'ಎಡಗೈಯೇ ಅಪಘಾತಕ್ಕೆ ಕಾರಣ' ಎಂದ ದಿಗಂತ್: ಏನೋ ವಿಶೇಷವಾಗಿದೆ ಅಂದ್ರು ಜನ
ಅಂತರರಾಷ್ಟ್ರೀಯ ಎಡಗೈದಾರರ ದಿನಾಚರಣೆ ಪ್ರಯುಕ್ತ ಕನ್ನಡದಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಆ ಚಿತ್ರದ ಹೆಸರು 'ಎಡಗೈಯೇ ಅಪಘಾತಕ್ಕೆ ಕಾರಣ'. ಈ ಸಿನಿಮಾದ ನಾಯಕ ದೂದ್ಪೇಡಾ ಖ್ಯಾತಿಯ ದಿಗಂತ್.
ನವ ನಿರ್ದೇಶಕ ಸಮರ್ಥ್ ಕಡ್ಕೊಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ದಿಗಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾದ ಫಸ್ಟ್ ಲುಕ್ ಪ್ರೋಮೋ ಸಹ ಬಿಡುಗಡೆಯಾಗಿದ್ದು, ಮೊದಲ ನೋಟದಲ್ಲಿ ಗಮನ ಸೆಳೆದಿದ್ದಾರೆ. ಸುಮಾರು 4.52 ನಿಮಿಷದ ಪ್ರೋಮೋ ರಿಲೀಸ್ ಮಾಡಿದ್ದು, ಎಡಗೈದಾರರ ಸಮಸ್ಯೆಗಳು ಏನು? ಅವರಿಗೆ ಯಾವ ರೀತಿ ತೊಂದರೆ ಆಗುತ್ತಿದೆ? ಸಣ್ಣ ಪುಟ್ಟ ವಿಷಯಗಳು ಎನಿಸಿದರೂ ಅದರಿಂದ ಉಂಟಾಗುವ ಅಪಾಯಗಳೇನು ಎನ್ನುವುದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.
'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರದ ಪ್ರೋಮೋ ನೋಡಿದ ಜನರು ಪರವಾಗಿಲ್ಲ, ಏನೋ ವಿಶೇಷವಾಗಿ ಮಾಡ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಚಿತ್ರದ ಟೈಟಲ್ ಹಾಗೂ ಕಾನ್ಸೆಪ್ಟ್ ಬಗ್ಗೆ ಸುಳಿವು ನೀಡಿರುವ ಚಿತ್ರತಂಡ ಮುಂದಿನ ದಿನದಲ್ಲಿ ಇನ್ನಷ್ಟು ಮಾಹಿತಿ ಬಹಿರಂಗಪಡಿಸಲಿದೆ.

ಇನ್ನು ಹೀರೋಯಿನ್ ಯಾರು ಅಂತ ಕೇಳಿದ್ರಾ? ಈ ಚಿತ್ರದಲ್ಲಿ ಒಬ್ಬರು ಹೀರೋಯಿನ್ ಅಲ್ಲ, ಹೀರೋಯಿನ್ಗಳು ಇರ್ತಾರೆ ಎಂದು ನಿರ್ದೇಶಕ ಸಮರ್ಥ್ ಸುಳಿವು ಕೊಟ್ಟಿದ್ದಾರೆ. ಆದರೆ, ಯಾವೆಲ್ಲಾ ನಟಿಯರಿಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಗುತ್ತದೆ ಎಂದು ಕಾದು ನೋಡಬೇಕಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಮೋಹನ್ ಹಿರೇಗೌಡರ್ ಬಂಡವಾಳ ಹಾಕುತ್ತಿದ್ದಾರೆ. ರಾಹುಲ್ ಪರ್ವಟಿಕರ್ ಸಂಭಾಷಣೆ ಇರಲಿದೆ.
ಇನ್ನುಳಿದಂತೆ ದಿಗಂತ್ ಅಭಿನಯಿಸಿರುವ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಚಿತ್ರೀಕರಣ ಮುಗಿಸಿದೆ. 'ಮಾರಿಗೋಲ್ಡ್' ಚಿತ್ರವೂ ಶೂಟಿಂಗ್ ಕಂಪ್ಲೀಟ್ ಮಾಡಿದೆ. ತೆಲುಗಿನ 'ಯವರು' ಸಿನಿಮಾದ ಕನ್ನಡ ರಿಮೇಕ್ ಸಹ ಪೂರ್ಣಗೊಳಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನಲ್ಲಿ ತಯಾರಾಗುತ್ತಿರುವ 'ಗಾಳಿಪಟ-2' ಸಿನಿಮಾ ಶೂಟಿಂಗ್ ಮಾಡ್ತಿದೆ.


Click it and Unblock the Notifications











