'ರಾಬರ್ಟ್' ಸಿನಿಮಾ ಚಿತ್ರೀಕರಣಕ್ಕೆ ಕಿಶನ್ ಮಾಡಿದ ಸಹಾಯವನ್ನು ಹೊಗಳಿದ ದರ್ಶನ್
ಬಾಲ ನಟನಾಗಿ ಸಖತ್ ಖ್ಯಾತರಾಗಿದ್ದ ಕಿಶನ್ ನಟನೆಯ ಜೊತೆ ಕಡಿಮೆ ವಯಸ್ಸಿನಲ್ಲಿಯೇ ಸಿನಿಮಾ ನಿರ್ದೇಶನವೂ ಮಾಡಿ ದಾಖಲೆ ನಿರ್ಮಿಸಿದ್ದರು. ಈಗ ನಟನೆಯಿಂದ ತುಸು ಬಿಡುವು ಪಡೆದಿದ್ದಾರೆ.
Recommended Video
ಹಾಗೆಂದು ಸಿನಿಮಾಗಳಿಂದ ದೂರ ಉಳಿದಿಲ್ಲ ಕಿಶನ್. ದರ್ಶನ್ ಅಭಿನಯಿಸಿರುವ 'ರಾಬರ್ಟ್' ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಕಿಶನ್. ಹಾಗೆಂದು ಸಿನಿಮಾದಲ್ಲಿ ಕಿಶನ್ ಪಾತ್ರವಹಿಸಿದ್ದಾರೆ ಎಂದುಕೊಳ್ಳಬೇಡಿ, ತೆರೆಯ ಹಿಂದೆ ಕೆಲಸ ಮಾಡಿದ್ದಾರೆ ಕಿಶನ್.
'ರಾಬರ್ಟ್' ಸಿನಿಮಾದಲ್ಲಿ ನೀರಿನ ಒಳಗೆ ನಡೆಯುವ ಸನ್ನಿವೇಶಗಳು ಇವೆ. ಈ ದೃಶ್ಯಗಳ ಚಿತ್ರೀಕರಣ ಚಿತ್ರತಂಡಕ್ಕೆ ಬಹಳ ಸವಾಲಾಗಿತ್ತು, ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು ದರ್ಶನ್ ಅವರಿಗೆ ಈಜು ಬರದೇ ಇರುವುದು. ಈ ದೃಶ್ಯಗಳ ಚಿತ್ರೀಕರಣಕ್ಕೆ ಕಿಶನ್ ಅವರು ಚಿತ್ರತಂಡಕ್ಕೆ ನೆರವಾಗಿದ್ದಾರೆ.

ಅಲಸೂರು ಕೆರೆ ಬಳಿಯ ಪೂಲ್ನಲ್ಲಿ ಚಿತ್ರೀಕರಣ
ದರ್ಶನ್ ಅವರೇ ಸಂದರ್ಶನವೊಂದರಲ್ಲಿ ಹೇಳಿರುವಂತೆ, ಅಲಸೂರು ಕೆರೆ ಬಳಿ ಇರುವ ಪೂಲ್ನಲ್ಲಿ ನೀರಿನಾಳದ ದೃಶ್ಯಗಳ ಚಿತ್ರೀಕರಣ ನಡೆಯಿತಂತೆ. ದೊಡ್ಡ ಕಂಟೇನರ್ನಲ್ಲಿ ನೀರು ಬಿಟ್ಟು, ಬಿಟ್ಟ ನೀರು ಕಂಟೇನರ್ನ ಬಾಗಿಲಿನಿಂದ ಹೊರಗೆ ಹೋಗದಂತೆ ಅದನ್ನು ಗೋಡೆಗೆ ಆಸರೆಯಾಗಿಟ್ಟು, ಹೊರಗೆ ಬರಲು ಜಾಗವೇ ಇಲ್ಲದಂತೆ ಮಾಡಿ ಆ ದೃಶ್ಯಗಳ ಚಿತ್ರೀಕರಣ ಮಾಡಲಾಯಿತಂತೆ. ಇದೊಂದು ಬಹಳ ರಿಸ್ಕೀ ದೃಶ್ಯವಾಗಿತ್ತು ಎಂದಿದ್ದಾರೆ ದರ್ಶನ್.

