'ಅಂಬರೀಶ' ಬಗ್ಗೆ ಮೌನ ಮುರಿದ ಚಾಲೆಂಜಿಂಗ್ ಸ್ಟಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಅಂಬರೀಶ' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗಿರುವುದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಾ. 'ಬಾಕ್ಸಾಫೀಸ್ ಸುಲ್ತಾನ್' ಮತ್ತು 'ಕನ್ನಡದ ಕರ್ಣ' ಒಟ್ಟಾಗಿ ಅಭಿನಯಿಸಿರುವ ಚಿತ್ರಕ್ಕೆ ಸ್ಯಾಂಡಲ್ ವುಡ್ ಹೃದಯ ಭಾಗವಾದ ಗಾಂಧಿನಗರದಲ್ಲಿ ಚಿತ್ರಮಂದಿರಗಳ ಕೊರತೆ ಎದ್ದು ಕಾಣುತ್ತಿದೆ.
ತಲತಲಾಂತರದಿಂದಲೂ ಮೇನ್ ಥಿಯೇಟರ್ ಅಂದ್ರೆ ಗಾಂಧಿನಗರ (ಕೆ.ಜಿ.ರೋಡ್)ನಲ್ಲಿರುವ ಪ್ರಮುಖ ಚಿತ್ರಮಂದಿರಗಳಲ್ಲಿ ಎಲ್ಲಾ ಚಿತ್ರಗಳು ತೆರೆಕಾಣುವ ವಾಡಿಕೆ ಇದೆ. ಆದ್ರೀಗ ಅದನ್ನ ಮುಂದುವರಿಸೋಕೆ 'ಅಂಬರೀಶ' ಚಿತ್ರಕ್ಕೆ ಸಾಧ್ಯವಾಗುತ್ತಿಲ್ಲ. ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರ ದರ್ಶನ್ ಚಿತ್ರಕ್ಕೆ ಸಿಗುತ್ತಿಲ್ಲ. [ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?]
ಈ ಬಗ್ಗೆ ''ಎಲ್ಲಾದಕ್ಕೂ ನಾವು ರೆಡಿ'' ಅಂತ ನಿರ್ದೇಶಕ ಮಹೇಶ್ ಸುಖಧರೆ ಹೇಳ್ತಿದ್ದಾರೆ ಬಿಟ್ರೆ, ಥಿಯೇಟರ್ ಸಮಸ್ಯೆ ಬಗ್ಗೆ ಈವರೆಗೂ ಎಲ್ಲೂ ತುಟಿಕ್ ಪಿಟಿಕ್ ಅನ್ನದ ದರ್ಶನ್, ಇದೀಗ ಮೌನ ಮುರಿದು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಛೂಬಾಣ ಬಿಟ್ಟಿದ್ದಾರೆ.''ನಾನು ಪ್ರಮುಖ ಚಿತ್ರಮಂದಿರದ ಪರಿಕಲ್ಪನೆಯನ್ನು ನಂಬುವುದಿಲ್ಲ'' ಅಂತ ದರ್ಶನ್, ತಮ್ಮೆಲ್ಲಾ ಅಭಿಮಾನಿಗಳಿಗೆ, ಪತ್ರಿಕಾ ಮಿತ್ರರಿಗೆ ಮತ್ತು ಸುದ್ದಿ ಮಾಧ್ಯಮಗಳಿಗೆ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
''ಕೆ.ಜಿ.ರೋಡ್ ನಲ್ಲಿ ಲಭ್ಯವಿರುವ ಒಳ್ಳೆಯ ಚಿತ್ರಮಂದಿರವೊಂದರಲ್ಲಿ 'ಅಂಬರೀಶ' ಚಿತ್ರವನ್ನ ರಿಲೀಸ್ ಮಾಡಬೇಕೆನ್ನುವುದು ನಿರ್ಮಾಪಕರ ಹಿತಾಸಕ್ತಿ. ಆದರೆ, ಅಲ್ಲಿ ತೆರೆಕಾಣುತ್ತಿರುವ ಇತರೆ ಯಾವುದೇ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ತೊಂದರೆಯಾಗುವುದು ನನಗೆ ಇಷ್ಟವಿಲ್ಲ'' ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.
