ಇದೇ 19ಕ್ಕೆ ದರ್ಶನ್ 'ಸಂಗೊಳ್ಳಿ ರಾಯಣ್ಣ' ಬಿಡುಗಡೆ
ದರ್ಶನ್ ಅಭಿನಯದ, ಬಹುನಿರೀಕ್ಷೆಯ 'ಸಂಗೊಳ್ಳಿ ರಾಯಣ್ಣ' ಚಿತ್ರವು ಇದೇ 19 ರಂದು (19 ಅಕ್ಟೋಬರ್ 2012) ತೆರೆಕಾಣಲಿದೆ. ದರ್ಶನ್ ಚಿತ್ರವನ್ನು ನೋಡಲು ಬಹುದಿನಗಳಿಂದ ಕಾಯುತ್ತಿದ್ದ ದರ್ಶನ್ ಅಭಿಮಾನಿಗಳ ಸಂತೋಷವೀಗ ಮುಗಿಲುಮುಟ್ಟಿದೆ. ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದ್ದ ಈ ಚಿತ್ರದ ಬಿಡುಗಡೆಯನ್ನು ಇದೀಗ ಚಿತ್ರತಂಡ ಘೋಷಿಸಿದೆ. ಕಥಾನಾಯಕ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ.
ದೇಶಭಕ್ತ ಸಂಗೊಳ್ಳಿ ರಾಯಣ್ಣ ಕುರಿತಾದ ಈ ಚಿತ್ರವನ್ನು ರಾಯಣ್ಣರ ಮಹಾ ಅಭಿಮಾನಿ ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅವರು ಬರೋಬ್ಬರಿ ರು. 32 ಕೋಟಿ ಹಣ ಹಾಕಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಲಾಗಿರುವ 'ಅದ್ದೂರಿ' ಚಿತ್ರವೆಂಬ ಪಟ್ಟವನ್ನು ಈ 'ಸಂಗೊಳ್ಳಿ ರಾಯಣ್ಣ' ಚಿತ್ರ ಪಡೆದುಕೊಂಡಿದೆ. 'ಚಿಂಗಾರಿ' ಚಿತ್ರದ ನಂತರ ತೆರೆಗೆ ಬರುತ್ತಿರುವ ದರ್ಶನ್ ನಟನೆಯ ಚಿತ್ರ ಸಂಗೊಳ್ಳಿ ರಾಯಣ್ಣ.
ಚಿತ್ರದ ಬಗ್ಗೆ ಮಾತನಾಡಿರುವ ಆನಂದ್ ಅಪ್ಪುಗೋಳ್ "ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ಹಾಗೂ ದೇಶಭಕ್ತರಿಗಾಗಿಯೇ ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ. ಹಾಕಿದ ಬಜೆಟ್ ಬಗ್ಗೆ ಯಾವುದೇ ಚಿಂತೆಯೂ ನನಗಿಲ್ಲ. ಹಣ ವಾಪಸ್ ಬಾರದಿದ್ದರೆ ಚಿಂತೆಯಾಗದು. ಚಿತ್ರದಿಂದ ನೂರು ಕೋಟಿ ರೂಪಾಯಿ ಲಾಭ ಬಂದರೂ ಸಂತಸವಾಗದು. ರಾಯಣ್ಣನ ಚಿತ್ರ ಮಾಡಬೇಕೆಂಬ ಕನಸಿತ್ತು, ಮಾಡಿದ್ದೇನೆ ಅಷ್ಟೇ" ಅಂದಿದ್ದಾರೆ
ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಾಯಕ ದರ್ಶನ್ ಸ್ವತಃ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವುದು ವ್ಯಕ್ತವಾಗಿದೆ. ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡಿರುವ ಈ 'ಸಂಗೊಳ್ಳಿ ರಾಯಣ್ಣ' ಚಿತ್ರವು ಕನ್ನಡ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಬಜೆಟ್ ಹೊಂದಿರುವ ಚಿತ್ರವಾಗಿದೆ. ಬಜೆಟ್ ಮೊದಲೇ ನಿರ್ಧಾರ ಮಾಡಿ ಸಿನಿಮಾ ಮಾಡಬಾರದೆಂಬ ನಿರ್ಮಾಪಕ ಅಪ್ಪುಗೋಳ್ ಹೇಳಿಕೆಗೆ ಪ್ರತ್ಯಕ್ಷ ಸಾಕ್ಷಿಯಂತಿದೆ 'ಸಂಗೊಳ್ಳಿ ರಾಯಣ್ಣ'. ಮುಂದಿನ ಪುಟ ನೋಡಿ...


Click it and Unblock the Notifications











