ಎಲ್ರೂ ಅಭ್ಯಾಸ ಮಾಡ್ತಾರೆ ಆದ್ರೆ ದರ್ಶನ್ ಅಭ್ಯಾಸ ಮಾಡದೇ ಉತ್ತಮವಾಗಿ ಕುಣಿತಾರೆ: ನಿಮಿಕಾ ರತ್ನಾಕರ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ ಈ ವರ್ಷ ಬಿಡುಗಡೆಯಾಗಲಿರುವ ಕನ್ನಡದ ಮೊದಲ ಸ್ಟಾರ್ ಸಿನಿಮಾ. ಸುಮಾರು ಇಪ್ಪತ್ತು ತಿಂಗಳುಗಳ ಬಳಿಕ ದರ್ಶನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಯಾವ ಚಿತ್ರಗಳೂ ಸಹ ಬಿಡುಗಡೆಯಾಗದ ಕಾರಣ ಕ್ರಾಂತಿ ಚಿತ್ರವನ್ನು ವೀಕ್ಷಿಸಲು ದರ್ಶನ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ಕ್ರಾಂತಿ ಚಿತ್ರ ಇದೇ ತಿಂಗಳ 26ರಂದು ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದ್ದು, ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
ಇನ್ನು ಚಿತ್ರದ ಹೈಪ್ ಹೆಚ್ಚುಸುವ ಸಲುವಾಗಿ ಚಿತ್ರತಂಡ ಈ ಹಿಂದಿನಿಂದಲೂ ಹಲವಾರು ಪ್ರಚಾರ ಸಂದರ್ಶನಗಳನ್ನು ನೀಡಿದ್ದು, ಚಿತ್ರದ ಹಾಡುಗಳನ್ನು ಒಂದೊಂದಾಗಿ ವಿವಿಧ ಊರುಗಳಲ್ಲಿ ಬಿಡುಗಡೆ ಮಾಡಿದೆ. ಚಿತ್ರದ ಮೂರನೇ ಹಾಡು 'ಪುಷ್ಪವತಿ' ಎಂಬ ಐಟಂ ಹಾಡನ್ನು ಕ್ರಿಸ್ಮಸ್ ದಿನದಂದು ಹುಬ್ಬಳ್ಳಿಯಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಲಾಯಿತು.
ಈ ಹಾಡು ಚಿತ್ರದ ಮೊದಲ ಎರಡು ಹಾಡುಗಳಿಗಿಂತ ಹೆಚ್ಚಾಗಿಯೇ ಸದ್ದು ಮಾಡಿದ್ದು, ಈ ಹಾಡಿನಲ್ಲಿ ಪುಷ್ಪವತಿಯಾಗಿ ದರ್ಶನ್ ಅವರ ಜತೆ ಹೆಜ್ಜೆ ಹಾಕಿರುವ ನಟಿ ನಿಮಿಕಾ ರತ್ನಾಕರ್ ವೈರಲ್ ಆಗಿದ್ದಾರೆ. ಹೌದು, ಕನ್ನಡದ ನಟಿಯಾದ ನಿಮಿಕಾ ರತ್ನಾಕರ್ ಕ್ರಾಂತಿ ಚಿತ್ರದ ಪುಷ್ಪವತಿ ಹಾಡು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಹೆಚ್ಚಿನ ಹಿಂಬಾಲಕರನ್ನು ಪಡೆದಿದ್ದಾರೆ ಹಾಗೂ ನಿಮಿಕಾ ತಮ್ಮ ಕ್ರಶ್ ಎಂದು ಮೀಮ್ಸ್ ಸಹ ಹರಿದಾಡಿವೆ. ಇನ್ನು ಹಾಡಿನಿಂದ ತಾವು ಪಡೆದುಕೊಳ್ಳುತ್ತಿರುವ ಹೈಪ್ ಕುರಿತು ನಿಮಿಕಾ ಮಾತನಾಡಿದ್ದು, ಹಾಡಿನ ಅವಕಾಶ ಸಿಕ್ಕಿದ್ದೇಗೆ ಎಂಬುದನ್ನು ಹೇಳಿಕೊಂಡಿದ್ದಾರೆ ಹಾಗೂ ನಟ ದರ್ಶನ್ ಅವರ ಬಗ್ಗೆ ಸಹ ವಿಶೇಷವಾಗಿ ಮಾತನಾಡಿದ್ದಾರೆ.

ಕ್ರಾಂತಿ ಅವಕಾಶ ಸಿಕ್ಕಿದ್ದು ಹೇಗೆ?
ಆಡಿಷನ್ಗೆ ಹೋಗುವಾಗ ನಾನು ಯಾವ ಟೀಮ್ ಅವರನ್ನು ಭೇಟಿ ಮಾಡಲಿದ್ದೇನೆ ಎಂಬುದೂ ಸಹ ಗೊತ್ತಿರಲಿಲ್ಲ ಎಂದ ನಿಮಿಕಾ ರತ್ನಾಕರ್ ಭೇಟಿಯಾದ ನಂತರ ಕ್ರಾಂತಿ ಚಿತ್ರತಂಡದ ಆಡಿಷನ್ ಎಂಬುದನ್ನು ಅರಿತ ನಂತರ ದರ್ಶನ್ ಸರ್ ಸಿನಿಮಾದ ಸ್ಪೆಷಲ್ ಹಾಡಿಗೆ ನನ್ನನ್ನು ತೆಗೆದುಕೊಳ್ಳುವುದು ಅಸಾಧ್ಯ ಬಿಡು ಎಂದುಕೊಂಡಿದ್ದೆ ಎಂದರು. ಆದರೆ ಮಾರನೇ ದಿನವೇ ನಾನು ಕ್ರಾಂತಿ ಚಿತ್ರಕ್ಕೆ ಆಯ್ಕೆಯಾಗಿದ್ದೇನೆ ಎಂಬುದನ್ನು ತಿಳಿಸಿದರು ಎಂದ ನಿಮಿಕಾ ಖುಷಿ ವ್ಯಕ್ತಪಡಿಸಿದರು.

