ಸಂತೋಷ್ ಚಿತ್ರಮಂದಿರಕ್ಕೆ ಬ್ರಹ್ಮಾಸ್ತ್ರ ಆಗಮನ; ಕೇವಲ ಎರಡೇ ವಾರಕ್ಕೆ ಅಣ್ಣಾವ್ರ ಮೊಮ್ಮಗನ ಚಿತ್ರ ಔಟ್!
ನಾಳೆ ( ಸೆಪ್ಟೆಂಬರ್ 9 ) ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯದ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಚಿತ್ರ ತೆರೆ ಕಾಣುತ್ತಿರುವ ಕಾರಣ ಧೀರೇನ್ ರಾಮ್ ಕುಮಾರ್ ಅಭಿನಯದ ಶಿವ 143 ಚಿತ್ರ ಇಂದಿಗೆ ತನ್ನ ಓಟವನ್ನು ಕೊನೆಗೊಳಿಸಲಿದೆ.
ಕಳೆದ ಆಗಸ್ಟ್ 26ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಧೀರೇನ್ ರಾಮ್ ಕುಮಾರ್ ಹಾಗೂ ಮಾನ್ವಿತಾ ಕಾಮತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಚಿತ್ರ ಶಿವ 143 ಇಂದಿಗೆ ( ಸೆಪ್ಟೆಂಬರ್ 8 ) ಕೊನೆಯ ಪ್ರದರ್ಶನಗಳನ್ನು ಕಾಣಲಿದೆ. ಈಗಾಗಲೇ ಶಿವ 143 ಚಿತ್ರ ರಾಜ್ಯದ ಎಲ್ಲಾ ಕಡೆ ತನ್ನ ಓಟವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದ್ದು, ಸಂತೋಷ್ ಚಿತ್ರಮಂದಿರದಲ್ಲಿ ಎರಡನೇ ವಾರದ ಪ್ರದರ್ಶನ ಕಾಣುತ್ತಿತ್ತು.
ಆದರೆ ಇದೀಗ ಬ್ರಹ್ಮಾಸ್ತ್ರ ಸಿನಿಮಾ ತೆರೆ ಕಾಣುತ್ತಿರುವ ಕಾರಣ ಶಿವ 143 ಚಿತ್ರವನ್ನು ಸಂತೋಷ್ ಚಿತ್ರಮಂದಿರದಿಂದ ತೆಗೆಯಲಾಗ್ತಿದೆ. ಬ್ರಹ್ಮಾಸ್ತ್ರ ಕನ್ನಡ ವರ್ಷನ್ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

ಕೇವಲ 14 ದಿನಕ್ಕೆ ಓಟ ನಿಲ್ಲಿಸಿದ ಶಿವ 143
ಆಗಸ್ಟ್ 26ರಂದು ಬಿಡುಗಡೆಯಾಗಿದ್ದ ಅಣ್ಣಾವ್ರ ಮೊಮ್ಮಗ ಧೀರೆನ್ ರಾಮ್ ಕುಮಾರ್ ಅವರ ಶಿವ 143 ಇಂದು 14 ದಿನಗಳನ್ನು ಪೂರೈಸಿದ್ದು, ಇದೇ ದಿನ ತನ್ನ ಓಟವನ್ನು ಅಂತ್ಯಗೊಳಿಸಿದೆ. ಈ ಮೂಲಕ ಶಿವ 143 2 ವಾರಕ್ಕೆ ತನ್ನ ಓಟವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ಮೂಲಕ ಚಿತ್ರ ನಿರೀಕ್ಷಿಸಿದ ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ.

ರವಿ ಬೋಪಣ್ಣ ಕೂಡ ಅಷ್ಟಕ್ಕಷ್ಟೇ
ಇನ್ನು ಶಿವ 143 ಸಿನಿಮಾಗೂ ಮುನ್ನ ಇದೇ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಕೂಡ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಾಣಲಿಲ್ಲ. ಸದ್ಯ ಬ್ರಹ್ಮಾಸ್ತ್ರ ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರದ ಮೇಲಿರುವ ಜನರ ನಿರ್ಲಕ್ಷ್ಯ ಮತ್ತು ಅಡ್ವಾನ್ಸ್ ಬುಕಿಂಗ್ ಗಮನಿಸಿದರೆ ಈ ಚಿತ್ರವೂ ಸಹ ಹೆಚ್ಚು ದಿನ ಉಳಿಯುವುದಿಲ್ಲ ಎನಿಸುತ್ತಿದೆ.

ನರ್ತಕಿ ಕೂಡ ರೀ ಓಪನ್
ಇನ್ನು ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಎಂದ ಕೂಡಲೇ ಥಟ್ಟನೆ ತಲೆಗೆ ಬರುವ ಹೆಸರುಗಳಲ್ಲಿ ಸಂತೋಷ್ ಮತ್ತು ನರ್ತಕಿ ಸೇರಿವೆ. ಈ ಪೈಕಿ ಈಗಾಗಲೇ ಸಂತೋಷ್ ಚಿತ್ರಮಂದಿರ ರೀ ಓಪನ್ ಆಗಿದ್ದರೆ, ನರ್ತಕಿ ಚಿತ್ರಮಂದಿರ ಪುನೀತ್ ರಾಜ್ ಕುಮಾರ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಚಿತ್ರದ ಮೂಲಕ ಮತ್ತೆ ಆರಂಭವಾಗುತ್ತಿದೆ. ಲಕ್ಕಿ ಮ್ಯಾನ್ ಚಿತ್ರ ನಾಳೆ ( ಸೆಪ್ಟೆಂಬರ್ 9 ) ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.

ಧೀರೆನ್ ಮುಂದಿನ ಚಿತ್ರ ಯಾವುದು?
ಸದ್ಯ ಶಿವ 143 ಸಿನಿಮಾ ಮೂಲಕ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲು ಸಾಧ್ಯವಾಗದ ಧೀರೇನ್ ರಾಮ್ ಕುಮಾರ್ ಅಭಿನಯದ ಎರಡನೇ ಚಿತ್ರಕ್ಕೆ ಜೇಮ್ಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣವಿರಲಿದೆ. ಕಿಶೋರ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಎರಡನೇ ಚಿತ್ರಕ್ಕೆ ಬಡವ ರಾಸ್ಕಲ್ ಖ್ಯಾತಿಯ ಶಂಕರ್ ಗುರು ನಿರ್ದೇಶನವಿರಲಿದ್ದು, ಇನ್ನೂ ಸಹ ಟೈಟಲ್ ಇಟ್ಟಿಲ್ಲ.


Click it and Unblock the Notifications











