ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!
ಕನ್ನಡ ಚಿತ್ರರಂಗದ ನಿರ್ಮಾಪಕರು ರೊಚ್ಚಿಗೆದ್ದಿದ್ದಾರೆ. ತಮ್ಮ ಉಳಿವಿಗಾಗಿ ಬೀದಿಗಿಳಿದ್ದಾರೆ. ತಮ್ಮ ಕಷ್ಟ ಪರಿಹಾರವಾಗುವುದಕ್ಕೆ 10 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅನೇಕ ನಿರ್ಮಾಪಕರು ಧರಣಿ ಕೂತಿದ್ದಾರೆ. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]
ಇಲ್ಲಿಯವರೆಗೂ ಸೈಲೆಂಟ್ ಆಗಿದ್ದ ನಿರ್ಮಾಪಕರು ಇದ್ದಕಿದ್ದ ಹಾಗೆ ಸಿಡಿದೇಳುವುದಕ್ಕೆ ಕನ್ನಡ ಚಿತ್ರರಂಗದ 'ಸ್ಟಾರ್ ಹೀರೋಗಳು' ಕಾರಣ ಅಂದ್ರೆ ನೀವು ನಂಬ್ಲೇಬೇಕು. ಅದ್ರಲ್ಲೂ ನಿರ್ಮಾಪಕರ ಮೇನ್ ಟಾರ್ಗೆಟ್ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್ ಅನ್ನೋದು ಈಗ ಜಗಜ್ಜಾಹೀರಾಗಿರುವ ವಿಷಯ. [ಸುದೀಪ್, ರಮೇಶ್, ಗಣೇಶ್ ಗೆ ನಿರ್ಬಂಧ ಸರಿಯೇ?]
ನಿರ್ಮಾಪಕರಿಲ್ಲದೆ ಸಿನಿಮಾಗಳಿಲ್ಲ, ಸಿನಿಮಾಗಳಿಲ್ಲದೆ ನಾಯಕರು ಇಲ್ಲ! ಹೀಗಿರುವಾಗ ನಾಯಕ ನಟರ ವಿರುದ್ಧ ನಿರ್ಮಾಪಕರು ಸಮರ ಸಾರಿರುವುದಕ್ಕೆ ಅನೇಕ ಕಾರಣಗಳಿವೆ. ಅದೆಲ್ಲವನ್ನೂ ಒಂದೊಂದಾಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ನಿರ್ಮಾಪಕರ ಸಮಸ್ಯೆ ನೂರಾರು....
ಕಾರ್ಮಿಕರ ಹಿತದೃಷ್ಟಿ, ಕಲಾವಿದರ ಕಾಲ್ ಶೀಟ್, ಸೆನ್ಸಾರ್ ಸಮಸ್ಯೆ, ಚಿತ್ರಮಂದಿರಗಳ ಕೊರತೆ ಎಕ್ಸೆಟ್ರಾ ಎಕ್ಸೆಟ್ರಾ...ಹೀಗೆ, ಸಿನಿಮಾ ಶುರುವಾದಾಗಿನಿಂದ ಹಿಡಿದು, ತೆರೆಗೆ ಬರುವವರೆಗೂ ನಿರ್ಮಾಪಕರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಾರೆ. ಆದ್ರೆ, ಸಿನಿಮಾ ರಿಲೀಸ್ ಆದ ಮೇಲೆ ಚಿತ್ರಗಳನ್ನ ಕೊಂಡುಕೊಳ್ಳುವುದಕ್ಕೆ ವಾಹಿನಿಗಳು ಮುಂದೆ ಬರುವುದಿಲ್ಲ. ಇರುವ ಥಿಯೇಟರ್ ಗಳಲ್ಲಿ ಒಂದು ಸಿನಿಮಾ ಒಂದು ವಾರ ಓಡಿದ್ರೆ ಹೆಚ್ಚು. ಅದ್ರಲ್ಲಿ ಲಾಭಕ್ಕಿಂತ ಲಾಸೇ ಜಾಸ್ತಿ. ಇದ್ದ ಮನೆಯನ್ನ ಅಡವಿಟ್ಟು ಬಂಡವಾಳ ಹಾಕುವ ನಿರ್ಮಾಪಕರ ಕಷ್ಟ ಯಾರಿಗೂ ಗೊತ್ತಿಲ್ಲ ಅಂತ ಅನೇಕ ನಿರ್ಮಾಪಕರು ಗೋಳಾಡುತ್ತಾರೆ. [ಕನ್ನಡ ಚಿತ್ರ ನಿರ್ಮಾಪಕರ ಮೇಲೆ ಬಿತ್ತು ಕ್ರಿಮಿನಲ್ ಕೇಸ್]

