ಪ್ರಜಾಕೀಯ ಪಕ್ಷವನ್ನು ಮೆಚ್ಚಿ ಕೊಂಡಾಡಿದ ಖ್ಯಾತ ನಿರ್ದೇಶಕ: ಧನ್ಯವಾದ ಹೇಳಿದ ಉಪ್ಪಿ
ನಟ ಉಪೇಂದ್ರ ಸ್ಥಾಪಿಸಿರುವ ಪ್ರಜಾಕೀಯ ರಾಜಕೀಯ ಪಕ್ಷವು ನಿಧಾನಕ್ಕೆ ಜನರ ಗಮನ ಸೇಳೆಯಲು ಆರಂಭಿಸಿದೆ. ಚುನಾವಣಾ ರಾಜಕೀಯದಲ್ಲಿ ಯಶಸ್ಸು ಇನ್ನೂ ದೂರವಿದೆಯಾದರೂ ಜನರಿಗೆ ತನ್ನ ಉದ್ದೇಶವನ್ನು ಅರ್ಥ ಮಾಡಿಸುತ್ತಿದೆ ಪ್ರಜಾಕೀಯ.
ಬಹಳ ಭಿನ್ನವಾದ ಯೋಚನೆಗಳನ್ನಿಟ್ಟುಕೊಂಡು ಉಪೇಂದ್ರ ಪ್ರಜಾಕೀಯ ಪಕ್ಷ ಕಟ್ಟಿದ್ದಾರೆ. ಹಣವಿಲ್ಲದ, ಕಾರ್ಯಕರ್ತರಿಲ್ಲದ ಪ್ರಜೆಗಳಿಂದಲೇ ಆಯ್ಕೆಯಾದ ವ್ಯಕ್ತಿಯೇ ಅವರನ್ನು ಪ್ರತಿನಿಧಿಸಬೇಕೆಂಬ, ಕೆಲಸ ಮಾಡಿಯೇ ಮತ ಕೇಳಬೇಕೆಂಬ ಭಿನ್ನ ಯೋಚನೆ ಪ್ರಜಾಕೀಯದಲ್ಲಿದೆ.
ಉಪೇಂದ್ರ ಅವರು ಮೊದಲಿಗೆ ತಮ್ಮ ಪ್ರಜಾಕೀಯ ಯೋಜನೆಯನ್ನು ಬಹಿರಂಗವಾಗಿ ಹೇಳಿದಾಗ ಬಹಳಷ್ಟು ಜನ ನಕ್ಕಿದ್ದರು, ಈಗಲೂ ನಗುವವರಿದ್ದಾರೆ, ಆದರೆ ನಿಧಾನಕ್ಕೆ ಹಲವರು ಪ್ರಜಾಕೀಯದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಖ್ಯಾತ ನಿರ್ದೇಶಕರೊಬ್ಬರು ಪ್ರಜಾಕೀಯದ ಪ್ರಯತ್ನವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಪ್ರಜಾಕೀಯ ಮೆಚ್ಚಿಕೊಂಡ ಆರ್ಜಿವಿ
ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪ್ರಜಾಕೀಯದ ಯೋಜನೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಗೆ ಶಹಭಾಸ್ ಅಂದಿದ್ದಾರೆ.

ಪ್ರಜಾಕೀಯ ಹೊಸ ರಾಜಕೀಯ ಕ್ರಾಂತಿ: ವರ್ಮಾ
'ಪ್ರಜಾಕೀಯ ಹೊಸ ರಾಜಕೀಯ ಕ್ರಾಂತಿ. ರಾಜಕೀಯ ಪಕ್ಷಗಳೆಡೆಗೆ ಸಾಮಾನ್ಯರು ನೋಡುವ ದೃಷ್ಟಿಕೋನವನ್ನು ಇದು ಬದಲು ಮಾಡಲಿದೆ, ಉಪೇಂದ್ರ ಖಂಡಿತ ಅಭಿನಂದನಾರ್ಹರು' ಎಂದು ಟ್ವೀಟ್ ಮಾಡಿದ್ದಾರೆ ವರ್ಮಾ. ಇದಕ್ಕೆ ಪ್ರತಿಕ್ರಿಯಿಸಿರುವ ಉಪೇಂದ್ರ, ವರ್ಮಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವರ್ಮಾ ಮೆಚ್ಚಿನ ವಿಷಯ ರಾಜಕೀಯ
ರಾಮ್ ಗೋಪಾಲ್ ವರ್ಮಾ ಅವರ ಮೆಚ್ಚಿನ ವಿಷಯ ರಾಜಕೀಯ. ವರ್ಮಾ ಅವರ ಹಲವಾರು ಸಿನಿಮಾಗಳು ರಾಜಕೀಯದ ಮೇಲೆ ಆಧಾರಿತವಾಗಿವೆ. ಇತ್ತೀಚೆಗಷ್ಟೆ ಅವರು ಆಂಧ್ರದ ಮಾಜಿ ಸಿಎಂ ಎನ್ಟಿಆರ್ ಜೀವನದ ಬಗ್ಗೆ 'ಲಕ್ಷ್ಮೀಸ್ ಎನ್ಟಿಆರ್' ಸಿನಿಮಾ ತೆಗೆದಿದ್ದಾರೆ.
Recommended Video

'ಪ್ರಜಾಕೀಯವು ಹಣಕಾಸು ರಹಿತ ಪಕ್ಷ'
ಪ್ರಜಾಕೀಯವು ಹಣಕಾಸು ರಹಿತ, ಕಾರ್ಯಕರ್ತರು ಇಲ್ಲದ, ಸುಳ್ಳು ಭರವಸೆಗಳು ನೀಡದ, ರ್ಯಾಲಿ, ಜನಸಭೆಗಳು ಇಲ್ಲದ, ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರತಿಭಟನೆಗಳು ಮಾಡದ ಪ್ರಜೆಗಳ ಪಕ್ಷ ಆಗಿದೆ ಎಂದು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಿಕೊಂಡಿದೆ ಪ್ರಜಾಕೀಯ ಪಕ್ಷ.


Click it and Unblock the Notifications











