ದರ್ಶನ್-ಜಗ್ಗೇಶ್ 'ಅಗ್ರಜ'ಕ್ಕೆ ಕಾಮ್ನಾ, ಪಾರುಲ್ ಸಾಂಗತ್ಯ
'ಚಿಂಗಾರಿ' ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲವಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ನಟನೆಯ 'ಸಂಗೊಳ್ಳಿ ರಾಯಣ್ಣ' ಚಿತ್ರವೇನೋ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ದಿನಾಂಕವಿನ್ನೂ ಪಕ್ಕಾ ಆಗಿಲ್ಲ. 'ಚಿಂಗಾರಿ' ಹಾಕಿದ ದುಡ್ಡು ಬಾಚಿಕೊಂಡರೂ 'ಸಾರಥಿ' ಚಿತ್ರಕ್ಕೆ ಸರಿಸಮಾನ ಹಿಟ್ ದಾಖಲಿಸಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳು 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದಾರೆ.
ಇದೀಗ 'ಬುಲ್ ಬುಲ್' ಚಿತ್ರದದ ಚಿತ್ರೀಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜಿಯಾಗಿದ್ದಾರೆ. ಮತ್ತೊಂದು ವಿಷಯವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಜಗ್ಗೇಶ್ ಜೋಡಿಯ 'ಅಗ್ರಜ' ಚಿತ್ರಕ್ಕೆ ಇಬ್ಬರು ನಾಯಕಿಯರ ಆಯ್ಕೆ ಪಕ್ಕಾ ಆಗಿದೆ. ಈ ಚಿತ್ರಕ್ಕೆ ಒಟ್ಟೂ ನಾಲ್ವರು ನಾಯಕಿಯರಿದ್ದು ಅದರಲ್ಲಿಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಕಾಮ್ನಾ ಜೇಠ್ಮಲಾನಿ ಹಾಗೂ 'ಗೋವಿಂದಾಯ ನಮಃ' ಖ್ಯಾತಿಯ ಪಾರುಲ್ ಯಾದವ್.
ದರ್ಶನ್ ಅವರಿಗೆ ನಾಯಕಿಯಾಗಿ ಕಾಮ್ನಾ ಜೇಠ್ಮಲಾನಿ ನಟಿಸಲಿದ್ದು ಜಗ್ಗೇಶ್ ಅವರಿಗೆ ಪಾರುಲ್ ಯಾದವ್ ಜೊತೆಯಾಗಲಿದ್ದಾರೆ. ಆಶ್ಚರ್ಯವೆಂಬಂತೆ, ಇದೀಗ ನವರಸ ನಾಯಕ ಜಗ್ಗೇಶ್ ಅವರಿಗೆ ನಾಯಕಿಯಾಗಿರುವ ಪಾರುಲ್ ಇದಕ್ಕೂ ಮೊದಲು ಗೋವಿಂದಾಯನಮಃ ಚಿತ್ರದಲ್ಲಿ ಜಗ್ಗೇಶ್ ಸಹೋದರ ಕೋಮಲ್ ಅವರಿಗೆ ನಾಯಕಿಯಾಗಿದ್ದರು. ಇನ್ನು ದರ್ಶನ್ ಜೋಡಿಯಾಗಲಿರುವ ಕಾಮ್ನಾ ಜೇಠ್ಮಲಾನಿ, ಈ ಮೊದಲು 'ಯುಗಾದಿ' ಚಿತ್ರದಲ್ಲಿ ರವಿಚಂದ್ರನ್ ಜತೆಯಾಗಿದ್ದವರು.
ಅಗ್ರಜ ಚಿತ್ರವು ಸಹೋದರರಿಬ್ಬರ ಜುಗಲ್ಬಂದಿಯಾಗಿದ್ದು ಆ ಪಾತ್ರಗಳನ್ನು ಜಗ್ಗೇಶ್ ಹಾಗೂ ದರ್ಶನ್ ಮಾಡುವುದು ಈ ಮೊದಲೇ ನಿರ್ಧಾರವಾಗಿದೆ. ಈ ಚಿತ್ರವನ್ನು ಟಿ ಗೋವರ್ಧನ್ ನಿರ್ಮಾಣದಲ್ಲಿ ಶ್ರೀನಂದನ್ ಹೆಸರಿನ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಉಳಿದಿಬ್ಬರು ನಾಯಕಿಯರಾಗಿ ಶೋಧ ನಡೆದಿದೆ. ಆದರೆ ಹಾರ್ದಿಕಾ ಶೆಟ್ಟಿ ಮತ್ತು ಪೂರ್ಣಿಮಾ ಎಂಬುವವರು ಆಯ್ಕೆಯಾಗುವ ಸಂಭವ ದಟ್ಟವಾಗಿದೆ.
ಈ ಬರಲಿರುವ ಹೊಸ ಚಿತ್ರ 'ಅಗ್ರಜ'ಕ್ಕೆ ನಾಡಿದ್ದು, ಆಗಸ್ಟ್ 15 ರಂದು (15 ಆಗಸ್ಟ್ 2012) ಮುಹೂರ್ತ. ಈ ಚಿತ್ರದಲ್ಲಿ ದರ್ಶನ್ ಮತ್ತು ಜಗ್ಗೇಶ್ ತಾವು ಈ ಮೊದಲು ಮಾಡಿರುವ ಪಾತ್ರಗಳಿಗೆ ತದ್ವಿರುದ್ಧವಾದ ಪಾತ್ರಗಳನ್ನು ಪೋಷಿಸಲಿದ್ದಾರೆ. "ಚಿತ್ರದಲ್ಲಿ ಆಕ್ಷನ್ ಹಾಗೂ ಕಾಮಿಡಿ ಮಿಶ್ರಣವಿದ್ದು ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಹಾಗೂ ನಿರೂಪಣೆ ಮಾಡಲಾಗುವುದು" ಎಂದಿದ್ದಾರೆ ನಿರ್ದೇಶಕ ಶ್ರೀನಂದನ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











