'ಕರ್ಮ ನಿಮ್ಮನ್ನು ಬಿಟ್ರೂ ಕ್ರಾಂತಿ ಮಾತ್ರ ಬಿಡಲ್ಲ'; ಬಹು ನಿರೀಕ್ಷಿತ ಕ್ರಾಂತಿ ಚಿತ್ರದ ಟ್ರೈಲರ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಹೈಪ್ ಹೆಚ್ಚಿಸಲು ಚಿತ್ರತಂಡ ಇಂದು ( ಜನವರಿ 7 ) ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಡಿ ಬೀಟ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಟ್ರೈಲರ್ ಬಿಡುಗಡೆಗೊಂಡಿದ್ದು, ಟ್ರೈಲರ್ ತುಂಬಾ ಮಾಸ್ ಡೈಲಾಗ್ಸ್ ಹಾಗೂ ಆಕ್ಷನ್ ದೃಶ್ಯಗಳಿವೆ.
ದರ್ಶನ್ ಸಂದರ್ಶನಗಳಲ್ಲಿ ಹೇಳಿದಂತೆ ಚಿತ್ರ ಸರ್ಕಾರಿ ಶಾಲೆಯೊಂದನ್ನು ಉಳಿಸಿಕೊಳ್ಳಲು ನಡೆಯುವ ಹೋರಾಟ ಎಂಬುದು ಟ್ರೈಲರ್ ಮೂಲಕವೂ ಸಾಬೀತಾಗಿದೆ. ಶಾಲೆಯ ದೃಶ್ಯದ ಮೂಲಕ ಆರಂಭವಾಗುವ ಟ್ರೈಲರ್ನಲ್ಲಿ ದರ್ಶನ್ 'ಒಂದು ಸಣ್ಣ ಕಥೆ ಹೇಳ್ತೀನಿ' ಎಂದು ಶಾಲೆಯ ಜಾಗವನ್ನು ಖಳನಾಯಕ ಕಸಿದುಕೊಳ್ಳಲು ಯತ್ನಿಸುವುದು ಹಾಗೂ ಅದನ್ನು ಕಾಪಾಡಲು ತಾನು ಬರುವುದನ್ನು ಮಾವಿನ ತೋಟ ಹಾಗೂ ಮಾವಿನ ತೋಟದ ಮಾಲೀಕನಿಗೆ ಹೋಲಿಸಿ ಡೈಲಾಗ್ ಹೊಡೆಯುತ್ತಾರೆ. ಈ ಡೈಲಾಗ್ನ ಕೊನೆಯಲ್ಲಿರುವ 'ಕರ್ಮ ನಿಮ್ಮನ್ನು ಬಿಟ್ರೂ ಕ್ರಾಂತಿ ಮಾತ್ರ ನಿಮ್ಮನ್ನು ಬಿಡುವುದಿಲ್ಲ' ಎನ್ನುವ ಸಾಲು ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.
ವಿದೇಶದಲ್ಲಿ ನೆಲೆಸಿರುವ ನಾಯಕ ಕ್ರಾಂತಿ ಸಂಕಷ್ಟಕ್ಕೆ ಸಿಲುಕುವ ತಾನು ಓದಿದ ಶಾಲೆಯನ್ನು ಖದೀಮರಿಂದ ಕಾಪಾಡಲು ದೇಶಕ್ಕೆ ಮರಳಲಿದ್ದು, ಇಲ್ಲಿನ ರಾಜಕೀಯ ವ್ಯಕ್ತಿಗಳು ಹಾಗೂ ಅವರ ಶಕ್ತಿಗಳನ್ನು ಎದುರಿಸಿ ನಡೆಸುವ ಹೋರಾಟವೇ ಕ್ರಾಂತಿ ಚಿತ್ರದ ಕಥೆ ಎಂಬುದು ಟ್ರೈಲರ್ನಲ್ಲಿ ಇರುವ ಅಂಶವಾಗಿದೆ. ಟ್ರೈಲರ್ನಲ್ಲಿರುವ ಸಾಲು ಸಾಲು ಮಾಸ್ ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗ್ತಿದೆ.

