ಸಿನಿಮಾ ವ್ಯಾಕರಣ ಕಲಿಯಲು ಗುರುಪ್ರಸಾದ್ಗೆ ಕರೆ ಮಾಡಿ
'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳ ಮೂಲಕ ಭಿನ್ನ (ಕಲ್ಟ್?) ಮಾದರಿಯ ಸಿನಿಮಾ ನೀಡಿದ ನಿರ್ದೇಶಕ ಗುರುಪ್ರಸಾದ್ ಇತ್ತೀಚಿಗೆ ಸಾಮಾಜಿಕ ಜಾಲತಾಣ ಮೂಲಕ ರಾಜಕೀಯ ವಿಮರ್ಶೆಗೆ ಇಳಿದಿದ್ದಾರೆ. ಇತ್ತೀಚೆಗಷ್ಟೆ ಅವರು ಯಡಿಯೂರಪ್ಪ ಬಗ್ಗೆ ಗುರುಪ್ರಸಾದ್ ಆಡಿದ್ದ ಮಾತುಗಳು ರಾಜಕೀಯ ವಲಯದಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿದವು.
ಆದರೆ ನಿರ್ದೇಶಕ ಗುರುಪ್ರಸಾದ್ಗೆ ರಾಜಕೀಯ ಆಸಕ್ತಿಯಷ್ಟೆ, 'ಪ್ಯಾಷನ್' ಅಲ್ಲ. ಅವರದ್ದೇನಿದ್ದರೂ ಸಿನಿಮಾ ಧ್ಯಾನ. ಇದೀಗ ಈ ಲಾಕ್ಡೌನ್ನ ಸಂಕಷ್ಟದ ಸಮಯದಲ್ಲಿ ಮತ್ತೆ ತಮ್ಮನ್ನು ಸಿನಿಮಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಗುರುಪ್ರಸಾದ್. ಹಾಗೆಂದು ಅವರು ಸಿನಿಮಾ ಚಿತ್ರೀಕರಣಕ್ಕೆ ಇಳಿಯುತ್ತಿದ್ದಾರೆ ಎಂದರ್ಥವಲ್ಲ.
ಆಸಕ್ತರಿಗೆ ಸಿನಿಮಾ ತರಬೇತಿ ನೀಡುವ ಕಾರ್ಯವನ್ನು ಗುರುಪ್ರಸಾದ್ ಮಾಡುತ್ತಿದ್ದಾರೆ. ಹೀಗೆ ಆಸಕ್ತರಿಗೆ ಸಿನಿಮಾ ಭಾಷೆ ಹೇಳಿಕೊಡುವ ಕಾರ್ಯವನ್ನು ಗುರುಪ್ರಸಾದ್ ಇದೇ ಮೊದಲ ಬಾರಿಗೆ ಮಾಡುತ್ತಿರುವುದಲ್ಲ. ಈವರೆಗೆ 5 ಬ್ಯಾಚ್ ವಿದ್ಯಾರ್ಥಿಗಳು ಗುರು ಪ್ರಸಾದ್ ಬಳಿ ಸಿನಿಮಾದ ಕತೆ, ಸಂಭಾಷಣೆ, ನಿರ್ದೇಶಕ ವಿವಿಧ ವಿಭಾಗಗಳಿಗೆ ಸಂಬಂಧಪಟ್ಟ ಜ್ಞಾನ ಸಂಪಾದಿಸಿದ್ದಾರೆ. ಈ ಮೊದಲೇ ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದ ನಿರ್ಮಾಪಕರು ಸಹ ಗುರುಪ್ರಸಾದ್ ಬಳಿ ಬಂದು ಸಿನಿಮಾ ಬಗ್ಗೆ ಕಲಿತು ಹೋಗಿದ್ದಾರೆ! ಈಗ 6ನೇ ಬ್ಯಾಚ್ಗೆ ಸಿನಿಮಾ ಶಿಕ್ಷಣ ನೀಡುವ ಕಾರ್ಯ ಆರಂಭಿಸುವುದಾಗಿ ಗುರು ಪ್ರಸಾದ್ ಘೋಷಿಸಿದ್ದಾರೆ.

