ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?
ಗಾಂಧಿನಗರದಲ್ಲಿ ಗಾಡ್ ಫಾದರ್ ಇಲ್ಲದೆ 'ಅಂಬಾರಿ' ಮತ್ತು 'ಅದ್ದೂರಿ' ಅಂತಹ ಎರಡು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ನಿರ್ದೇಶಕ ಎ.ಪಿ.ಅರ್ಜುನ್ ಗ್ರಹಚಾರ ಇತ್ತೀಚೆಗೆ ಯಾಕೋ ನೆಟ್ಟಗಿದ್ದ ಹಾಗೆ ಕಾಣುತ್ತಿಲ್ಲ.
'ಮಿಸ್ಟರ್ ಐರಾವತ' ಸಿನಿಮಾ ಶುರುವಾಗಿ ವರ್ಷ ಕಳೆದಿದೆ. ಆದರೂ ಇನ್ನೂ ಶೂಟಿಂಗ್ ನಡೆಯುತ್ತಲೇ ಇದೆ. ಇದಕ್ಕೆ ಕಾರಣ ನಿರ್ದೇಶಕ ಎ.ಪಿ.ಅರ್ಜುನ್ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ಅಭಿಮಾನಿ ಬಳಗ ಬೆಟ್ಟು ಮಾಡಿದೆ.
ಇದೇ ಗ್ಯಾಪ್ ನಲ್ಲಿ ಹುಟ್ಟಿಕೊಂಡ ಗಾಸಿಪ್ ಗಳ ಪ್ರಕಾರ ದರ್ಶನ್ ಮತ್ತು ನಿರ್ಮಾಪಕರಿಂದ ಎ.ಪಿ.ಅರ್ಜುನ್ ಗೂಸಾ ತಿಂದಿದ್ದರು. ಇದೆಲ್ಲಾ ಹಳೇ ಸುದ್ದಿ ಬಿಡಿ. ಈಗ ಬಂದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ದರ್ಶನ್ ಮತ್ತೊಮ್ಮೆ ಅರ್ಜುನ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರಂತೆ.! ಇದು ನಿಜಾನಾ? 'ಮಿಸ್ಟರ್ ಐರಾವತ' ಚಿತ್ರ ತಡವಾಗುತ್ತಿರುವುದಕ್ಕೆ ಅಸಲಿ ಕಾರಣ ಯಾರು ಮತ್ತು ಏನು? ['ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]
ಇಲ್ಲಿಯವರೆಗೂ ತುಟಿಕ್ ಪಿಟಿಕ್ ಅನ್ನದ ನಿರ್ದೇಶಕ ಅರ್ಜುನ್ ಕನ್ನಡದ ಜನಪ್ರಿಯ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. 'ಮಿಸ್ಟರ್ ಐರಾವತ' ಚಿತ್ರದ ವಿವಾದಗಳ ಕುರಿತು ಅರ್ಜುನ್ ಹೇಳಿರುವುದು ಹೀಗೆ....ಮುಂದೆ ಓದಿ....

''ದರ್ಶನ್ ಮತ್ತು ನನ್ನ ಮಧ್ಯ ತಂದು ಹಾಕಿದ್ದಾರೆ''
''ದರ್ಶನ್ ಯಾವತ್ತೂ ನನ್ನ ಮೇಲೆ ಕೈ ಮಾಡಿಲ್ಲ. ದರ್ಶನ್ ಮತ್ತು ನನ್ನ ನಡುವೆ ಯಾರೋ ತಂದು ಹಾಕಿದ್ದಾರೆ. ಯಾರೇ ನನ್ನ ಮೇಲೆ ಕೈ ಮಾಡಿದರೂ ಅಂದೇ ಶೂಟಿಂಗ್ ನಿಲ್ಲಿಸಿ, ಚಿತ್ರದಲ್ಲಿ ಕೆಲಸ ಮಾಡುವುದಿಲ್ಲ ಎಂದು ನಾನು ಹೇಳುತ್ತಿದ್ದೆ. ಆದರೆ ಯಾರೂ ಹೊಡೆದಿಲ್ಲ. ಅಂತಹ ತಪ್ಪು ನಾನು ಮಾಡಿಲ್ಲ.''

