'ಕುಚ್ಚಿಕ್ಕು' ಗೆಳೆಯರೆಂದರೆ ಹೀಗಿರಬೇಕು ನೋಡಿ...
ನಟ 'ಲವ್ಲಿ ಸ್ಟಾರ್' ಪ್ರೇಮ್ ಕಂಡ ಬಹು ದಿನಗಳ ಕನಸೊಂದು ಇದೀಗ ಈಡೇರುವ ಹಂತದಲ್ಲಿದೆ. ಸದ್ಯದಲ್ಲೇ ನಟ ಪ್ರೇಮ್ ನಿರ್ಮಾಪಕರಾಗುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಒಂದು ದಶಕದಲ್ಲಿ ನಿರ್ಮಾಣ ಮಾಡುವ ಕನಸನ್ನ ಈಡೇರಿಸಿಕೊಳ್ಳುತ್ತಿದ್ದಾರೆ ಪ್ರೇಮ್.
ಇಂತಿಪ್ಪ ಪ್ರೇಮ್ ಕನಸಿಗೆ ಬೆನ್ನೆಲುಬಾಗಿ ನಿಂತಿರುವುದು ನಿರ್ದೇಶಕ ಆರ್.ಚಂದ್ರು. ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರೇಮ್ ವೃತ್ತಿಬದುಕಿನಲ್ಲಿ 'ಚಾರ್ಮಿನರ್' ಕಟ್ಟಿ ಯೂಟರ್ನ್ ನೀಡಿದ್ದು ನಿರ್ದೇಶಕ ಆರ್.ಚಂದ್ರು.
ಅಂದಿನಿಂದ ಆರ್.ಚಂದ್ರುಗೆ ಖಾಸಾ ದೋಸ್ತ್ ಆಗಿರುವ ಪ್ರೇಮ್, ಚಂದ್ರು ನಿರ್ಮಾಣದ 'ಮಳೆ' ಸಿನಿಮಾಗೆ ಸಂಭಾವನೆ ಪಡೆಯದೇ ಫ್ರೀ ಕಾಲ್ ಶೀಟ್ ನೀಡಿದ್ದಾರೆ. ಈ ಸುದ್ದಿಯನ್ನ ನೀವು 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. ಇದೀಗ ಇಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿದೆ. [ಬಯಲಾದ ಲವ್ಲಿ ಸ್ಟಾರ್ ಪ್ರೇಮ್ ಇನ್ನೊಂದು ಮುಖ..!]

ಆರ್.ಚಂದ್ರು ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 'ಮಳೆ' ಚಿತ್ರಕ್ಕೆ ಪ್ರೇಮ್ ಸಂಭಾವನೆ ಪಡೆಯದೇ ಹೇಗೆ ನಟಿಸುತ್ತಿದ್ದಾರೋ, ಹಾಗೇ ಪ್ರೇಮ್ ನಿರ್ಮಿಸಲಿರುವ ಚಿತ್ರಕ್ಕೆ ಆರ್.ಚಂದ್ರು ಕಡೆಯಿಂದ ನಿರ್ದೇಶನ ಫ್ರೀ ಆಗಿರಲಿದೆ. ಹಾಗಂತ ಖುದ್ದು ಆರ್.ಚಂದ್ರು ಹೇಳಿದರು.
ಹಾಗಾದ್ರೆ, ಪ್ರೇಮ್ ನಿರ್ಮಾಣದ ಮೊದಲ ಚಿತ್ರಕ್ಕೆ ಆರ್.ಚಂದ್ರು ಆಕ್ಷನ್ ಕಟ್ ಹೇಳಲಿದ್ದಾರಾ? ಅದಿನ್ನೂ ನಿರ್ಧಾರ ಆಗಿಲ್ಲ. ಪ್ರೇಮ್ ಕೈಯಲ್ಲಿ 'ಮಳೆ', 'ಮಸ್ತ್ ಮೊಹಬ್ಬತ್', 'ದಳಪತಿ' ಚಿತ್ರಗಳಿವೆ. ಈ ಎಲ್ಲಾ ಚಿತ್ರಗಳು ಕಂಪ್ಲೀಟ್ ಆದ ಬಳಿಕ ತಮ್ಮ ನಿರ್ಮಾಣದ ಚಿತ್ರದ ಬಗ್ಗೆ ಗಮನ ಹರಿಸಲಿದ್ದಾರೆ ಪ್ರೇಮ್.
ಮೊದಲನೇಯದ್ದೋ, ಎರಡನೆಯ ಚಿತ್ರವೋ...ಒಟ್ಟಿನಲ್ಲಿ ಪ್ರೇಮ್ ಬ್ಯಾನರ್ ನಲ್ಲಿ ಒಂದು ಚಿತ್ರವನ್ನ ಫ್ರೀಯಾಗಿ ನಿರ್ದೇಶನ ಮಾಡುವುದಕ್ಕೆ ಆರ್.ಚಂದ್ರು ಮನಸ್ಸು ಮಾಡಿದ್ದಾಗಿದೆ. ಹಣಕ್ಕಾಗಿ ಸ್ನೇಹಕ್ಕೆ ಕೊಳ್ಳಿ ಇಡುವ ಈಗಿನ ಕಾಲದಲ್ಲಿ, ಆರ್.ಚಂದ್ರು ಮತ್ತು ಪ್ರೇಮ್ ಎಲ್ಲರಿಗೂ ಮಾದರಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











