ತಮಿಳು ಸಿನಿಮಾ ಆಸೆಗೆ ಕನ್ನಡ ಚಿತ್ರಕ್ಕೆ ಕೈ ಕೊಡಲು ರೆಡಿ ಇದ್ರಾ ಕನ್ನಡತಿ ಸಂಯುಕ್ತ.?
'ಅಲ್ಪನಿಗೆ ಐಶ್ವರ್ಯ ಬಂದ್ರೆ... ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ್ರಂತೆ' - ಈ ಗಾದೆ ಮಾತು ಇಂದು ಕನ್ನಡದ ಟ್ರೋಲ್ ಪೇಜ್ ಗಳಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿವೆ. ಅದಕ್ಕೆ ಕಾರಣ ಕನ್ನಡತಿ ಸಂಯುಕ್ತ ಹೆಗಡೆ ಅಂದ್ರೆ ನೀವು ನಂಬದೆ ಬೇರೆ ದಾರಿ ಇಲ್ಲ.!
ಕನ್ನಡ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ. ಕನ್ನಡ ಚಿತ್ರಗಳಿಗೆ ಕನ್ನಡ ಭಾಷೆ ಬಾರದೇ ಇರುವ ಪರಭಾಷೆ ನಟಿಯರಿಗೆ ನಿರ್ದೇಶಕರು/ನಿರ್ಮಾಪಕರು ಮಣೆ ಹಾಕುತ್ತಾರೆ ಎಂದು ದಶಕಗಳಿಂದಲೂ ನಟಿಯರು ಗೊಣಗುತ್ತಲೇ ಬಂದಿದ್ದಾರೆ. [ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ]
ಆದ್ರೆ ಇವತ್ತಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಕನ್ನಡ ನಟಿಗೆ ಅವಕಾಶ ನೀಡಿದ್ದರೂ, ಕನ್ನಡ ಚಿತ್ರವನ್ನೇ ಸೈಡ್ ಗೆ ತಳ್ಳಿ ಕಾಲಿವುಡ್ ಕಡೆ ಹಾರಲು ನಟಿ ಸಂಯುಕ್ತ ಯೋಚಿಸಿದ್ದರಂತೆ.!

ವಿವಾದದಲ್ಲಿ ನಟಿ ಸಂಯುಕ್ತ ಹೆಗಡೆ
ಇಂದು ಮಧ್ಯಾಹ್ನದಿಂದ ಗಾಂಧಿನಗರದಲ್ಲಿ ಒಂದೇ ಸುದ್ದಿ... ಅದು 'ಕಿರಿಕ್ ಪಾರ್ಟಿ' ಹುಡುಗಿ ಸಂಯುಕ್ತ ರವರ ಹೊಸ 'ಕಿರಿಕ್'. ''ಕಾಲೇಜ್ ಕುಮಾರ್' ಚಿತ್ರದಲ್ಲಿ ನಟಿಸುವುದಿಲ್ಲ'' ಎಂದು ಸಂಯುಕ್ತ ಕ್ಯಾತೆ ತೆಗೆದಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ 'ಕಾಲೇಜ್ ಕುಮಾರ್' ಚಿತ್ರತಂಡದಿಂದಲೇ ಹೊರಬಿತ್ತು. ['ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್]

ಅದಕ್ಕೆ ಕಾರಣ ಏನು ಗೊತ್ತೇ.?
'ಕಾಲೇಜ್ ಕುಮಾರ್' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೇ ಬಹಿರಂಗವಾಗಿ ಮಾಧ್ಯಮಗಳಲ್ಲಿ ಹೇಳಿಕೊಂಡಿರುವ ಪ್ರಕಾರ, ನಟಿ ಸಂಯುಕ್ತ ರವರಿಗೆ ಕಾಲಿವುಡ್ ನಿಂದ ಆಫರ್ ಬಂದಿದೆ. ತಮಿಳು ಚಿತ್ರದಲ್ಲಿ ನಟಿಸುವಂತೆ ಸಂಯುಕ್ತಗೆ ಕರೆ ಬಂದಿದೆ.

ಅಲ್ಲಿಂದಲೇ 'ಕಿರಿಕ್' ಶುರು
ತಮಿಳು ಚಿತ್ರದಲ್ಲಿ ನಟಿಸಲು ನಟಿ ಸಂಯುಕ್ತಗೆ 'ಕಾಲೇಜ್ ಕುಮಾರ್' ಚಿತ್ರದ ಡೇಟ್ಸ್ ಕ್ಲ್ಯಾಶ್ ಆಗುತ್ತಿದೆ. ಹೀಗಾಗಿ ಡೇಟ್ಸ್ ಹೊಂದಾಣಿಕೆ ಮ್ಯಾಟರ್ ನಲ್ಲಿ ಸಂಯುಕ್ತ ಹಾಗೂ 'ಕಾಲೇಜ್ ಕುಮಾರ್' ಚಿತ್ರತಂಡದ ನಡುವೆ 'ಕಿರಿಕ್' ಆಗಿದೆ.

