ದರ್ಶನ್, ಸುದೀಪ್, ರವಿಚಂದ್ರನ್ ಸೆಲ್ಫಿ ನಕಲಿ; ದರ್ಶನ್ ಜಾಗದಲ್ಲಿ ಅಸಲಿಗೆ ಇದ್ದದ್ದು ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮೆಜೆಸ್ಟಿಕ್' ಚಿತ್ರದ ವಿಷಯವಾಗಿ ವೈಮನಸ್ಸು ಉಂಟಾದ ಕಾರಣ ಪರಸ್ಪರ ಬೇರೆಯಾದದ್ದು ಹಾಗೂ ಮಾತು ಬಿಟ್ಟದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ವಿಷಯವಾಗಿ ಸುದೀಪ್ ವಿರುದ್ಧ ಕಿಡಿಕಾರಿದ್ದ ದರ್ಶನ್ ಇನ್ನುಮುಂದೆ ತಾನು ಹಾಗೂ ಸುದೀಪ್ ಇಂಡಸ್ಟ್ರಿಯಲ್ಲಿನ ನಟರಷ್ಟೇ, ಇಬ್ಬರ ಮಧ್ಯೆ ಯಾವ ಸ್ನೇಹ ಸಂಬಂಧವೂ ಸಹ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಓಪನ್ ಆಗಿ ಬರೆದುಕೊಂಡಿದ್ದರು.
ಈ ಒಂದು ಪೋಸ್ಟ್ನಿಂದ ಇಬ್ಬರ ಸ್ನೇಹ ಮುರಿದು ಬಿದ್ದಿತ್ತು ಹಾಗೂ ಇಬ್ಬರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಸಹ ಶುರುವಾಗಿದ್ದವು. ಹೀಗೆ ಅಂದು ಶುರುವಾದ ಫ್ಯಾನ್ ವಾರ್ ಇಂದಿಗೂ ಸಹ ಈ ಇಬ್ಬರ ಅಭಿಮಾನಿಗಳ ನಡುವೆ ನಡೆಯುತ್ತಲೇ ಇದೆ. ಆದರೆ ಇಬ್ಬರೂ ಅಭಿಮಾನಿಗಳ ಮನದಲ್ಲಿ ಮಾತ್ರ ತಮ್ಮ ನಟರು ಸರಿ ಹೋಗಬೇಕು, ಮೊದಲಿನ ಹಾಗೆ ಒಂದಾಗಬೇಕು ಎಂದು ಆಶಿಸಿದ್ದಾರೆ.
ಇನ್ನು ಈ ಘಟನೆ ನಡೆದ ಸುಮಾರು ಐದಾರು ವರ್ಷಗಳ ಕಾಲ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳದೇ ಹಾಗೂ ಪರಸ್ಪರ ಮಾತನಾಡದೇ ಇದ್ದ ದರ್ಶನ್ ಹಾಗೂ ಸುದೀಪ್ ಹೊಸಪೇಟೆಯಲ್ಲಿ ನಡೆದ ಚಪ್ಪಲಿ ಎಸೆತದ ಕಾರಣದಿಂದಾಗಿ ಆನ್ಲೈನ್ನಲ್ಲಿ ಪರಸ್ಪರ ಮಾತನಾಡಿದರು. ಹೌದು, ದರ್ಶನ್ ಮೇಲೆ ಚಪ್ಪಲಿ ಎಸೆದದ್ದರ ಕುರಿತಾಗಿ ಪ್ರತಿಕ್ರಿಯಿಸಿದ್ದ ನಟ ಸುದೀಪ್ ಆ ಘಟನೆಯನ್ನು ಖಂಡಿಸಿ ದರ್ಶನ್ ಪರ ನಿಂತಿದ್ದರು. ಇದಕ್ಕೆ ದರ್ಶನ್ ಸಹ ಟ್ವೀಟ್ ಮಾಡಿ ಕೃತಜ್ಞತೆ ಅರ್ಪಿಸಿದ್ದರು. ಈ ಟ್ವೀಟ್ಗಳು ಬಂದ ನಂತರ ಇಬ್ಬರೂ ಸಹ ಒಂದಾಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿವೆ ಹಾಗೂ ಇಬ್ಬರೂ ಸಹ ಜತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇನ್ನು ಹಳೆಯ ಚಿತ್ರಗಳ ಜತೆಗೆ ದರ್ಶನ್, ಸುದೀಪ್ ಹಾಗೂ ರವಿಚಂದ್ರನ್ ಜತೆಗಿರುವ ಸೆಲ್ಫಿ ಫೋಟೊ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಈ ಫೋಟೊ ಹಿಂದಿನ ಅಸಲಿಯತ್ತು ಬೇರೆಯೇ ಇದೆ.