ರವಿಚಂದ್ರನ್, ಸುಮಲತಾ ನಟನೆ
ಇನ್ನು ಕ್ರಾಂತಿ ಚಿತ್ರದಲ್ಲಿ ರವಿಚಂದ್ರನ್ ದರ್ಶನ್ ತಂದೆ ಪಾತ್ರವನ್ನು ನಿರ್ವಹಿಸಿದ್ದು, ಅವರ 'ಎಲ್ಲರೂ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡಿದ್ರೆ, ನನ್ನ ಮಗ ಆಯುಧ ಪೂಜೆ ಮಾಡುವವನು' ಎಂಬ ಡೈಲಾಗ್ ಗಮನ ಸೆಳೆದಿದೆ. ಇನ್ನು ಸುಮಲತಾ ಅಂಬರೀಶ್ ಸಹ ಚಿತ್ರದಲ್ಲಿದ್ದು ಸರ್ಕಾರಿ ಅಧಿಕಾರಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಖಳನಾಯಕರಾಗಿ ಸಂಪತ್ ಕುಮಾರ್, ರವಿಶಂಕರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ಬಿ ಸುರೇಶ, ಗಿರಿಜಾ ಲೋಕೇಶ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಶಾಲೆಯ ಬಗ್ಗೆ ಹೆಚ್ಚಿನ ದೃಶ್ಯಗಳಿಲ್ಲ
ಇನ್ನು ಈ ಟ್ರೈಲರ್ನಲ್ಲಿ ನಿರ್ದೇಶಕರು ಚಿತ್ರದ ಕಂಟೆಂಟ್ ಅನ್ನು ಹೆಚ್ಚು ತೋರಿಸಿಲ್ಲ. ಸರ್ಕಾರಿ ಶಾಲೆಯ ಕುರಿತಾದ ಒಂದೇ ಒಂದು ಡೈಲಾಗ್ ಸಹ ಟ್ರೈಲರ್ನಲ್ಲಿ ಇಲ್ಲ. ಕೇವಲ ಸರ್ಕಾರಿ ಶಾಲೆಯ ಜಾಗವನ್ನು ಖಳನಾಯಕ ಆಕ್ರಮಿಸಿಕೊಳ್ಳಲು ಯತ್ನಿಸುವುದನ್ನು ಹಾಗೂ ಶಾಲೆಯನ್ನು ಹೊಡೆದುರುಳಿಸುವ ದೃಶ್ಯಗಳನ್ನು ತೋರಿಸಿದ್ದು, ದರ್ಶನ್ ಅವರು ಸಂದರ್ಶನಗಳಲ್ಲಿ ಹೇಳಿದ್ದ ಶಾಲೆಯ ಕುರಿತಾದ ಯಾವುದೇ ದೃಶ್ಯಗಳನ್ನು ತೋರಿಸಿಲ್ಲ. ಬಹುಶಃ ಈ ದೃಶ್ಯಗಳನ್ನು ಹಾಗೂ ಡೈಲಾಗ್ಗಳನ್ನು ವೀಕ್ಷಕರು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸಲಿ ಎನ್ನುವುದು ಚಿತ್ರತಂಡದ ಉದ್ದೇಶವಿರಬಹುದು.

ದರ್ಶನ್ ಲುಕ್ ಸೃಷ್ಟಿಸಿದೆ ಗೊಂದಲ
ಇನ್ನು ಈ ಟ್ರೈಲರ್ನಲ್ಲಿ ದರ್ಶನ್ ವಿದೇಶದಲ್ಲಿ ಸೂಟು ಬೂಟು ತೊಟ್ಟು ರಾಯಲ್ ಆಗಿ ಕಾಣಿಸಿಕೊಂಡಿರುವ ದೃಶ್ಯ ಹಾಗೂ ಮತ್ತೊಂದೆಡೆ ಲೋಕಲ್ ಟ್ರೈನ್ನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿರುವ ದೃಶ್ಯಗಳನ್ನು ನೋಡಿದ ಕೆಲವರು ಚಿತ್ರದಲ್ಲಿ ದರ್ಶನ್ ಡಬಲ್ ರೋಲ್ ಏನಾದರೂ ಮಾಡಿರಬಹುದಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನು 'ಸುಳ್ಳು ಸೂಟ್ ಹಾಕೊಂಡು ಓಡಾಡ್ತಾ ಇದ್ರೆ, ಸತ್ಯ ತುಂಡು ಬಟ್ಟೆ ಇಲ್ಲದೆ ಬಚ್ಚಲು ಮನೆಯಲ್ಲಿದೆ' ಎಂಬ ಡೈಲಾಗ್ ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್
ಇನ್ನು ಒಟ್ಟಾರೆಯಾಗಿ ಕ್ರಾಂತಿ ಪಕ್ಕಾ ಕಮರ್ಷಿಯಲ್ ಚಿತ್ರ ಎನ್ನುವುದನ್ನು ಟ್ರೈಲರ್ ಸಾರಿ ಹೇಳುತ್ತಿದೆ. ಶಾಲೆಯನ್ನು ಉಳಿಸುವ ಸಲುವಾಗಿ ನಡೆಯುವ ಸಂಘರ್ಷದಲ್ಲಿ ದರ್ಶನ್ ಹೇಗೆ ಜಯ ಸಾಧಿಸುತ್ತಾರೆ ಎನ್ನುವುದೇ ಚಿತ್ರದ ಥೀಮ್. ದರ್ಶನ್ ಸಂದರ್ಶನಗಳಲ್ಲಿ ಹೇಳಿದಂತೆ ಈ ಕಮರ್ಷಿಯಲ್ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಮಹತ್ವ ಹಾಗೂ ಸಂದೇಶ ಇರಲಿದ್ದು, ಈ ಅಂಶಗಳು ಚಿತ್ರವನ್ನು ಸಾಮಾನ್ಯ ಕಮರ್ಷಿಯಲ್ ಚಿತ್ರಕ್ಕಿಂತ ಭಿನ್ನವಾಗಿರಿಸಬಹುದು.


Click it and Unblock the Notifications











