'ಕ್ಷತ್ರಿಯ' ಚಿರಂಜೀವಿ ಸರ್ಜಾಗೆ ಸಹೋದರ ಧ್ರುವ ಸರ್ಜಾ ಸಾಥ್
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಸಿನಿಮಾ ಒಂದರ ಹಿಂದೆ ಒಂದರಂತೆ ಸೆಟ್ಟೇರುತ್ತಲೇ ಇದೆ. ಸಿಂಗ, ಖಾಕಿ, ಜುಗಾರಿ ಕ್ರಾಸ್, ರಣಂ ಅಂತಹ ಸಿನಿಮಾಗಳು ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಹೀಗಿರುವಾಗಲೇ ಮತ್ತೊಂದು ಹೊಸ ಸಿನಿಮಾಗೆ ಚಿರು ಸರ್ಜಾ ಚಾಲನೆ ನೀಡಿದ್ದಾರೆ.
ಹೌದು, ಅನಿಲ್ ಮಂಡ್ಯ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ 'ಕ್ಷತ್ರಿಯ'ಗೆ ಚಿರು ಸರ್ಜಾ ನಾಯಕನಾಗಿದ್ದು, ಮಲ್ಲೇಶ್ವರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ.
ಅಣ್ಣನ ಹೊಸ ಚಿತ್ರದ ಮೊದಲ ದೃಶ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಮಾಡಿದರು. ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕ್ಯಾಮೆರಾಗೆ ಚಾಲನೆ ನೀಡಿದರು.

ಪಿ ವಾಸು, ದಿನಕರ್ ತೂಗುದೀಪ, ತರುಣ್ ಸುಧೀರ್, ಮುಂಗಾರುಮಳೆ ಕೃಷ್ಣ, ಸಂತೋಷ್ ಆನಂದ್ ರಾಮ್ ಅಂತಹ ನಿರ್ದೇಶಕರ ಬಳಿ ಕೆಲಸ ಮಾಡಿರುವ ಅನಿಲ್ ಮಂಡ್ಯ ಒಂದೊಳ್ಳೆ ಕಮರ್ಷಿಯಲ್ ವಿಷ್ಯವನ್ನಿಟ್ಟು ಕ್ಷತ್ರಿಯ ಮಾಡಲು ಮುಂದಾಗಿದ್ದಾರೆ.
ಇನ್ನುಳಿದಂತೆ ಸಂಹಾರ ಸಿನಿಮಾ ನಿರ್ಮಿಸಿದ್ದ ತಂಡವೇ ಈ ಚಿತ್ರಕ್ಕೂ ಬಂಡವಾಳ ಹಾಕುತ್ತಿದೆ. ಧರ್ಮವಿಶ್ ಸಂಗೀತ ಒದಗಿಸುತ್ತಿದ್ದಾರೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸುತ್ತಿದ್ದಾರೆ. ರವಿವರ್ಮ ಸಾಹಸ ನಿರ್ದೇಶನ ಹಾಗೂ ಚೇತನ್ ಬಹದ್ದೂರ್ ಸಂಭಾಷಣೆ ಬರೆಯುತ್ತಿದ್ದಾರೆ.

ಹಿರಿಯ ನಟ ದೇವರಾಜ್, ಸುಧಾರಾಣಿ, ಸಾಧು ಕೋಕಿಲಾ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಮುಂಬೈನ ಖ್ಯಾತ ಖಳನಟರೊಬ್ಬರು ಮೊದಲ ಸಲ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರಂತೆ. ಸದ್ಯ ನಾಯಕಿಯ ಹುಡುಕಾಟದಲ್ಲಿರುವ ಕ್ಷತ್ರಿಯ ತಂಡ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಾಯಕಿ ಸಂಜನಾ ಅವರನ್ನ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆಯಂತೆ.


Click it and Unblock the Notifications