ಶೂಟಿಂಗ್ ತಡವಾಗುತ್ತಿರುವುದಕ್ಕೆ ಅಸಲಿ ಕಾರಣ ಇದು!
''ಐರಾವತ' ಚಿತ್ರದ ಶೂಟಿಂಗ್ ತಡವಾಗಿಲ್ಲ. 2014 ಫೆಬ್ರವರಿ 16ಕ್ಕೆ ಮುಹೂರ್ತವಾಯಿತು. ಅದಾದ ಆರು ತಿಂಗಳ ನಂತರ ಅಂದರೆ ಆಗಸ್ಟ್ 2ಕ್ಕೆ ಶೂಟಿಂಗ್ ಶುರುವಾಯಿತು. ನನ್ನ ಸಿನಿಮಾ ಶೂಟಿಂಗ್ ಶುರುವಾಗಿ 10 ತಿಂಗಳಾಗಿವೆ. ಅದರಲ್ಲಿ 45 ಭಾನುವಾರ, 25 ದಿನ ಒಕ್ಕೂಟ ಕಾರ್ಮಿಕರ ಪ್ರತಿಭಟನೆ ಇತ್ತು. 20 ದಿನ 'ಅಂಬರೀಷ' ಚಿತ್ರದ ಪ್ರಮೋಷನ್ ಗೆ ದರ್ಶನ್ ಸಮಯ ತೆಗೆದುಕೊಂಡರು. ಮತ್ತೆ 10 ದಿನ 'ಅಂಬರೀಷ' ಚಿತ್ರದ ರೀ ಶೂಟಿಂಗ್ ಗೆ ಸಮಯ ತೆಗೆದುಕೊಂಡರು. ಮಾರ್ಚ್ ನಲ್ಲಿ 20 ದಿನ ವಿದೇಶಕ್ಕೆ ಹೋಗಿ ಬಂದರು. ಹತ್ತು ತಿಂಗಳಲ್ಲಿ 120 ದಿನ ಅಂದರೆ ನಾಲ್ಕು ತಿಂಗಳು ಶೂಟಿಂಗ್ ನಡೆದಿಲ್ಲ. ಉಳಿದ ಆರು ತಿಂಗಳು ನಾನು ಸಮಯ ತೆಗೆದುಕೊಂಡಿದ್ದೇನೆ. ಈಗ 120 ದಿನ ಶೂಟಿಂಗ್ ಆಗಿದೆ. ನಿರ್ಮಾಪಕರಿಗೆ 120 ರಿಂದ 130 ದಿನ ಶೂಟಿಂಗ್ ಮಾಡುತ್ತೇನೆ ಅಂತ ಮುಂಚೆ ಹೇಳಿದ್ದೆ. ಈಗ ಒಂದು ಫೈಟ್, ಮೂರು ಹಾಡುಗಳ ಚಿತ್ರೀಕರಣ ಬಾಕಿ ಇದೆ.''

''ನನ್ನ ಬಗ್ಗೆ ಅಪಪ್ರಚಾರ ನಡೆಯುತ್ತಿದೆ''
''ದರ್ಶನ್ ಬಳಿ ನನ್ನ ಬಗ್ಗೆ ಯಾರೋ ಕೆಟ್ಟದಾಗಿ ಹೇಳಿದ್ದಾರೆ. ಆದರೆ ನನಗೆ ದರ್ಶನ್ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ.'' (ವಿಜಯ ಕರ್ನಾಟಕ ಪತ್ರಿಕೆಗೆ ಎ.ಪಿ.ಅರ್ಜುನ್ ನೀಡಿರುವ ಸಂದರ್ಶನದ ಲಿಂಕ್ ಇಲ್ಲಿದೆ)

ಫೇಸ್ ಬುಕ್ ನಲ್ಲಿ 'ಡಿ' ಕಂಪನಿ ಕಿಡಿಕಿಡಿ
ನಿರ್ದೇಶಕ ಎ.ಪಿ.ಅರ್ಜುನ್ ವಿರುದ್ಧ ದರ್ಶನ್ ನೇರವಾಗಿ ಆರೋಪ ಮಾಡದೇ ಇದ್ದರೂ, ಅವರ ಅಧಿಕೃತ ಅಭಿಮಾನಿ ಬಳಗ 'ಡಿ' ಕಂಪನಿ, ಅರ್ಜುನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿತ್ತು. 'ಮಿಸ್ಟರ್ ಐರಾವತ' ಸಿನಿಮಾ ತಡವಾಗುತ್ತಿರುವುದಕ್ಕೆ ಅರ್ಜುನ್ ದುರಹಂಕಾರ ಕಾರಣ ಅಂತ ಆರೋಪಿಸಿತ್ತು. [ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

'ಐರಾವತ' ರಿಲೀಸ್ ಯಾವಾಗ?
ವಿವಾದಗಳ ಕೇಂದ್ರಬಿಂದು ಆಗಿರುವ 'ಮಿಸ್ಟರ್ ಐರಾವತ' ತೆರೆಗೆ ಬರುವುದಕ್ಕೆ ಇನ್ನೂ ಕನಿಷ್ಠ ನಾಲ್ಕು ತಿಂಗಳು ಬೇಕು. ಫೈಟು ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇದೆ. ದರ್ಶನ್ ಮತ್ತು ಊರ್ವಶಿ ಜೋಡಿಯಾಗಿ ನಟಿಸುತ್ತಿರುವ ಚಿತ್ರದಲ್ಲಿ ದರ್ಶನ್ ಪುತ್ರ ವಿನೀತ್ ಕೂಡ ಬಣ್ಣ ಹಚ್ಚಿರುವುದು ವಿಶೇಷ. ಈಗಲಾದರೂ ಕರೆಕ್ಟಾಗಿ ಪ್ಲಾನ್ ಮಾಡಿದರೆ, ಆಗಸ್ಟ್ ಹೊತ್ತಿಗೆ ಬೆಳ್ಳಿತೆರೆ ಮೇಲೆ ಐರಾವತ ದರ್ಶನ ಆಗಬಹುದು. [ಆನೆ ಬರೋಕೆ ಇದೆ ನಾಲ್ಕು ತಿಂಗಳು, ನೆಮ್ಮದಿಯಾಗಿರಿ]


Click it and Unblock the Notifications











