ವರ್ಷಾಂತ್ಯಕ್ಕೆ ದರ್ಶನ್ - ಯೋಗರಾಜ್ ಭಟ್ ಚಿತ್ರದ ಶೂಟಿಂಗ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕ್ರಾಂತಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಚಿತ್ರ ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬರಲಿದೆ. ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಲು ಕ್ರಾಂತಿ ಚಿತ್ರತಂಡ ಚಿತ್ರದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆಗೊಳಿಸುತ್ತಿದೆ. ನಟ ದರ್ಶನ್ ಹಾಗೂ ಕ್ರಾಂತಿ ಚಿತ್ರತಂಡ ರಾಜ್ಯದ ಒಂದೊಂದು ಊರಿನಲ್ಲಿ ಚಿತ್ರದ ಒಂದೊಂದು ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ.
ಹೀಗೆ ಕ್ರಾಂತಿ ಚಿತ್ರಕ್ಕಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿರುವ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲವನ್ನೂ ಸಹ ಹೊಂದಿದ್ದಾರೆ. ಈ ಪ್ರಶ್ನೆಗೆ ಉತ್ತರ ಈ ಹಿಂದೆಯೇ ಸಿಕ್ಕಿತ್ತು. ದರ್ಶನ್ ತಮ್ಮ 56ನೇ ಚಿತ್ರವನ್ನು ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಜತೆ ಮಾಡಲಿದ್ದಾರೆ ಎಂದು ಘೋಷಣೆಯಾಗಿತ್ತು.

ಆದರೆ ಇದಕ್ಕೂ ಮುನ್ನ ದರ್ಶನ್ ಯೋಗರಾಜ್ ಭಟ್ ನಿರ್ದೇಶನದ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಯೋಗರಾಜ್ ಭಟ್ ನಿರ್ದೇಶನದ ಗರಡಿ ಎಂಬ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಕುರಿತಾಗಿ ಇದೀಗ ಅಪ್ಡೇಟ್ ಒಂದು ಹೊರಬಿದ್ದಿದ್ದು ಡಿಸೆಂಬರ್ 31ರಂದು ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯಲಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದರ್ಶನ್ ಯೋಗರಾಜ್ ಭಟ್ ಆಕ್ಷನ್ ಕಟ್ನಲ್ಲಿ ನಟಿಸಲಿದ್ದಾರೆ.
ಇನ್ನು ಯುವ ನಟ ಸೂರ್ಯ ಹಾಗೂ ಹಿರಿಯ ನಟ ಬಿಸಿ ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನವಿದ್ದು, ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತವನ್ನು ಸಂಯೋಜನೆ ಮಾಡಿದ್ದಾರೆ. ಹೆಸರೇ ಹೇಳುವಂತೆ ಈ ಚಿತ್ರ ದೇಸಿ ಕ್ರೀಡೆಯಾದ ಕುಸ್ತಿಯ ಕುರಿತಾಗಿ ಇರಲಿದ್ದು, ದರ್ಶನ್ ಈ ಚಿತ್ರದಲ್ಲಿ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಾ ಎಂಬ ಕುತೂಹಲ ಸದ್ಯ ಮೂಡಿದೆ.


Click it and Unblock the Notifications