ದರ್ಶನ್, ಕಿಚ್ಚ ಹಾಗೂ ರವಿಚಂದ್ರನ್ ಸೆಲ್ಫಿ ಫೇಕ್!
ಕಿಚ್ಚ ಸುದೀಪ್, ದರ್ಶನ್ ಹಾಗೂ ರವಿಚಂದ್ರನ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೊವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೊವನ್ನು ಬಹುತೇಕ ನೆಟ್ಟಿಗರು ನಿಜ ಎಂದುಕೊಂಡು ಶೇರ್ ಮಾಡಿದ್ದಾರೆ. ದರ್ಶನ್ ಹಾಗೂ ಸುದೀಪ್ ಮೊದಲಿನ ಹಾಗೆ ಒಂದಾಗಿದ್ದಾರೆ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಪ್ಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಸಲಿಗೆ ಈ ಸೆಲ್ಫಿ ಎಡಿಟ್ ಮಾಡಲಾಗಿರುವ ಫೋಟೊ ಎಂದು ತಿಳಿದುಬಂದಿದೆ. ಅಭಿಮಾನಿಯೋರ್ವ ಈ ಫೋಟೊ ನಿಜವೇನೋ ಎನ್ನುವ ಮಟ್ಟಕ್ಕೆ ಎಡಿಟ್ ಮಾಡಿದ್ದಾನೆ.

ಇಲ್ಲಿದೆ ನಿಜವಾದ ಫೋಟೊ
ಈ ಹಿಂದೆ ಸುದೀಪ್ ತನ್ನ ಆಪ್ತ ನಿರ್ಮಾಪಕ ಜಾಕ್ ಮಂಜುನಾಥ್ ಹಾಗೂ ರವಿಚಂದ್ರನ್ ಜತೆ ಸೆಲ್ಫಿಯನ್ನು ತೆಗೆದುಕೊಂಡಿದ್ದರು. ಅಂದಿನ ಈ ಫೋಟೊದಲ್ಲಿದ್ದ ಜಾಕ್ ಮಂಜು ಅವರನ್ನು ಅಳಿಸಿ ಹಾಕಿ ಆ ಜಾಗಕ್ಕೆ ಕ್ರಾಂತಿ ಪ್ರಮೋಷನ್ ವೇಳೆ ದರ್ಶನ್ ಪೋಸ್ ಕೊಟ್ಟಿದ್ದ ಫೋಟೊವನ್ನು ಹಾಕಿ ಎಡಿಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಫೇಕ್ ಫೋಟೊ ಕೂಡ ದೊಡ್ಡ ಮಟ್ಟಕ್ಕೆ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ ಈ ಇಬ್ಬರೂ ಸಹ ಒಂದಾಗಲಿ ಎಂದು ಹಲವಾರು ಅಭಿಮಾನಿಗಳು ಕಾಯುತ್ತಿದ್ದಾರೆ ಎಂಬ ವಿಷಯ ಮತ್ತೆ ಸಾಬೀತಾಗಿದೆ.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಒಂದಾಗ್ತಾರಾ ದಚ್ಚು - ಕಿಚ್ಚ?
ಇನ್ನು ಕಿಚ್ಚ ಸುದೀಪ್ ಹಾಗೂ ದರ್ಶನ್ ಚಿಕ್ಕಬಳ್ಳಾಪುರದಲ್ಲಿ ಒಂದಾಗಲಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಹೌದು, ಇಂದಿನಿಂದ ( ಜನವರಿ 7 ) ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ದರ್ಶನ್ ಹಾಗೂ ಸುದೀಪ್ ಸೇರಿದಂತೆ ಹಲವಾರು ಸ್ಟಾರ್ಗಳಿಗೆ ಆಹ್ವಾನ ನೀಡಲಾಗಿದ್ದು, ಈ ಕಾರ್ಯಕ್ರಮದಲ್ಲಾದರೂ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಬಹುದಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.


Click it and Unblock the Notifications











