ಪುಷ್ಪ ಚಿತ್ರಕ್ಕಾಗಿ ಗೆದ್ದ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ತೆಲುಗು ಸಂಗೀತ ನಿರ್ದೇಶಕ
67ನೇ ಫಿಲ್ಮ್ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ನಿನ್ನೆಯಷ್ಟೇ ( ಅಕ್ಟೋಬರ್ 9 ) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿತು. 2020 ಹಾಗೂ 2021ರಲ್ಲಿ ಬಿಡುಗಡೆಗೊಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಿಗೆ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಕನ್ನಡದ ಪರ ಆಕ್ಟ್ 1978 ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗೆದ್ದಿತು. ಆಕ್ಟ್ 1978 ಅತ್ಯುತ್ತಮ ಚಿತ್ರ, ಯಜ್ಞಾ ಶೆಟ್ಟಿ ಅತ್ಯುತ್ತಮ ನಟಿ, ಬಡವ ರಾಸ್ಕಲ್ ಸಿನಿಮಾಗಾಗಿ ಧನಂಜಯ್ಗೆ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಪಡೆದರು.
ಈ ಕಾರ್ಯಕ್ರಮದಲ್ಲಿ ಕಳೆದ ವರ್ಷ ಇಹ ಲೋಕ ತ್ಯಜಿಸಿದ ಪುನೀತ್ ರಾಜ್ಕುಮಾರ್ ಅವರ ಸಾಧನೆ ಹಾಗೂ ಸೇವೆಯನ್ನು ಪ್ರಶಂಸಿಸಿ ಜೀವಮಾನ ಶ್ರೇಷ್ಟ ಸಾಧನೆ ಪ್ರಶಸ್ತಿ ( ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ) ನೀಡಲಾಯಿತು. ಇನ್ನು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಆಗಮಿಸಿದ್ದರು. ಅಲ್ಲದೇ ಪ್ರಶಸ್ತಿ ಗೆದ್ದ ಹಲವರು ತಮ್ಮ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿದರು.
ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ಕಲಾವಿದರೂ ಸಹ ತಾವು ಗೆದ್ದ ಪ್ರಶಸ್ತಿಯನ್ನು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು ಹಾಗೂ ಕನ್ನಡ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲಿಯೂ ತೆಲುಗಿನ ಎವರ್ಗ್ರೀನ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ತಾವು ಗೆದ್ದ ಪ್ರಶಸ್ತಿಯನ್ನು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೇದಿಕೆ ಮೇಲೆ ಘೋಷಿಸಿದ ದೇವಿ ಶ್ರೀ ಪ್ರಸಾದ್
ಇನ್ನು ಪುಷ್ಪ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ 'ಅತ್ಯುತ್ತಮ ಮ್ಯೂಸಿಕ್ ಆಲ್ಬಮ್' ಪ್ರಶಸ್ತಿ ಸ್ವೀಕರಿಸಿದ ದೇವಿ ಶ್ರೀ ಪ್ರಸಾದ್ ಈ ವಿಶೇಷ ಪ್ರಶಸ್ತಿಯನ್ನು ನನ್ನಣ್ಣ ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುತ್ತೇನೆ ಎಂದು ವೇದಿಕೆ ಮೇಲೆಯೇ ಅವಾರ್ಡ್ ಹಿಡಿದು ಘೋಷಿಸಿದರು. ದೇವಿ ಶ್ರೀ ಪ್ರಸಾದ್ ಅವರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ದೇವಿ ಶ್ರೀ ಪ್ರಸಾದ್ ಅವರ ಮಾತುಗಳಿಗೆ ಅಪ್ಪು ಅಭಿಮಾನಿಗಳು ಮನ ಸೋತಿದ್ದಾರೆ.

ಕನ್ನಡದಲ್ಲೇ ಮಾತನಾಡಿದ ಡಿಎಸ್ಪಿ
ಇನ್ನು ಪ್ರಶಸ್ತಿ ಸ್ವೀಕರಿಸಿ ಮಾತನ್ನು ಆರಂಭಿಸಿದ ದೇವಿ ಶ್ರೀ ಪ್ರಸಾದ್ 'ಎಲ್ಲರಿಗೂ ನನ್ನ ನಮಸ್ಕಾರಗಳು, ಚೆನ್ನಾಗಿದೀರ ಬೆಂಗಳೂರು, ತುಂಬಾ ಚೆನ್ನಾಗಿದ್ದೀರ' ಎಂದು ಕನ್ನಡದಲ್ಲಿಯೇ ಹೇಳಿದರು. ಮಾತನ್ನು ಮುಂದುವರಿಸಿದ ಡಿಎಸ್ಪಿ 'ಈ ಪ್ರಶಸ್ತಿಯನ್ನು ನನ್ನ ಆತ್ಮೀಯ ಸಹೋದರ ಶ್ರೀ ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುತ್ತೇನೆ' ಎಂದು ಕನ್ನಡದಲ್ಲಿಯೇ ಮಾತನಾಡಿದರು.

ರಾಜ್ ಫ್ಯಾಮಿಲಿ ಹೊಗಳಿದ ರಾಕ್ಸ್ಟಾರ್
ಇನ್ನೂ ಮುಂದುವರೆದು ಮಾತನಾಡಿದ ರಾಕ್ಸ್ಟಾರ್ ದೇವಿ ಶ್ರೀ ಪ್ರಸಾದ್ ಈ ಹಿಂದೆ ರಾಜ್ಕುಮಾರ್ ಕುಟುಂಬ ತನ್ನ ಮೊದಲ ಕನ್ನಡ ಚಿತ್ರದ ಆಡಿಯೋ ಬಿಡುಗಡೆಗೆ ಬೆಂಬಲ ನೀಡಿದ್ದನ್ನು ನೆನೆದಿದ್ದಾರೆ. ರಾಜ್ಕುಮಾರ್, ಶಿವಣ್ಣ ಹಾಗೂ ಪುನೀತ್ ರಾಜ್ಕುಮಾರ್ ಇಷ್ಟು ಸರಳತೆಯಿಂದ ಇರುತ್ತಾರೆ ಎಂದುಕೊಂಡಿರಲಿಲ್ಲ ಎಂದು ವೇದಿಕೆಯಲ್ಲೇ ತಲೆಬಾಗಿ ಕೃತಜ್ಞತೆ ಸಲ್ಲಿಸಿದರು.

ಅಪ್ಪು ಸಮಾಧಿಗೂ ಬೇಟಿ
ಹೀಗೆ ನಿನ್ನೆಯ ಕಾರ್ಯಕ್ರಮದಲ್ಲಿ ಅಪ್ಪುವನ್ನು ಹೊಗಳಿದ್ದ ದೇವಿ ಶ್ರೀ ಪ್ರಸಾದ್ ಇಂದು ( ಅಕ್ಟೋಬರ್ 10 ) ಅಪ್ಪು ಸಮಾಧಿಗೂ ಭೇಟಿ ನೀಡಿದ್ದಾರೆ. ದೇವಿ ಶ್ರೀ ಪ್ರಸಾದ್ ಅಪ್ಪು ಸಮಾಧಿಗೆ ಭೇಟಿ ನೀಡಿ ಕೈಮುಗಿಯುತ್ತಿರುವ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿವೆ.


Click it and Unblock the Notifications