ಯಾವುದು ತಮಿಳು ಸಿನಿಮಾ.?
ಮೂಲಗಳ ಪ್ರಕಾರ, ಪ್ರಭುದೇವ ಅಭಿನಯಿಸಲಿರುವ ತಮಿಳು ಸಿನಿಮಾದಲ್ಲಿ ನಟಿಸಲು ಸಂಯುಕ್ತ ಹೆಗಡೆ ರವರಿಗೆ ಆಫರ್ ಬಂದಿದ್ಯಂತೆ.

ಹೆಚ್ಚು ಶೈನ್ ಆಗ್ಬಹುದು.!
ಹೇಳಿ ಕೇಳಿ ಸಂಯುಕ್ತ ಹೆಗಡೆ ಒಳ್ಳೆಯ ಡ್ಯಾನ್ಸರ್. ಇನ್ನೂ ಪ್ರಭುದೇವ ಡ್ಯಾನ್ಸ್ ಬಗ್ಗೆ ಮಾತನಾಡುವುದೇ ಬೇಕಿಲ್ಲ. ಪ್ರಭುದೇವ ಜೊತೆ ಸ್ಟೆಪ್ ಹಾಕಿದರೆ ಕೆರಿಯರ್ ಗೆ ಪ್ಲಾಸ್ ಪಾಯಿಂಟ್ ಖಂಡಿತ ಎಂಬುದು ಸಂಯುಕ್ತ ಲೆಕ್ಕಾಚಾರ.

ಡೇಟ್ಸ್ ಹೊಂದಾಣಿಕೆ ಆಗಬೇಕಲ್ಲ
'ಕಾಲೇಜ್ ಕುಮಾರ್' ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಇನ್ನೇನು ನಟಿ ಸಂಯುಕ್ತ 'ಕಾಲೇಜ್ ಕುಮಾರ್' ತಂಡಕ್ಕೆ ಸೇರಿಕೊಳ್ಳಬೇಕಿತ್ತು. ಹೀಗಿರುವಾಗ ಡೇಟ್ಸ್ ಬದಲಾವಣೆ ಅಸಾಧ್ಯ ಎಂಬುದು 'ಕಾಲೇಜ್ ಕುಮಾರ್' ಚಿತ್ರತಂಡದ ಮಾತು.

ನಟಿಸುವುದಿಲ್ಲ ಎಂದಿದ್ರಾ.?
ಇದನ್ನೆಲ್ಲ ನೋಡಿದ್ಮೇಲೆ, ''ತಮಿಳು ಚಿತ್ರಕ್ಕೆ ಪ್ರಾತಿನಿಧ್ಯ ಕೊಡಲು ಹೋಗಿ ಕನ್ನಡ ಚಿತ್ರವನ್ನ ನಟಿ ಸಂಯುಕ್ತ ಸೈಡಿಗೆ ತಳ್ಳಿದ್ರಾ.?'' ಎಂಬ ಅನುಮಾನ ಈಗ ಎಲ್ಲರಲ್ಲೂ ಮೂಡಿದೆ.

ನಡೆದು ಬಂದ ದಾರಿಯನ್ನ ಮರೆಯಬಾರದು.!
ಕನ್ನಡತಿ ಸಂಯುಕ್ತ ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಕನ್ನಡ ಚಿತ್ರರಂಗದ ಮೂಲಕ. 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಯಶಸ್ಸು ಗಳಿಸಿದ ಸಂಯುಕ್ತ ಹೆಗಡೆ ರವರಿಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಒಲಿದು ಬರುತ್ತಿವೆ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ, ತಾವು ನಡೆದು ಬಂದ ದಾರಿಯನ್ನ ಸಂಯುಕ್ತ ಮರೆಯಬಾರದು ಎಂಬುದು ಗಾಂಧಿನಗರದ ಪಂಡಿತರ ಹಿತನುಡಿ.

ಖಂಡಿತ ಹೆಮ್ಮೆ ಇದೆ
ನಮ್ಮ ಕನ್ನಡದ ಪ್ರತಿಭೆ ಪರಭಾಷೆಯಲ್ಲಿ ಮಿನುಗುತ್ತಾರೆ ಎಂದರೆ ಖಂಡಿತ ಕನ್ನಡಿಗರು ಹೆಮ್ಮೆ ಪಡುತ್ತಾರೆ. ಆದ್ರೆ, ಕನ್ನಡಕ್ಕೆ ಗೌರವ ಹಾಗೂ ಪ್ರಾತಿನಿಧ್ಯ ಕೊಟ್ಟರೆ ಮಾತ್ರ. ಇದನ್ನ ಸಂಯುಕ್ತ ಅರಿತರೆ ಒಳ್ಳೆಯದ್ದು ಎಂಬುದು ಸಿನಿಪ್ರಿಯರ ಮಾತು.


Click it and Unblock the Notifications











