'ಗಂಧದ ಗುಡಿ' ಸ್ವಾಗತಕ್ಕೆ ಸಜ್ಜಾಗಿದೆ ದಾವಣಗೆರೆ: ನೀವು ರೆಡೀನಾ?
ಪುನೀತ್ ರಾಜ್ಕುಮಾರ್, ಕಟ್ಟ ಕಡೆಯದಾಗಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ 'ಗಂಧದ ಗುಡಿ' ಡಾಕ್ಯುಸಿನಿಮಾ ಬಿಡುಗಡೆಗೆ ಕೆಲವು ದಿನಗಳಷ್ಟೆ ಬಾಕಿ ಉಳಿದಿವೆ. ಜೊತೆಗಿರದ ಜೀವದ ಕಟ್ಟಕಡೆಯ ಸಿನಿಮಾದ ಬಿಡುಗಡೆಯನ್ನು ಸಂಭ್ರಮಿಸಲು ಅಭಿಮಾನಿಗಳು ರಾಜ್ಯದಾದ್ಯಂತ ತಮ್ಮದೇ ರೀತಿಯಲ್ಲಿ ಸಿದ್ಧವಾಗುತ್ತಿದ್ದಾರೆ.
ದಾವಣಗೆರೆಯ ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ವತಿಯಿಂದ ಕರುನಾಡ ರತ್ನ, ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಿತ್ರ "ಗಂಧದಗುಡಿ'' ಸಂಭ್ರಮ ಆಚರಣೆ ಅಕ್ಟೋಬರ್ 28ರಂದು ಮಾಡಲು ನಿರ್ಧರಿಸಲಾಗಿದೆ.
ದಾವಣಗೆರೆ ನಗರದ ವಸಂತ ಚಿತ್ರಮಂದಿರದ ಮುಂಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಪುನೀತ್ ಹಂಪನಗೌಡ್ರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10.30 ಕ್ಕೆ ಚಿತ್ರ ಪ್ರದರ್ಶನವಾಗುತ್ತಿರುವ ವಸಂತ್ ಚಿತ್ರ ಮಂದಿರದ ಮುಂದೆ ಅಪ್ಪು ಕಟೌಟ್ಗೆ 17 ಅಡಿಯ ಭಾರೀ ಗಾತ್ರದ ಬೃಹತ್ ಹೂವಿನ ಹಾರವನ್ನು ಜೆ.ಸಿ.ಬಿ ಯಂತ್ರದ ಸಹಾಯದಿಂದ ಹಾಕಲಾಗುತ್ತದೆ ಎಂದು ಹೇಳಿದರು.
ಕಟೌಟ್ ಗೆ 17 ಲೀಟರ್ ಹಾಲಿನ ಅಭಿಷೇಕ ಮಾಡಲಾಗುತ್ತದೆ. 17 ಕೆ.ಜಿ. ಸಿಹಿ ಹಂಚಲಾಗುತ್ತದೆ. ಅ. 27ರ ಗುರುವಾರರಂದು 17 ಆಟೋಗಳಿಂದ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ವಸಂತ ಚಿತ್ರಮಂದಿರದಲ್ಲಿ ರಕ್ತದಾನ ಶಿಬಿವರನ್ನು ಸಹ ಆಯೋಜಿಸಲಾಗಿದೆ. ಈ ಮೂಲಕ ಅಪ್ಪುರ ಅವರನ್ನು ಸ್ಮರಣೀಯವಾಗಿ ಸ್ಮರಿಸುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.
ಜಿಲ್ಲಾ ಗೌರವಾಧ್ಯಕ್ಷ ವಿನಯ್ ಉಪ್ಪಾರ್ ಮಾತನಾಡಿ, ವಿ.ಬಿ.ಪಿ. ಫೌಂಡೇಶನ್ನ ಹೆಚ್.ಐ.ವಿ. ಪೀಡಿತ ಮಕ್ಕಳು ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರು ಸೇರಿ 40 ಜನರಿಗೆ ಉಚಿತ ಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ವಸಂತ ಚಿತ್ರಮಂದಿರದಲ್ಲಿ ಚಪ್ಪರ ಹಾಕಿ, ನಾಸಿಕ್ ಡೋಲಿನ ವ್ಯವಸ್ಥೆಯೊಂದಿಗೆ ಪಟಾಕಿಗಳನ್ನು ಸಿಡಿಸಲಾಗುವುದು. 'ಗಂಧದ ಗುಡಿ' ಚಿತ್ರದ ಮೊದಲ ದಿನದ ಮೊದಲ ಶೋ ದಲ್ಲಿ ಡಿ.ಜೆ, ಲೈಟ್ಸ್ ಅಳವಡಿಸಿ, ಪೇಪರ್ ಶಾಟ್ಸ್ ಹೊಡೆಯಲಾಗುವುದು. "ಪುನೀತ್ಗಾಗಿ ಒಂದು ಸಸಿ ನೆಡಿ' ಎಂಬ ಘೋಷಣೆಯೊಂದಿಗೆ ಸಸಿಗಳನ್ನು ಕೂಡ ವಿತರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ, ಕೆ.ಎಸ್.ಮನು, ರಾಕೇಶ್, ಹೆಚ್. ಮಾರುತಿ, ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.


Click it and Unblock the Notifications











