ಆಸೆ ಈಡೇರುವ ಮುನ್ನವೇ ವಿಜಯ್ ಹೋಗಿಬಿಟ್ಟ: ನಾಗತಿಹಳ್ಳಿ ಚಂದ್ರಶೇಖರ್
''ಸಂಚಾರಿ ವಿಜಯ್ ಜೊತೆ ಸಿನಿಮಾ ಮಾಡುವ ಆಸೆಯಿತ್ತು. ಕತೆ ಚರ್ಚೆಯ ಹಂತದಲ್ಲಿರುವಾಗಲೇ ವಿಜಯ್ ಹೋಗಿಬಿಟ್ಟ. ಸಿನಿಮಾ ಮಾಡಬೇಕೆಂಬ ಆಸೆ ಹಾಗೆಯೇ ಉಳಿಯಿತು'' ಎಂದಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
ರಂಗಚಂದಿರ ತಂಡದವರಿಂದ ಇಂದು ಟೌನ್ಹಾಲ್ ಬಳಿ ಆಯೋಜಿಸಲಾಗಿದ್ದ ಸಂಚಾರಿ ವಿಜಯ್ಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾವುಕರಾಗಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ''ಚಿಮ್ಮುವ ಕಾರಂಜಿಯೊಂದು ಥಟ್ಟನೆ ಬತ್ತಿದಂತೆ, ಹೂವೊಂದನ್ನು ಹೊಸಕಿಹಾಕಿದಂತೆ ಆಗಿಬಿಟ್ಟಿದೆ. ಒಳ್ಳೆಯ ಮರಗಳಿಗೆ ದೇವರು ಕೊಡಲಿ ಹಾಕುತ್ತಾನಂತೆ ದೇವರಿದ್ದಾನೊ ಇಲ್ಲವೋ ತಿಳಿಯೆ ಆದರೆ ಸಂಚಾರಿ ವಿಜಯ್ ವಿಷಯದಲ್ಲಿ ಇದು ನಿಜವಾಗಿಬಿಟ್ಟಿದೆ' ಎಂದು ಬೇಸರ ವ್ಯಕ್ತಪಡಿಸಿದರು ನಾಗತಿಹಳ್ಳಿ ಚಂದ್ರಶೇಖರ್.

''ನಂದಿ ಹೋದ ನನ್ನ ಕಿರಿಯ ಗೆಳೆಯನ ನೆನಪಿನಲ್ಲಿ ನಾವು ರಂಗಭೂಮಿಯ ಗೆಳೆಯರೆಲ್ಲ ಸೇರಿ ದೀಪ ಬೆಳಗಿದ್ದೇವೆ. ಸಂಚಾರಿ ವಿಜಯ್ ನನೆಪು ನಮ್ಮಲ್ಲಿ ಸದಾ ಬೆಳಗುತ್ತಿರಲಿ. ಆತನ ಸಾಮಾಜಿಕ ಕಾಳಜಿ ಎಲ್ಲರಿಗೂ ಮಾದರಿಯಾಗಲಿ' ಎಂದರು ನಾಗತಿಹಳ್ಳಿ ಚಂದ್ರಶೇಖರ್.
ಹಲವಾರು ರಂಗಭೂಮಿ ಕಲಾವಿದರು, ತಂತ್ರಜ್ಞರು, ಸಂಚಾರಿ ವಿಜಯ್ ಆಪ್ತರು ಸಂಚಾರಿ ವಿಜಯ್ ಬಗ್ಗೆ ಅವರೊಟ್ಟಿಗೆ ಕಳೆದ ಕ್ಷಣಗಳ ಬಗ್ಗೆ ಮಾತನಾಡಿದರು.
Recommended Video
ಸಂಚಾರಿ ವಿಜಯ್ ಜೂನ್ 12 ರಂದು ಜೆಪಿ ನಗರ 7ನೇ ಹಂತದ ಬಳಿ ಬೈಕ್ ಅಪಘಾತಕ್ಕೆ ಈಡಾಗಿದ್ದರು. ಎರಡು ದಿನ ಜೀವನ್ಮರಣದ ನಡುವೆ ಹೋರಾಡಿ ಜೂನ್ 14 ಮಧ್ಯರಾತ್ರಿ ಅವರನ್ನು ಮೃತರೆಂದು ವೈದ್ಯರು ಘೋಷಿಸಿದರು. ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದರು ವಿಜಯ್.


Click it and Unblock the Notifications











