೇಟ್ ಹೇಳೋಕೆ ಬಂದಿದ್ದೀನಿ. ಅದು ನಾಳೆ ಏಳನೇ ತಾರೀಖು ಸಂಜೆ ಏಳೂವರೆಗೆ ಅದೂ ಸಹ ಡಿ ಬೀಟ್ಸ್ ಯುಟ್ಯೂಬ್ ಚಾನೆಲ್ನಲ್ಲಿ. ಅದನ್ನು ನೋಡಿ ಹರಸಿ, ಹಾರೈಸಿ ಅಂತ ಕೇಳಿಕೊಳ್ಳುತ್ತೇನೆ. ಧನ್ಯವಾದ" ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ವಿ ರವಿಚಂದ್ರನ್, ಉಮಾ ಶ್ರೀ, ಮುಖ್ಯಮಂತ್ರಿ ಚಂದ್ರು ಹಾಗೂ ಸುಮಲತಾ ಅಂಬರೀಶ್ ಸೇರಿದಂತೆ ಹಲವಾರು ಅನುಭವಿ ಕಲಾವಿದರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಉಳಿದಂತೆ ದರ್ಶನ್ ಹಾಗೂ ರಚಿತಾ ರಾಮ್ ಸೇರಿದಂತೆ ಕ್ರಾಂತಿ ಚಿತ್ರದ ಉಳಿದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಾಗಲಿದ್ದಾರೆ.


Click it and Unblock the Notifications