ಬರುವ ಲಾಭ ಅಂದ್ರೆ ಪ್ರಸಾರ ಹಕ್ಕುಗಳು
ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಪಕರು ಸಿನಿಮಾ ಮಾಡಿರ್ತಾರೆ. ಥಿಯೇಟರ್ ಕೊರತೆಯಿಂದ ಅನೇಕ ಚಿತ್ರಗಳು ವಾರದಲ್ಲಿಯೇ ಎತ್ತಂಗಡಿ ಆಗುತ್ತಿವೆ. ಹೀಗಿರುವಾಗ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಸ್ ತೆಗೆಯುವುದಕ್ಕೆ ಇರುವ ಒಂದೇ ದಾರಿ ಸ್ಯಾಟೆಲೈಟ್ ಹಕ್ಕುಗಳ ಮಾರಾಟ. [ಇರೋ ಒಂದಷ್ಟು ಥಿಯೇಟರಿಗಾಗಿ ನಮ್ ನಮ್ಮಲ್ಲೇ ಗುದ್ದಾಟ! ]

ಸ್ಯಾಟೆಲೈಟ್ ಹಕ್ಕುಗಳನ್ನ ಕೊಂಡುಕೊಳ್ಳೋರೇ ಇಲ್ಲ!
ಕನ್ನಡ ಟಿವಿ ಚಾನೆಲ್ ಗಳು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಗೆ ಮಣೆ ಹಾಕುತ್ತಿವೆ ಹೊರತು ಚಿತ್ರಗಳನ್ನ ಕೊಂಡುಕೊಳ್ಳುತ್ತಾಯಿಲ್ಲ. ವರ್ಷಕ್ಕೆ 150ಕ್ಕೂ ಹೆಚ್ಚು ಚಿತ್ರಗಳ ಪ್ರಸಾರ ಹಕ್ಕುಗಳು ಮಾರಾಟವಾಗದೇ ಹಾಗೇ ಇವೆ. ದೊಡ್ಡ ನಟರ ಸಿನಿಮಾಗಳು ದಾಖಲೆ ಮೊತ್ತಕ್ಕೆ ಸೇಲ್ ಆಗುತ್ತವೆ ಹೊರತು, ಬಾಕಿ ಸಿನಿಮಾಗಳನ್ನ ಕೇಳೋರೂ ಇಲ್ಲ!

ವಾಹಿನಿಗಳ ಕಡೆ ಮುಖ ಮಾಡುತ್ತಿರುವ ಸ್ಟಾರ್ ನಟರು
ವಾಹಿನಿಗಳಿಗೆ ಸಿನಿಮಾ ಬೇಕಾಗಿಲ್ಲ. ಆದರೆ ನಟರುಗಳು ಮಾತ್ರ ಬೇಕು. ಸ್ಟಾರ್ ನಟರಿಂದ ರಿಯಾಲಿಟಿ ಶೋಗಳನ್ನ ಹೋಸ್ಟ್ ಮಾಡುವ ಮೂಲಕ ವಾಹಿನಿಗಳ ಟಿ.ಆರ್.ಪಿ ಹೆಚ್ಚಾಗುತ್ತಿದೆ ಹೊರತು ಕನ್ನಡ ಚಿತ್ರರಂಗಕ್ಕೆ ಯಾವುದೇ ಲಾಭ ಆಗುತ್ತಿಲ್ಲ. [ಪ್ರಮುಖ ಕನ್ನಡದ ನಟರ ವಿರುದ್ದ ತಿರುಗಿಬಿದ್ದ ನಿರ್ಮಾಪಕರು]

ಸ್ಟಾರ್ ನಟರಿಗೂ ರಿಯಾಲಿಟಿ ಶೋ ಗೀಳು!?
ಕನ್ನಡ ನಿರ್ಮಾಪಕರು ಹೇಳುವ ಪ್ರಕಾರ ಸ್ಟಾರ್ ನಟರಿಗೆ ರಿಯಾಲಿಟಿ ಶೋಗಳ ಗೀಳು ಅಂಟಿಕೊಂಡಿದೆ. ಕೋಟಿ ಲೆಕ್ಕದಲ್ಲಿ ಇಡೀ ಕಾರ್ಯಕ್ರಮಕ್ಕೆ ವಾಹಿನಿ, ಸ್ಟಾರ್ ನಟರನ್ನ ಬುಕ್ ಮಾಡುತ್ತೆ. ಬರೀ ಶೋವೊಂದಕ್ಕೆ 4-5 ಕೋಟಿ ಬಾಚುವಾಗ ಯಾರು ತಾನೆ ಬೇಡ ಅಂತಾರೆ.

