ಹೊಸ ಸಾಹಸಕ್ಕೆ ಕೈಹಾಕಿದ ಯೋಗರಾಜ್ ಭಟ್ರು
'ವಾಸ್ತು' ಬಗ್ಗೆ ಯೋಗರಾಜ್ ಭಟ್ರಿಗೆ ನಂಬಿಕೆ ಇದ್ಯೋ...ಇಲ್ವೋ...ಆದ್ರೆ, 'ವಾಸ್ತುಪ್ರಕಾರ' ಇರುವ ಅವರ ಹೊಸ ಆಫೀಸ್ ಗಾಂಧಿನಗರದಲ್ಲಿ ಇಂದು (ಏಪ್ರಿಲ್ 06) ಆರಂಭವಾಗಿದೆ. 'ವಾಸ್ತುಪ್ರಕಾರ' ಸಿನಿಮಾ ಯಶಸ್ವಿ ಆದ ಬೆನ್ನಲ್ಲೇ 'ಯೋಗರಾಜ್ ಮೂವೀಸ್' ಚಿತ್ರ ನಿರ್ಮಾಣ ಸಂಸ್ಥೆ ಈಗ ಚಿತ್ರ ವಿತರಣೆಗೂ ಕಾಲಿಟ್ಟಿದೆ.
ಹೌದು, ವರ್ಷಗಳ ಹಿಂದೆ ಅನೇಕ ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದ ಯೋಗರಾಜ್ ಭಟ್, 'ಮಣಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ವತಂತ್ರ ನಿರ್ದೇಶಕರಾದರು. 'ಪಂಚರಂಗಿ', 'ದ್ಯಾವ್ರೇ', 'ಪ್ರೀತಿ ಗೀತಿ ಇತ್ಯಾದಿ', 'ಪರಪಂಚ' ಸೇರಿದಂತೆ ಅನೇಕ ಚಿತ್ರಗಳನ್ನ 'ಯೋಗರಾಜ್ ಮೂವೀಸ್' ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ['ವಾಸ್ತು ಪ್ರಕಾರ' ಭಟ್ಟರ ಜೋಳಿಗೆ ತುಂಬಿಸಿದ್ದು ಹೇಗೆ?]

ನಿರ್ದೇಶನ-ನಿರ್ಮಾಣದ ಜೊತೆ ಜೊತೆಗೆ ಗೀತ ಸಾಹಿತಿ ಆಗಿರುವ ಭಟ್ರು, ಈಗ ಗಾಂಧಿನಗರದಲ್ಲಿ ತಮ್ಮ ಸಾಮ್ರಾಜ್ಯವನ್ನ ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ವಿತರಣೆ ಮಾಡುವುದಕ್ಕೂ ಮನಸ್ಸು ಮಾಡಿರುವ ಭಟ್ರು, ಗಾಂಧಿನಗರದಲ್ಲಿ ಹೊಸ ಆಫೀಸ್ ತೆರೆದಿದ್ದಾರೆ.
ಯೋಗರಾಜ್ ಭಟ್ಟರ ಶಿಷ್ಯ ವರ್ಗದ ಸಮ್ಮುಖದಲ್ಲಿ 'ಯೋಗರಾಜ್ ಮೂವೀಸ್' ಆಫೀಸ್ ನ ಭಟ್ರ ಪತ್ನಿ ರೇಣುಕಾ ಇಂದು ಉದ್ಘಾಟಿಸಿದರು. ಆ ಮೂಲಕ ವಿತರಣಾ ವಲಯಕ್ಕೂ ಭಟ್ರು ಕಾಲಿಟ್ಟಂಗಾಗಿದೆ. ['ವಾಸ್ತುಪ್ರಕಾರ' ಭಟ್ರಿಗೆ 'ಬಂಪರ್' ಕಲೆಕ್ಷನ್]

ಮುಂದಕ್ಕೆ 'ಯೋಗರಾಜ್ ಮೂವೀಸ್' ನಡಿ ನಿರ್ಮಾಣ ಮಾಡುವ ಚಿತ್ರಗಳೆಲ್ಲವನ್ನೂ ಖುದ್ದು ಭಟ್ರೇ ವಿತರಣೆ ಮಾಡಲಿದ್ದಾರೆ. ಅಲ್ಲದೇ, ಯುವ ನಿರ್ಮಾಪಕರಿಗೆ ಉತ್ತೇಜನ ನೀಡುವ ಸಲುವಾಗಿ ಬೇರೆ ಬ್ಯಾನರ್ ಚಿತ್ರಗಳ ವಿತರಣಾ ಹಕ್ಕುಗಳನ್ನ ಕೊಂಡುಕೊಳ್ಳುವ ಆಲೋಚನೆ ಕೂಡ ಅವರಿಗಿದೆ. ಭಟ್ರ ಈ ಹೊಸ ಪ್ರಯತ್ನಕ್ಕೆ ನಮ್ಮ ಕಡೆಯಿಂದಲೂ ಶುಭ ಹಾರೈಕೆಗಳು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











