ನಿರ್ದೇಶಕ ಶ್ರೀನಿ ಕಲ್ಯಾಣ : ತಾರೆಯರ ಆಶೀರ್ವಾದ
ಕನ್ನಡದ ನಿರ್ದೇಶಕ ಎಮ್ ಜೆ ಶ್ರೀನಿವಾಸ್ (ಶ್ರೀನಿ) ವಿವಾಹ ನಿನ್ನೆ (ಜೂನ್ 30) ರಂದು ನೆರವೇರಿದೆ. ಶ್ರುತಿ ಜೊತೆಗೆ ಶ್ರೀನಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಮೈಸೂರಿನ ರೆಸಾರ್ಟ್ ಒಂದರಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಬೆಳಗ್ಗೆ 10 ಗಂಟೆಗೆ ಮುಹೂರ್ತ ಹಾಗೂ 12:30 ಕ್ಕೆ ಆರತಕ್ಷತೆ ಕಾರ್ಯಕ್ರಮಗಳು ಜರುಗಿದೆ.
ಕನ್ನಡ ನಟರಾದ ಶಿವರಾಜ್ ಕುಮಾರ್, ಉಪೇಂದ್ರ ನಟಿ ಹರಿಪ್ರಿಯಾ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನೂತನ ವಧು ವರರಿಗೆ ಆಶೀರ್ವಾದ ಮಾಡಿದರು.

ಶ್ರೀನಿ ಮಡದಿ ಶ್ರುತಿ ಪತ್ರಕರ್ತೆಯಾಗಿದ್ದಾರೆ. ತುಂಬ ವರ್ಷಗಳಿಂದ ಇಬ್ಬರು ಪರಿಚಯ ಹೊಂದಿದ್ದು, ಒಳ್ಳೆಯ ಸ್ನೇಹ ಇತ್ತು. ಬಳಿಕ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈಗ ಈ ಜೋಡಿ ತಮ್ಮ ಇಷ್ಟದಂತೆ ಮದುವೆ ಆಗಿದ್ದಾರೆ.

ಚಿತ್ರರಂಗದ ಗಣ್ಯರ ಜೊತೆಗೆ ಸ್ನೇಹಿತರು ಹಾಗೂ ಸಂಬಂಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶ್ರೀನಿ ಹಾಗೂ ಶ್ರುತಿ ಪ್ರೀತಿಗೆ ಇಬ್ಬರ ಮನೆಯಲ್ಲಿ ಸಮ್ಮತಿ ಸೂಚಿಸಿ, ಮದುವೆ ಮಾಡಿದ್ದಾರೆ. ಪತ್ರಕರ್ತೆ ಶ್ರುತಿ ಒಳ್ಳೆಯ ಬರಹಗಾರ್ತಿಯಾಗಿದ್ದು, ಅವರ ಬರವಣಿಗೆ ಶ್ರೀನಿಗೆ ತುಂಬ ಇಷ್ಟವಂತೆ.

ಅಂದಹಾಗೆ, ನಟ ಉಪೇಂದ್ರ ಜೊತೆಗೆ ಕೆಲಸ ಮಾಡುತ್ತಿದ್ದ ಶ್ರೀನಿ 'ಟೋಪಿವಾಲ' ಸಿನಿಮಾದ ಮೂಲಕ ನಿರ್ದೇಶಕರಾದರು. ಬಳಿಕ 'ಶ್ರೀನಿವಾಸ ಕಲ್ಯಾಣ' ಹಾಗೂ 'ಬೀರ್ ಬಲ್' ಚಿತ್ರಗಳಲ್ಲಿ ನಟನೆ ಹಾಗೂ ನಿರ್ದೇಶನ ಎರಡನ್ನು ಮಾಡಿದರು. ಸದ್ಯ, 'ರಂಗನಾಯಕಿ' ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.


Click it and Unblock the Notifications











