ಥಿಯೇಟರ್ ಓಪನ್ ಗೆ ಸರ್ಕಾರ ಸಮ್ಮತಿ, ಆರಂಭಿಸಲು ಮಾಲೀಕರ ನಿರಾಸಕ್ತಿ!
ಸಿನಿಮಾ ಮಂದಿರಗಳನ್ನು ತೆರೆಯಲು ರಾಜ್ಯ ಸರ್ಕಾರ ಷರತ್ತು ವಿಧಿಸಿ ಅನುಮತಿ ನೀಡಿದೆ. ಆದ್ರೆ, ಬೆಣ್ಣೆನಗರಿ ದಾವಣಗೆರೆಯಲ್ಲಿ ಚಿತ್ರಮಂದಿರ ತೆರೆಯಲು ಮಾಲೀಕರು ಸಂಪೂರ್ಣ ನಿರಾಸಕ್ತಿ ಹೊಂದಿದ್ದಾರೆ. ನಗರದಲ್ಲಿ ಎಂಟು ಪ್ರಮುಖ ಚಿತ್ರಮಂದಿರಗಳಿದ್ದು, ಈ ಪೈಕಿ ಅರುಣಾ ಥಿಯೇಟರ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.
ತ್ರಿಶೂಲ್, ತ್ರಿನೇತ್ರ, ಪುಷ್ಪಾಂಜಲಿ, ಗೀತಾಂಜಲಿ, ಪದ್ಮಾಂಜಲಿ, ವಸಂತ, ಅಶೋಕ ಸಿನಿಮಾ ಮಂದಿರಗಳು ಇನ್ನು ಆರಂಭವಾಗಿಲ್ಲ. ಬಕ್ರೀದ್ ಹಿನ್ನೆಲೆಯಲ್ಲಿ ಅರುಣಾ ಚಿತ್ರಮಂದಿರ ಆರಂಭವಾಗಿದ್ದು, ಹಳೆಯ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಆದ್ರೂ ಸಿನಿರಸಿಕರು ಅಷ್ಟಾಗಿ ಬರುತ್ತಿಲ್ಲ.
ಸುಮಾರು ನಾಲ್ಕು ತಿಂಗಳಿನಿಂದಲೂ ಚಿತ್ರಮಂದಿರ ಬಂದ್ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ನಿಷೇಧ ಹೇರಲಾಗಿತ್ತು. ಈಗ ಸರ್ಕಾರ ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅನುಮತಿ ನೀಡಿದೆ. ಇನ್ನು ಹೊಸ ಸಿನಿಮಾ ಯಾವುದೂ ಬಿಡುಗಡೆ ಆಗದ ಕಾರಣ ಥಿಯೇಟರ್ ತೆರೆಯುವ ಉತ್ಸಾಹ ಮಾಲೀಕರಲ್ಲಿ ಇಲ್ಲ.

ಯಾವಾಗ ತೆರೆಯುತ್ತವೆ ಚಿತ್ರಮಂದಿರಗಳು...?
ಇನ್ನು ಮುಂದಿನ ವಾರ ಚಿತ್ರಮಂದಿರಗಳು ಆರಂಭವಾಗಲಿವೆ. ರಾಜ್ಯ ಸರ್ಕಾರ ಶೇಕಡಾ 100ರಷ್ಟು ಆಸನ ಭರ್ತಿಗೆ ಮಂದಿರದ ಮಾಲೀಕರು ಕಾಯುತ್ತಿದ್ದಾರೆ. ಇನ್ನು ರಾಜ್ಯ ಮತ್ತು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಆದ್ರೆ ಇನ್ನು ಹಳ್ಳಿಗಳಿಂದ ಜನರು ನಗರಕ್ಕೆ ಬರುತ್ತಿಲ್ಲ. ಶಾಲಾ ಕಾಲೇಜುಗಳು ಆರಂಭವಾಗಿಲ್ಲ. ಹಳೆಯ ಸಿನಿಮಾ ಪ್ರದರ್ಶಿಸಲು ಹೋದರೆ ಹಾಕಿದ ಬಂಡವಾಳ ಮರಳಿ ಬುರುವುದು ಇರಲಿ, ಮತ್ತಷ್ಟು ಹೊರೆಯಾಗುತ್ತದೆ. ಈ ಕಾರಣದಿಂದ ತೆರೆಯದಿರಲು ನಿರ್ಧರಿಸಲಾಗಿದೆ.