ಕಿಚ್ಚ ಸುದೀಪ್ ವಿರುದ್ಧ ಗರಂ
ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದ ಕಿಚ್ಚ ಸುದೀಪ್, ವಾಹಿನಿ ಟಿ.ಆರ್.ಪಿಯನ್ನ ಹೆಚ್ಚಿಸಿಕೊಟ್ಟು, ಜನಪ್ರಿಯತೆಯ ಉತ್ತುಂಗಕ್ಕೆ ತಲುಪಿದರು. 'ಬಿಗ್ ಬಾಸ್' ಕಾರ್ಯಕ್ರಮ ರಾತ್ರಿ ಪ್ರಸಾರವಾಗುತ್ತಿದ್ದರಿಂದ ಸೆಕೆಂಡ್ ಶೋಗೆ ಜನ ಥಿಯೇಟರ್ ಕಡೆ ಬರುತ್ತಿರಲಿಲ್ಲ ಅನ್ನೋದು ಕೆಲ ನಿರ್ಮಾಪಕರ ಆರೋಪ.

ಗಣೇಶ್, ರಮೇಶ್ ವಿರುದ್ದವೂ ಕಿಡಿ ಕಿಡಿ
ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿದ್ದ 'ಸೂಪರ್ ಮಿನಿಟ್' ಮತ್ತು ರಮೇಶ್ ಅರವಿಂದ್ ಹೋಸ್ಟ್ ಆಗಿದ್ದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಗಳೂ ಜನಪ್ರಿಯವಾಗಿತ್ತು. ಈ ಕಾರ್ಯಕ್ರಮಗಳೆಲ್ಲಾ ಪ್ರಸಾರವಾಗುತ್ತಿದ್ದು ಪ್ರೈಮ್ ಟೈಮ್ ( ರಾತ್ರಿ 8 ರಿಂದ 10 ಗಂಟೆ) ಸಮಯದಲ್ಲಿ. ಹೀಗಾಗಿ ಸೆಕೆಂಡ್ ಶೋ ಕಲೆಕ್ಷನ್ ಡಲ್ ಆಗುತ್ತಿದೆ ಅನ್ನುತ್ತಾರೆ ನಿರ್ಮಾಪಕರು. [ಸುದೀಪ್, ರಮೇಶ್ ಅರವಿಂದ್ ನಿರ್ಬಂಧಕ್ಕೆ ಪ್ರತಿಕ್ರಿಯೆ]

ಸೃಜನ್ - ಯೋಗಿ ವಿರುದ್ಧ ಬೇಸರ
ಸುದೀಪ್, ಗಣೇಶ್ ಮತ್ತು ರಮೇಶ್ ರಂತಹ ಸ್ಟಾರ್ ಸಿನಿಮಾಗಳ ಪ್ರಸಾರ ಹಕ್ಕುಗಳು ಸೇಲ್ ಆಗುತ್ತೆ. ಆದ್ರೆ, ಬಾಕಿ ನಟರ ಪಾಡೇನು? ನಟ ಸೃಜನ್ ಲೋಕೇಶ್, ಲೂಸ್ ಮಾದ ಯೋಗಿ ಕೂಡ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಆದ್ರೆ, ಅವರುಗಳ ಸಿನಿಮಾಗಳನ್ನ ವಾಹಿನಿಗಳು ಕೊಂಡುಕೊಳ್ಳುತ್ತಾಯಿಲ್ಲವಂತೆ. [ಜೀ ಕನ್ನಡ ಬಿಗ್ ಶೋ 'ಲೈಫ್ ಸೂಪರ್ ಗುರೂ' ಶುರು]

