ಆರ್ ಚಂದ್ರು 'ಲಕ್ಷ್ಮಣ' ನಿಗೆ ತೆಲುಗಿನ 'ಅತನೊಕ್ಕಡೆ' ಸ್ಪೂರ್ತಿ
'ಚಾರ್ ಮೀನಾರ್' ಹಿಟ್ ನಿರ್ದೇಶಕ ಆರ್ ಚಂದ್ರು ಆಕ್ಷನ್-ಕಟ್ ಹೇಳುತ್ತಿರುವ 'ಲಕ್ಷ್ಮಣ' ಚಿತ್ರ 2005ರ ಸೂಪರ್ ಡೂಪರ್ ಹಿಟ್ ತೆಲುಗು ಚಿತ್ರ 'ಅತನೊಕ್ಕಡೆ'ಯಿಂದ ಸ್ಪೂರ್ತಿ ಪಡೆದ ಚಿತ್ರವಾಗಿದೆಯಂತೆ.
ಕಾಂಗ್ರೆಸ್ ನಾಯಕ ಎಚ್ ಎಂ ರೇವಣ್ಣ ಅವರ ಮಗ ಅನೂಪ್, ಕನ್ನಡತಿ ಮೇಘನಾ ಸುಂದರ್ ರಾಜ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಲಕ್ಷ್ಮಣ' ತೆಲುಗಿನಲ್ಲಿ ಕಲ್ಯಾಣ್ ರಾಮ್ ನಟಿಸಿದ್ದ 2005ರ 'ಅತನೊಕ್ಕಡೆ' ಚಿತ್ರದ ಸಂಪೂರ್ಣ ರಿಮೇಕ್ ಅಲ್ಲವಂತೆ, ಆದರೆ ಆ ಚಿತ್ರದ ಸ್ಪೂರ್ತಿ ಪಡೆದು ಕನ್ನಡ ಭಾಷೆಗೆ ಬೇಕಾಗುವ ಹಾಗೆ ಬದಲಾಯಿಸಿಕೊಂಡು ಸಿನಿಮಾ ಮಾಡಲಾಗಿದೆಯಂತೆ.['ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್]
ತೆಲುಗಿನಲ್ಲಿ ಕಲ್ಯಾಣ್ ರಾಮ್ ಮಾಡಿದ್ದ ಪಾತ್ರವನ್ನು ತಮ್ಮ ಮಗ ಅನೂಪ್ ಕೈಯಲ್ಲಿ ಮಾಡಿಸಬೇಕೆಂದು ಎಚ್ ಎಂ ರೇವಣ್ಣ ಅವರು 'ಅತನೊಕ್ಕಡೆ' ನಿರ್ದೇಶಕ ಎಸ್ ರೆಡ್ಡಿ ಅವರಿಂದ ಚಿತ್ರದ ಹಕ್ಕುಗಳನ್ನು ಖರೀದಿಸಿ ನಿರ್ದೇಶಕ ಚಂದ್ರು ಅವರನ್ನು ತಮ್ಮ ಮಗನ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲು ಆಯ್ಕೆ ಮಾಡಿದ್ದಾರೆ ಎಂದು ನಿರ್ದೇಶಕ ಚಂದ್ರು ಅವರು ಖ್ಯಾತ ಕನ್ನಡ ಪತ್ರಿಕೆ ಒಂದಕ್ಕೆ ಹೇಳಿಕೆ ನೀಡಿದ್ದಾರೆ.[ಎಚ್.ಎಂ.ರೇವಣ್ಣ ಪುತ್ರನ ಜೊತೆ ಮೇಘನಾ ರೋಮ್ಯಾನ್ಸ್]
ಜೊತೆಗೆ ರೇವಣ್ಣ ಅವರಿಗೆ ಕನ್ನಡ ಸಿನಿಮಾಗಳ ಬಗ್ಗೆ ಬಹಳಷ್ಟು ಅರಿವು ಇದ್ದು, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಅವರ ಇಂಗಿತವಾಗಿದೆ. ಒಟ್ನಲ್ಲಿ 'ಅತನೊಕ್ಕಡೆ' ಚಿತ್ರದಿಂದ ಸ್ಪೂರ್ತಿ ಪಡೆದುಕೊಂಡಿದ್ದರು ಕೂಡ ಇದೊಂಥರಾ ಹೊಸ ಅನುಭವ ಎನ್ನುತ್ತಾರೆ ನಿರ್ದೇಶಕ ಚಂದ್ರು ಅವರು.[ರಾಜಕಾರಣಿ ಪುತ್ರನ ಕೈಲಿ ಲಾಂಗು-ಗನ್ ಕೊಟ್ಟ ಚಂದ್ರು]
ಇನ್ನು ಚಿತ್ರದ ಬಹುತೇಕ ಭಾಗ ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ನ ಚಿತ್ರೀಕರಣಕ್ಕಾಗಿ ಸಾಹಸ ನಿರ್ದೇಶಕ ರವಿವರ್ಮಾ ಅವರಿಗಾಗಿ ಕಾಯುತ್ತಿದ್ದಾರಂತೆ. 'ಚಾರ್ ಮಿನಾರ್' ಹಾಗೂ 'ಮಳೆ' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ಚಂದ್ರು ಅವರಿಗೆ 'ಲಕ್ಷ್ಮಣ' ಕೈ ಹಿಡಿಯುತ್ತಾನ ಅಂತ ಕಾದು ನೋಡೋಣ.


Click it and Unblock the Notifications