ದಾವಣಗೆರೆ ಒಂದರಲ್ಲೇ 50 ಕೋಟಿ ನಷ್ಟ?
ಕಳೆದ 120 ದಿನಗಳಿಂದ ಚಿತ್ರಮಂದಿರಗಳು ಸ್ಥಗಿತಗೊಂಡಿರುವುದರಿಂದ ದಾವಣಗೆರೆ ನಗರ ಒಂದರಲ್ಲಿಯೇ ಬರೋಬ್ಬರಿ 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಮಾಲೀಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಸರ್ಕಾರ ಅನುಮತಿ ನೀಡಿದರೂ ತೆರೆಯಲು ಆಗದ ತ್ರಿಶಂಕು ಸ್ಥಿತಿಯಲ್ಲಿರುವ ಮಾಲೀಕರು ಇದನ್ನು ಸರಿದೂಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.
''ವಿದ್ಯುತ್ ಬಿಲ್, ವಾಟರ್ ಬಿಲ್ ಬಂದೇ ಬರುತ್ತದೆ''
ಚಿತ್ರ ಪ್ರದರ್ಶನ ಮಾಡದಿದ್ದರೂ ತಿಂಗಳಿಗೆ ಕನಿಷ್ಟ ಅಂದರೂ 15 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬರುತ್ತೆ. ಸಿಬ್ಬಂದಿಗಳ ವೇತನ ಲಕ್ಷ ರೂಪಾಯಿ ದಾಟುತ್ತೆ. ಬಾಡಿಗೆ ತಿಂಗಳಿಗೆ ಚಿತ್ರಮಂದಿರದ ಆಧಾರದ ಮೇಲೆ ಇರುತ್ತೆ. ಮಧ್ಯಮ ಎನ್ನುವಂತ ಚಿತ್ರಮಂದಿರವೊಂದರ ಬಾಡಿಗೆಯೇ 2 ರಿಂದ 3 ಲಕ್ಷ ರೂಪಾಯಿ ಆಗುತ್ತದೆ. ಇತರೆ ಖರ್ಚು ಸಹ ಆಗುತ್ತದೆ. ಈ ಎಲ್ಲಾ ಕಾರಣಗಳಿಂದ ದಾವಣಗೆರೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿಲ್ಲ. ಇನ್ನು ತಾಲೂಕುಗಳಲ್ಲಿನ ಚಿತ್ರಮಂದಿರಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಅಂತಾರೆ ಥಿಯೇಟರ್ ಉಸ್ತುವಾರಿ ನೋಡಿಕೊಳ್ಳುವ ಚಂದ್ರಪ್ಪ.
Recommended Video

ಹೊಸ ಸಿನಿಮಾಗಳು ಬಿಡುಗಡೆ ಆಗಿಲ್ಲ
ರಾಜ್ಯದಾದ್ಯಂತ ಚಿತ್ರಮಂದಿರಗಳು ಶೇ 50 ಸೀಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಆಗದ ಕಾರಣ ರಾಜ್ಯದ ಬಹುತೇಕ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿಲ್ಲ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ 'ರಾಬರ್ಟ್' ಮತ್ತು 'ಯುವರತ್ನ' ಸಿನಿಮಾಗಳು ಮರುಬಿಡುಗಡೆ ಆಗಿವೆ.


Click it and Unblock the Notifications