ಈ ಬಾರಿ ಆನ್ಲೈನ್ನಲ್ಲಿ ಸಿನಿಮಾ ಪಾಠ ಮಾಡಲಿದ್ದಾರೆ ಗುರು ಪ್ರಸಾದ್. ಸಿನಿಮಾಕ್ಕೆ ಚಿತ್ರಕತೆ ಬರೆಯುವುದು ಹೇಗೆ? ಗಮನ ಸೆಳೆವ ಸಂಭಾಷಣೆ ಬರೆಯುವುದು ಹೇಗೆ? ಸಿನಿಮಾವೊಂದನ್ನು ಒಡೆದು ನೋಡಿ ಕಲಿಯುವ ಬಗೆ ಹೇಗೆ? ಸಿನಿಮಾದ ಒಟ್ಟಾರೆ ವ್ಯಾಕರಣವೇನು? ಹೀಗೆ ಹಲವು ವಿಷಯಗಳನ್ನು ಅನುಭವಿ ಗುರುಪ್ರಸಾದ್ ಹೇಳಿಕೊಡಲಿದ್ದಾರೆ. ಸಿನಿಮಾ ಕಲಿಸುವುದು ಮಾತ್ರವಲ್ಲದೆ ಅರ್ಹ ವಿದ್ಯಾರ್ಥಿಗಳಿಗೆ ತಮ್ಮದೇ ಮುಂದಿನ ಸಿನಿಮಾದಲ್ಲಿ ಅವಕಾಶವನ್ನೂ ಗುರುಪ್ರಸಾದ್ ನೀಡಲಿದ್ದಾರೆ.
ಗುರುಪ್ರಸಾದ್ ತರಗತಿಗೆ ಸೇರಲು ಸಂದರ್ಶನ ಎದುರಿಸಬೇಕಾಗುತ್ತದೆ. ಸಂದರ್ಶನದಲ್ಲಿ ಪಾಸ್ ಆದವರಷ್ಟೆ 'ಗುರು'ವಿನ ಶಿಷ್ಯರಾಗಲು ಸಾಧ್ಯ. ಯಾವುದೇ ಶಿಫಾರಸ್ಸುಗಳಿಗೆ ಗುರುಪ್ರಸಾದ್ ಜಗ್ಗುವುದಿಲ್ಲವಾದ್ದರಿಂದ ಶಿಫಾರಸ್ಸಿನ ತಂಟೆಗೆ ಹೋಗುವುದೇ ಬೇಡ. ಕಾರ್ಯಾಗಾರದಲ್ಲಿ ಗುರುಪ್ರಸಾದ್ ಅವರೇ ಖುದ್ದಾಗಿ ಕಲಿಸುತ್ತಾರೆ ಬೇರಾವುದೇ ಅಪರಿಚಿತ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸುವುದಿಲ್ಲ. ಇದು ಒಂದು ತಿಂಗಳ ಅವಧಿಗೆ ನಡೆವ ತರಗತಿಯಾಗಿರಲಿದ್ದು ಒಟ್ಟು 50 ಗಂಟೆಯ ಕಲಿಕಾ ಅವಧಿ ಇರಲಿದೆ.
ಈ ಸದಾವಕಾಶ ಸದುಪಯೋಗಪಡಿಸಿಕೊಂಡು ಅನುಭವಿ ನಿರ್ದೇಶಕ ಗುರು ಪ್ರಸಾದ್ ಬಳಿ ಸಿನಿಮಾ ಶಿಕ್ಷಣ ಪಡೆಯಲು ಈ ಸಂಖ್ಯೆಗೆ ಸಂಪರ್ಕಿಸಿ:82963 44083 - [email protected]


Click it and Unblock the Notifications