'ಆರ್ಯನ್' ಚಿತ್ರಕ್ಕೆ ದೊಡ್ಡ ಹೊಡೆತ
'ಆರ್ಯನ್' ಸಿನಿಮಾ ರಿಲೀಸ್ ಆದ ಹೊತ್ತಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಜನಪ್ರಿಯವಾಗಿತ್ತು. ಅದರಲ್ಲಿ ಶಿವರಾಜ್ ಕುಮಾರ್ ಎಪಿಸೋಡ್ ಕೂಡ ಪ್ರಸಾರವಾಗಿತ್ತು. ಆಗ ಜನ ಶಿವಣ್ಣನನ್ನ ಟಿವಿಯಲ್ಲಿ ನೋಡಿದರೆ ಹೊರತು, ಥಿಯೇಟರ್ ಗೆ ಬರಲೇ ಇಲ್ಲ ಅಂತ 'ಆರ್ಯನ್' ಕಲೆಕ್ಷನ್ ರಿಪೋರ್ಟ್ ಮತ್ತು ಕಾರ್ಯಕ್ರಮದ ರೇಟಿಂಗ್ ಪಟ್ಟಿಯಿಟ್ಟುಕೊಂಡು ನಿರ್ಮಾಪಕ ಕೃಷ್ಣೇಗೌಡ ವಾದ ಮಂಡಿಸುತ್ತಾರೆ.

ಪ್ರಸಾರ ಹಕ್ಕುಗಳ ಕುರಿತಾಗಿ ನಟರು ಮಾತೇ ಆಡಲ್ಲ.!
ರಿಯಾಲಿಟಿ ಶೋಗಳಲ್ಲಿ ಮಾತ್ರ ಭಾಗವಹಿಸುವ ನಟರು, ಪ್ರಸಾರ ಹಕ್ಕುಗಳನ್ನ ಕೊಂಡುಕೊಳ್ಳಬೇಕು ಅಂತ ವಾಹಿನಿಯವರ ಜೊತೆ ಮಾತನಾಡುವುದಿಲ್ಲ. ಕಲಾವಿದರು ನಿರ್ಮಾಪಕರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ. ಕಲಾವಿದರು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ಅದಕ್ಕೆ ನಿರ್ಮಾಪಕರು ಕಾರಣ ಅಂತ ಸ್ಟಾರ್ ನಟರ ವಿರುದ್ಧ ನಿರ್ಮಾಪಕರು ರೊಚ್ಚಿಗೆದ್ದಿದ್ದಾರೆ. [ಈಟಿವಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಸೂಪರ್ ಶೋ]

ಮೌನಕ್ಕೆ ಶರಣಾದ ಸ್ಟಾರ್ ನಟರು
ಕಲಾವಿದರ ಸಹಕಾರ ಬೇಕು ಅಂತ ಅನೇಕ ಬಾರಿ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಸಂಪರ್ಕಿಸಿದರೂ, ಕಲಾವಿದರು ಪಲಾಯನ ವಾದ ಅನುಸರಿಸುತ್ತಿದ್ದಾರಂತೆ. ''ನಾವು ನೇರವಾಗಿ ಕೆಲ ಆರ್ಟಿಸ್ಟ್ ಗಳ ಹತ್ತಿರ ಮಾತನಾಡಿದ್ವಿ. ಎರಡ್ಮೂರು ತಿಂಗಳು ಅಗ್ರೀಮೆಂಟ್ ಮಾಡಿಕೊಂಡಿದ್ದೀವಿ. ಆಮೇಲೆ 'ಮಾಡಲ್ಲ' ಅಂತ ಹೇಳಿದರು. ನಾವು ಸುಮಾರು ದಿನ ಕಾದ್ವಿ. ಆದ್ರೆ, ಯಾರೂ ರೆಸ್ಪಾನ್ಡ್ ಮಾಡ್ಲಿಲ್ಲ.'' ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಹೇಳುತ್ತಾರೆ.

