ದರ್ಶನ್ ಅಭಿನಯದ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಆಗಸ್ಟ್ ನಿಂದ ಪ್ರಾರಂಭ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಸುದ್ದಿ ಮಾಡುತ್ತಿರುವ 'ರಾಬರ್ಟ್' ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೆ ಹಂತದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಅಲ್ಲದೆ ಈಗಾಗಲೆ ದರ್ಶನ್ 'ಒಡೆಯ' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. 'ಒಡೆಯ' ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಬಹು ನಿರೀಕ್ಷೆಯ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಆಗಸ್ಟ್ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
ಇದೆಲ್ಲದರ ಜೊತೆಗೀಗ ದರ್ಶನ್ ಅವರ ಬಹು ನಿರೀಕ್ಷೆಯ ಮತ್ತು ಬಾರಿ ಕುತೂಹಲ ಮೂಡಿಸಿರುವ 'ಗಂಡುಗಲಿ ಮದಕರಿ ನಾಯಕ' ಸಿನಿಮಾದಿಂದ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಹೌದು, 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಚಿತ್ರೀಕರಣ ಆಗಸ್ಟ್ ನಿಂದ ಪ್ರಾರಂಭವಾಗಲಿದೆಯಂತೆ. ಮುಂದೆ ಓದಿ..

ಆಗಸ್ಟ್ ನಲ್ಲಿ ಸೆಟ್ಟೇರಲಿದೆ ಮದಕರಿ ನಾಯಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸಲು ಸಿದ್ದರಾಗುತ್ತಿದ್ದಾರೆ. ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡುತ್ತಿರುವ 'ಗಂಡುಗಲಿ ಮದಕರಿ ನಾಯಕ' ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರಲಿದೆಯಂತೆ. ಚಿತ್ರೀಕರಣ ಕೂಡ ಆಗಸ್ಟ್ ನಲ್ಲಿಯೇ ಪ್ರಾರಂಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆಯಂತೆ.

ಸಿಂಗ್ ಬಾಬು ನಿರ್ದೇಶನ, ರಾಕ್ ಲೈನ್ ನಿರ್ಮಾಣ
ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರಕ್ಕೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೌಟುಂಬಿಕ ಚಿತ್ರಗಳ ನಿರ್ದೇಶಕರಂತನೇ ಹೆಚ್ಚು ಖ್ಯಾತಿಗಳಿಸಿರುವ ರಾಜೇಂದ್ರ ಸಿಂಗ್ ಬಾಬು ಈ ಬಾರಿ ಐತಿಹಾಸಿಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಚಿತ್ರಕ್ಕೆ ರಾಕ್ ಲೈನ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ
'ಗಂಡುಗಲಿ ಮದಕರಿ ನಾಯಕ' ಚಿತ್ರತಂಡ ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಸದ್ಯ ಮದಕರಿ ನಾಯಕ ತಂಡ ಗ್ರಾಫಿಕ್ಸ್ ಡಿಸೈನ್ ಕೆಲದಲ್ಲಿ ತೊಡಗಿಕೊಂಡಿದೆಯಂತೆ. ಅಲ್ಲದೆ ಐತಿಹಾಸಿಕ ಸಿನಿಮಾ ಅಂದ್ಮೇಲೆ ಕಾಸ್ಟ್ಯೂಮ್ ಕೂಡ ಪ್ರಮುಕ ಪಾತ್ರ ವಹಿಸುತ್ತೆ. ಹಾಗಾಗಿ ಕಾಸ್ಟ್ಯೂಮ್ ಆಯ್ಕೆ ಸೇರಿದಂತೆ ಚಿತ್ರೀಕರಣಕ್ಕೂ ಮೊದಲು ಏನೆಲ್ಲ ತಯಾರಿ ಮಾಡಿಕೊಳ್ಳಬೇಕೊ ಎಲ್ಲ ಕೆಲಸಗಳನ್ನು ಈಗಲೆ ಮಾಡಿಕೊಳ್ಳುತ್ತಿದೆ ಚಿತ್ರತಂಡ.

ಚಿತ್ರದ ತಾಂತ್ರಿಕ ವರ್ಗ
ಸದ್ಯದ ಮಾಹಿತಿ ಪ್ರಕಾರ ಚಿತ್ರದ ತಾಂತ್ರಕ ವರ್ಗದಲ್ಲಿ ನಾದಬ್ರಹ್ಮ ಹಂಸಲೇಖ ಸೇರ್ಪಡೆಯಾಗಿದ್ದಾರೆ. ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಯಾರೆಲ್ಲ ಸೇರ್ಪಡೆಯಾಗಲಿದ್ದಾರೆ ಎನ್ನುವುದು ಸದ್ಯದಲ್ಲೆ ಗೊತ್ತಾಗಲಿದೆ.

ಚಿತ್ರೀಕರಣ ನಡೆಯುವ ಸ್ಥಳಗಳು
ಗಂಡುಗಲಿ ಮದಕರಿ ನಾಯಕ ಚಿತ್ರವನ್ನು ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಕರ್ನಾಟಕದಲ್ಲಿ ಚಿತ್ರದುರ್ಗದಲ್ಲಿ ಚಿತ್ರೀಕರಣ ಮಾಡಿದ್ರೆ, ಇನ್ನು ಹೈದರಾಬಾದ್, ಮುಂಬೈ, ರಾಜಾಸ್ಥಾನ್ ಗಳಲ್ಲಿ ಈ ಚಿತ್ರವನ್ನು ಸೆರಿಹಿಡಿಯಲಾಗುತ್ತೆ.

ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಕುರುಕ್ಷೇತ್ರ
ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಆಗಸ್ಟ್ ನಲ್ಲಿ ತೆರೆಗೆ ಬರುತ್ತಿದೆ. ವಿಶೇಷ ಅಂದ್ರೆ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಕೂಡ ಆಗಸ್ಟ್ ಲ್ಲಿ ಸೆಟ್ಟೇರುತ್ತಿದೆ. ಅಂದ್ಮೇಲೆ ದರ್ಶನ್ ಅಭಿಮಾನಿಗಳಿಗೆ ಆಗಸ್ಟ್ ತಿಂಗಳು ಡಬಲ್ ಧಮಾಕಾ ಆಗಲಿದೆ. ಚಿತ್ರದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ. ಯಾರೆಲ್ಲ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











