ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ; ಕುಟುಂಬದವರಿಂದ ಪೂಜೆ
ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ನಿಧನಹೊಂದಿ ಐದೂವರೆ ತಿಂಗಳಾಗಿದೆ. ಧ್ರುವ ಸರ್ಜಾ ತೋಟದ ಮನೆಯಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯ ಕ್ರಿಯೆ ನೆರವೇರಿಸಲಾಗಿದೆ. ಇದೀಗ ಇದೆ ಸ್ಥಳದಲ್ಲಿ ಸಮಾಧಿ ನಿರ್ಮಾಣ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.
ಇಂದು (ನವೆಂಬರ್ 28) ಚಿರು ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಸಹೋದರ ಧ್ರುವ ಸರ್ಜಾ ಅವರಿಂದ ಚಿರು ಸಮಾಧಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈ ಸಮಯದಲ್ಲಿ ಸರ್ಜಾ ಕುಟುಂಬದವರೆಲ್ಲರೂ ಭಾಗಿಯಾಗಿದ್ದರು.

ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಧ್ರುವ ತಂದೆ-ತಾಯಿ ಅಜ್ಜಿ ಲಕ್ಷ್ಮೀದೇವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಧ್ರುವ ಸರ್ಜಾ ಅವರೆ ಮುಂದೆ ನಿಂತು ಶಂಕುಸ್ಥಾಪನೆಯ ಕಾರ್ಯವನ್ನು ನೆರವೇರಿಸಿದ್ದಾರೆ.
ನಟ ಚಿರಂಜೀವಿ ಸರ್ಜಾ ಜೂನ್ 7ರಂದು ಹೃದಯಾಘಾತದಿಂದ ಸಾವಿನಪ್ಪಿದ್ದರು. ಚಿರಂಜೀವಿ ಸರ್ಜಾ ಹಠಾತ್ ನಿಧನ ಇಡೀ ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ. ಸರ್ಜಾ ಕುಟುಂಬ ಚಿರಂಜೀವಿ ನೆನಪಿನಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಚಿರಂಜೀವಿ ಪತ್ನಿ ನಟಿ ಮೇಘನಾ ರಾಜ್ ಇತ್ತೀಚಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು, ಮಗು ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಇಡೀ ಕುಟುಂಬ ಸಂತೋಷದಲ್ಲಿದೆ.

ಚಿರಂಜೀವಿ ಸರ್ಜಾ 2018 ಮೇ 21ರಂದು ನಟಿ ಮೇಘನಾ ರಾಜ್ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.


Click it and Unblock the Notifications











