ವಿದೇಶದಿಂದ ವಾಪಸ್; 'ರಾಯಣ್ಣ' ರಿಲೀಸ್ ಗೆ ಹಾಜರ್!
ಈ ಚಿತ್ರಕ್ಕೆ ಎಂಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದು ದಿನಕರ್ ತೂಗುದೀಪ, ವಿ ಹರಿಕೃಷ್ಣ, ಕವಿರಾಜ್ ಸೇರಿದಂತೆ ಐವರು ನಿರ್ಮಾಪಕರು. ಚಿತ್ರಕ್ಕೆ ಹಾಡು ಬರೆದಿರುವುದು ಮಾತ್ರವಲ್ಲದೇ ಸಂಭಾಷಣೆಯನ್ನೂ ಬರೆದು ನಿರ್ಮಾಪಕನ ಸ್ಥಾನದಲ್ಲೂ ಕುಳಿತಿದ್ದಾರೆ ಕವಿರಾಜ್. ವಿ ಹರಿಕೃಷ್ಣ, ಸಂಗೀತದ ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಕ್ಯಾಮರಾ ಕೆಲಸ ಕೃಷ್ಣಕುಮಾರ್ ಅವರದು. ಸೌಂದರ್ ರಾಜ್ ಸಂಕಲನ ಹಾಗೂ ರವಿವರ್ಮ ಸಾಹಸ ಚಿತ್ರಕ್ಕಿದೆ.
ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಾಯಕಿಯಾಗಿ ನಟಿಸುತ್ತಿರುವ ರಚಿತಾ ಪ್ರಸಾದ್, ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಜನಪ್ರಿಯತೆ ಪಡೆದಿರುವ ನಟಿ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಾಮಿಡಿ ನಟ ಶರಣ್ ಈ ಪಾತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸತತ 15 ದಿನಗಳ ಚಿತ್ರೀಕರಣವನ್ನು ಸ್ವಿಜರ್ ಲಾಂಡ್ ನಲ್ಲಿ ಮುಗಿಸಿರುವ ಚಿತ್ರತಂಡ, ಚಿತ್ರದ ಮೇಜರ್ ಪೋರ್ಶನ್ ಮುಗಿಸಿರುವ ಖುಷಿಯಲ್ಲಿದೆ.
ಇತ್ತ, ದರ್ಶನ್ ನಾಯಕತ್ವದಲ್ಲಿ, ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಚಿತ್ರವೆಂಬ ದಾಖಲೆಯೊಂದಿಗೆ ತೆರೆಗೆ ಬರಲು ಸಿದ್ಧವಾಗಿರುವ ಬಹುನಿರೀಕ್ಷೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಫಲಿತಾಂಶಕ್ಕಾಗಿ ಸ್ವತಃ (ಚಿತ್ರದ ನಾಯಕ) ದರ್ಶನ್ ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಕಾಯುತ್ತಿದೆ. ಈ ಚಿತ್ರವು ಕನ್ನಡದ ಬಹುನಿರೀಕ್ಷೆಯ ಐತಿಹಾಸಿಕ ಚಿತ್ರವಷ್ಟೇ ಅಲ್ಲ, ದರ್ಶನ್ ಅಭಿನಯದ ಮೊಟ್ಟ ಮೊದಲು ಐತಿಹಾಸಿಕ ಚಿತ್ರವೂ ಹೌದು.
ಸದ್ಯ, ಕನ್ನಡದ ಅತ್ಯಂತ ಬೇಡಿಕೆಯಲ್ಲಿರುವ ನಟರಾಗಿರುವ ದರ್ಶನ್, ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಈಗಾಗಲೇ ಇತಿಹಾಸವೊಂದನ್ನು ಸೃಷ್ಟಿಸಿದಂತಾಗಿದೆ. ಈ ಚಿತ್ರವೂ 'ಸಾರಥಿ'ಯಂತೆ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್ ಪ್ರಕಾರ ಕನ್ನಡದ 'ನಂ ಒನ್ ಸ್ಟಾರ್' ದರ್ಶನ್ ಎಂಬುದರಲ್ಲಿ ಯಾವುದೇ ಸಂದೇಹವೂ ಇರದಂತಾಗಲಿ ಎಂಬುದು ದರ್ಶನ್ ಅಭಿಮಾನಿಗಳ ಹಾರೈಕೆ. ಅಂದುಕೊಂಡಂತೆ ನಡೆದರೆ 'ಸಂಗೊಳ್ಳಿ ರಾಯಣ್ಣ' ಚಿತ್ರವು ಇದೇ 26 ರಂದು (26 ಅಕ್ಟೋಬರ್ 2012) ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