ದರ್ಶನ್ ರಿಹೆರ್ಸಲ್ ಇಲ್ಲದೇ ಕುಣಿಯುತ್ತಾರೆ
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗಲೂ ನನಗೆ ಡಾನ್ಸ್ ಬರಲ್ಲ ಎಂಬುದನ್ನು ಹೇಳುತ್ತಾರೆ. ಅದೇ ವಿಷಯದ ಬಗ್ಗೆ ಕೂಡ ನಿಮಿಕಾ ರತ್ನಾಕರ್ ಮಾತನಾಡಿದ್ದು, ನಾವೆಲ್ಲಾ ಹಾಡಿನ ಚಿತ್ರೀಕರಣಕ್ಕೆ ಎರಡ್ಮೂರು ದಿನಗಳು ಬಾಕಿ ಇರುವಾಗಲೇ ಅಭ್ಯಾಸ ನಡೆಸಿ ಚೆನ್ನಾಗಿ ಕುಣಿಯಬೇಕೆಂದು ತಯಾರಿ ನಡೆಸಿಕೊಳ್ಳುತ್ತಿದ್ದೆವು, ಆದರೆ ದರ್ಶನ್ ಸರ್ ಮಾತ್ರ ಯಾವುದೇ ರಿಹೆರ್ಸಲ್ ಮಾಡುತ್ತಿರಲಿಲ್ಲ ಬದಲಾಗಿ ಸೆಟ್ನಲ್ಲಿ ಇರುವಾಗಲೇ ಹೇಳಿಕೊಟ್ಟ ಸ್ಟೆಪ್ ಕಲಿತು ಮಾಡಿ ಮುಗಿಸುತ್ತಿದ್ದರು ಎಂದು ತಿಳಿಸಿದರು.

ಇತರೆ ಚಿತ್ರಗಳಲ್ಲೂ ನಿಮಿಕಾ ನಟನೆ
ಇನ್ನು ಮೂಲತಃ ಮಂಗಳೂರಿನವರಾದ ನಿಮಿಕಾ ರತ್ನಾಕರ್ ಮೊದಲಿಗೆ ಕಾಣಿಸಿಕೊಂಡದ್ದು ರಾಮಧಾನ್ಯ ಎಂಬ ಕನ್ನಡ ಚಿತ್ರದಲ್ಲಿ. ಎಂಜಿನಿಯರ್ ಆಗಿ ದುಡಿಯುತ್ತಿದ್ದ ನಿಮಿಕಾ ರತ್ನಾಕರ್ ಮಾಡೆಲಿಂಗ್ ಫ್ಯಾಷನ್ ಶೋ ಕಾರಣಕ್ಕಾಗಿ ಕೊರಿಯಾಗೆ ಹೋಗಲು 22 ದಿನ ರಜೆ ಕೇಳಿದ್ದರು. ಆದರೆ ಕಂಪೆನಿಯಲ್ಲಿ ರಜೇ ನೀಡಿರಲಿಲ್ಲ. ಇನ್ನು ಇಷ್ಟಕ್ಕೆ ಸುಮ್ಮನಿರದ ನಿಮಿಕಾ ಕೆಲಸಕ್ಕೆ ರಾಜೀನಾಮೆ ನೀಡಿ ಕೊರಿಯಾಗೆ ಹೋಗಿದ್ದರು. ಇದಾದ ಬಳಿಕ ಭಾರತಕ್ಕೆ ವಾಪಸ್ ಬಂದ ನಿಮಿಕಾಗೆ ಮಾಡಲು ಕೆಲಸವೂ ಇರಲಿಲ್ಲ ಹಾಗೂ ಕೈಯಲ್ಲಿ ದುಡ್ಡೂ ಸಹ ಇರಲಿಲ್ಲ. ಈ ಸಂದರ್ಭದಲ್ಲಿ ರಾಮಧಾನ್ಯ ಚಿತ್ರದ ಆಫರ್ ನಿಮಿಕಾ ಪಾಲಾಯಿತು ಹಾಗೂ ಸಿಕ್ಕ ಅವಕಾಶ ಬಿಡದ ನಿಮಿಕಾ ಮೊದಲ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಅಬ್ಬರ ಎಂಬ ಚಿತ್ರದಲ್ಲಿ ನಟಿಸಿದ ನಿಮಿಕಾ ರತ್ನಾಕರ್ ಇದೀಗ ಉಪೇಂದ್ರ ನಟನೆಯ ತ್ರಿಶೂಲದಲ್ಲೂ ಸಹ ಬಣ್ಣ ಹಚ್ಚಿದ್ದಾರೆ.


Click it and Unblock the Notifications