''ಮೇನ್ ಥಿಯೇಟರ್ ಕೊರತೆ ವಿಷ್ಯದಲ್ಲಿ ನನ್ನ ಹೆಸರು ಪ್ರಸ್ತಾಪವಾಗುತ್ತಿರುವುದು ನನಗೆ ಇಷ್ಟವಿಲ್ಲ. ಪ್ರಮುಖ ಚಿತ್ರಮಂದಿರವಿಲ್ಲದೇ ಚಿತ್ರ ಬಿಡುಗಡೆಯಾದರೂ ನನಗೆ ಅಡ್ಡಿಯಿಲ್ಲ. ಈಗಾಗಲೇ ಕೆಲ ಥಿಯೇಟರ್ ಗಳು ನೆಲಕಚ್ಚಿರುವುದರಿಂದ, ಇನ್ನೆರಡು ವರ್ಷಗಳಲ್ಲಿ ಎಷ್ಟು ಥಿಯೇಟರ್ ಗಳು ಇರಲಿವೆ. ಹೀಗಾಗಿ ಪ್ರಮುಖ ಚಿತ್ರಮಂದಿರವಿಲ್ಲದೇ ಚಿತ್ರವನ್ನ ರಿಲೀಸ್ ಮಾಡಿ, ಹೊಸ ಟ್ರೆಂಡ್ ಶುರುಮಾಡೋಕೆ ಇಚ್ಛಿಸುತ್ತೀನಿ'' ಅಂತ ಟ್ವೀಟ್ ಮಾಡಿ ಗಾಂಧಿನಗರದ ಕೆಲವರಿಗೆ ದರ್ಶನ್ ಬಿಸಿ ಮುಟ್ಸಿದ್ದಾರೆ.
''ಅಂಬರೀಶ ಚಿತ್ರದಲ್ಲಿ ಬೆಂಗಳೂರನ್ನ ಕಟ್ಟಿದ ನಾಡಪ್ರಭು ಕೆಂಪೇಗೌಡ ಕುರಿತ ಕಥೆಯಿರುವುದರಿಂದ ಕೆ.ಜಿ.ರೋಡ್ ನ ಚಿತ್ರಮಂದಿರದಲ್ಲಿ ರಿಲೀಸ್ ಮಾಡುವುದು ನಮ್ಮ ಅಭಿಲಾಶೆ. ಅದಾಗದೇ ಇದ್ದರೆ, ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ'' ಅಂತ ಚಾಲೆಂಜಿಂಗ್ ಸ್ಟಾರ್ ರೆಬೆಲ್ ಆಗದೆ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಗಳಲ್ಲಿರುವ ದರ್ಶನ್ ಅಭಿಪ್ರಾಯವನ್ನ ನೋಡ್ತಿದ್ರೆ, 'ಅಂಬರೀಶ' ಪ್ರಮುಖ ಚಿತ್ರಮಂದಿರವಿಲ್ಲದೆ ಹೊಸ ಟ್ರೆಂಡ್ ಹುಟ್ಟುಹಾಕುವ ಸಾಧ್ಯತೆ ಹೆಚ್ಚಿದೆ. ಹಾಗೇನಾದ್ರೂ ಆದರೆ, ಗಾಂಧಿನಗರದ ಹಳೇ ಕಟ್ಟುಪಾಡುಗಳಿಗೆ 'ಅಂಬರೀಶ' ತಿಲಾಂಜಲಿ ಬಿಟ್ಟಂತಾಗುತ್ತೆ.
ಎಲ್ಲೆಲ್ಲೂ ಮಲ್ಟಿಪ್ಲೆಕ್ಸ್ ಗಳದ್ದೇ ಕಾರುಬಾರು ಆಗಿರುವುದರಿಂದ, ಅಲ್ಲೂ ಕನ್ನಡ ಚಿತ್ರಗಳ ಡಿಂಡಿಮ ಜೋರಾಗುತ್ತೆ. ಲಾಭ ಇಲ್ಲ ಅಂತ ಗೊಣಗುವ ನಿರ್ಮಾಪಕರ ಜೇಬು ತುಂಬುತ್ತೆ. ವಿತರಕರ ಮೊಗದಲ್ಲೂ ಮಂದಹಾಸ ಮೂಡುತ್ತೆ. ಚಾಲೆಂಜಿಂಗ್ ಸ್ಟಾರ್ ನ ಈ ಹೊಸ ಚಾಲೆಂಜ್ ನಿಂದ ಸೋತು ಬಡವಾಗಿರುವ ಕನ್ನಡ ಚಿತ್ರರಂಗದಲ್ಲಿ ಹೊಸ ಆಶಾಕಿರಣ ಮೂಡಲಿ, ಏನಂತೀರಿ? (ಫಿಲ್ಮಿಬೀಟ್ ಕನ್ನಡ)


Click it and Unblock the Notifications