ಕಲಾವಿದರ ಸಂಘ ಕ್ಯಾರೆ ಅಂದಿಲ್ಲ!
ನಿರ್ಮಾಪಕರ ಹಿತದೃಷ್ಟಿ ಕಲಾವಿದರ ಸಂಘಕ್ಕೆ ಬೇಕಾಗಿಲ್ಲ. ಯಾವ ನಟರೂ ನಿರ್ಮಾಪಕರ ಪರ ನಿಲ್ಲುತ್ತಿಲ್ಲ. 100 ರಲ್ಲಿ 10 ನಿರ್ಮಾಪಕರು ಸೇಫ್ ಇರಬಹುದು. ಆದ್ರೆ, ಬಾಕಿ ನಿರ್ಮಾಪಕರು ಎಲ್ಲಿ ಹೋಗಬೇಕು. ಸ್ಟಾರ್ ನಟರ ಸಿನಿಮಾಗಳೂ ಈಗೀಗ ಮೂರು ವಾರ ಓಡಿದರೆ ಹೆಚ್ಚು. ಹೀಗಾಗಿ ನಿರ್ಮಾಪಕರ ಗತಿಯೇನು? ಅನ್ನೋದು ಈಗ ಎದ್ದಿರುವ ಪ್ರಶ್ನೆ.

ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು!
ಟಿವಿ ಚಾನೆಲ್ ಗಳಿಂದ ಕನ್ನಡ ಚಿತ್ರರಂಗಕ್ಕೆ ಲಾಭವಾಗುತ್ತಿಲ್ಲ. ಹೀಗಾಗಿ, ನಟರೂ ಕೂಡ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು. ಇದಕ್ಕೆ ನಟರು ಸ್ಪಂದಿಸದಿದ್ದರೆ ಪ್ರತಿಭಟನೆಯನ್ನ ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಲು ನಿರ್ಮಾಪಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರವಾಗಿದೆ.

ಮುಂದಕ್ಕೆ ಬರುತ್ತಿವೆ ಸಾಲು ಸಾಲು ರಿಯಾಲಿಟಿ ಶೋಗಳು
ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರಾಗಿರುವ 'ಡ್ಯಾನ್ಸಿಂಗ್ ಸ್ಟಾರ್' ಇನ್ನೂ ಪ್ರಸಾರವಾಗುತ್ತಿದೆ. 'ಬಿಗ್ ಬಾಸ್' ಹೊಸ ಸೀಸನ್ ಬಗ್ಗೆ ಪ್ಲಾನಿಂಗ್ ನಡೆಯುತ್ತಿವೆ. 'ವೀಕೆಂಡ್ ವಿತ್ ರಮೇಶ್' ಸೀಸನ್ 2 ಶುರುಮಾಡುವುದಕ್ಕೆ ಜೀ ಕನ್ನಡ ವಾಹಿನಿ ಮನಸ್ಸು ಮಾಡಿದ್ಯಂತೆ. ಇನ್ನೂ 'ಸೂಪರ್ ಮಿನಿಟ್' ಎರಡನೇ ಆವೃತ್ತಿಯ ನೀಲಿ ನಕ್ಷೆ ಕೂಡ ತಯಾರಾಗುತ್ತಿದೆ. ಎಲ್ಲದರ ಮಧ್ಯೆ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಾಧಿಪತಿ' ಮತ್ತೆ ಶುರುವಾಗುತ್ತಾ? ಗೊತ್ತಿಲ್ಲ. ಈ ಎಲ್ಲಾ ಕಾರ್ಯಕ್ರಮಗಳು ಮತ್ತೆ ಶುರುವಾದರೆ 'ಸಿನಿಮಾ ಕಲೆಕ್ಷನ್ ಗತಿ ಅಧೋಗತಿ' ಅಂತ ಪ್ರತಿಭಟನೆಗಿಳಿದಿದ್ದಾರೆ ನಿರ್ಮಾಪಕರು.

ಈಗಲಾದರೂ ಸ್ಪಂದಿಸುತ್ತಾರಾ ಕಲಾವಿದರು?
ವರ್ಷದಿಂದ ನಡೆಯುತ್ತಿರುವ ಈ ತಿಕ್ಕಾಟ ಇನ್ನೂ ಬಗೆಹರಿದಿಲ್ಲ. ಕಲಾವಿದರೂ ಈವರೆಗೂ ಸ್ಪಂದಿಸಿಲ್ಲ. ಈಗ ನಿರ್ಮಾಪಕರು ಬೀದಿಗಿಳಿದಿರುವುದರಿಂದ ಕಲಾವಿದರು ಸಹಾಯ ಹಸ್ತ ಕೈ ಚಾಚುತ್ತಾರೋ, ಇಲ್ವೋ ಕಾದುನೋಡಬೇಕು.


Click it and Unblock the Notifications