ಡೈವಿಂಗ್ ತಜ್ಞರನ್ನು, ಆಕ್ಸಿಜನ್ ಟ್ಯಾಂಕ್ಗಳನ್ನು ತರಿಸಲಾಗಿತ್ತು: ದರ್ಶನ್
ಕ್ಯಾಮೆರಾಮನ್ ಸುಧಾಕರ್ ಅವರು ನೀರಿನ ಒಳಗೆ ಬರುವುದು ಮೇಲೆ ಹೋಗುವುದು ಮಾಡಿಕೊಂಡು ಚಿತ್ರೀಕರಣ ಮಾಡುತ್ತಿದ್ದರು. ಸುರಕ್ಷತೆಗಾಗಿ ಆರು ಮಂದಿ ಸ್ಕೂಬಾ ಡೈವಿಂಗ್ ತಜ್ಞರನ್ನು, ಆಕ್ಸಿಜನ್ ಟ್ಯಾಂಕ್ಗಳನ್ನು ತರಿಸಲಾಗಿತ್ತು. ಆದರೂ ನೀರಿನ ಆಳದಲ್ಲಿ ಸರಿಯಾದ ದೃಶ್ಯ ಶೂಟ್ ಮಾಡುವುದು ಅಷ್ಟೂ ಸುಲಭದ ಕಾರ್ಯ ಆಗಿರಲಿಲ್ಲ.

ಕಿಶನ್ ಹಾಗೂ ತಂಡದವರು ಸಾಕಷ್ಟು ಸಹಾಯ ಮಾಡಿದರು: ದರ್ಶನ್
ಕಿಶನ್ ಅವರು ಆ ಚಿತ್ರೀಕರಣಕ್ಕೆ ಸಾಕಷ್ಟು ಸಹಾಯ ಮಾಡಿದರು. ಕಂಟೇನರ್ನ ಒಳಗೆ ಇದ್ದುಕೊಂಡೇ ಹಲವು ಸಲಹೆಗಳನ್ನು ನೀಡುತ್ತಾ. ಕಿಶನ್ ಹಾಗೂ ಅವನ ತಂಡ ತಂದಿದ್ದ ಹಲವು ಸಲಕರಣೆಗಳನ್ನು ಬಳಸಿಕೊಂಡು ಅಂದು ಚಿತ್ರೀಕರಣ ಮಾಡಲಾಯಿತು. ಕಿಶನ್ ಹಾಗೂ ಅವನ ತಂಡದವರು ಸಾಕಷ್ಟು ಸಹಾಯ ಮಾಡಿದರು ಎಂದರು ದರ್ಶನ್.

ಕಿಶನ್ ಬಹಳ ಬುದ್ಧಿವಂತ ಹುಡುಗ: ದರ್ಶನ್
ಕಿಶನ್ ಅನ್ನು ಸಣ್ಣವನಿದ್ದಾಗ ನೋಡಿದ್ದೆ, ಈಗೆಲ್ಲ ಅವರು ಬಹಳ ದೊಡ್ಡವರಾಗಿದ್ದಾರೆ. ಕಿಶನ್ ಬಹಳ ಬುದ್ಧಿವಂತ ಹುಡುಗ. ಚಿತ್ರೀಕರಣ, ತಂತ್ರಜ್ಞಾನ, ಆಧುನಿಕ ಸಲಕರಣೆಗಳ ಬಗ್ಗೆ ನನಗೆ ಸಾಕಷ್ಟು ಹೇಳಿದ. ಆದರೆ ನನಗದಾವುದೂ ಗೊತ್ತಾಗಲ್ಲ ನಿನಗೆ ಸರಿ ಬರುವಂತೆ ಮಾಡು ಎಂದು ನಾನು ಹೇಳಿದೆ. ಒಟ್ಟಾರೆ ಅವನಿಗೆ ಧನ್ಯವಾದ ಹೇಳಲೇ ಬೇಕು ಎಂದರು ದರ್ಶನ್.


Click it and Unblock the Notifications











