ಸ್ಯಾಂಡಲ್ ವುಡ್ ಗೆ ಕಲಾಸಾಮ್ರಾಟ್ ಎರಡನೇ ಕುಡಿ
ಕಲಾ ಸಾಮ್ರಾಟ್ ಎಸ್.ನಾರಾಯಣ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳಾಗಿವೆ. ಉತ್ತಮ ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಣಿಗೆ ಈಗಲೂ ಬೇಡಿಕೆ ಇದೆ.
''ನನ್ನಂತೆ ನನ್ನ ಮಗನೂ ಆಗಲಿ'' ಅಂತ ಚಿಕ್ಕವಯಸ್ಸಲ್ಲೇ ಸುಪುತ್ರ ಪಂಕಜ್ ರನ್ನ ಚಿತ್ರರಂಗಕ್ಕೆ ಕರೆತಂದ ನಾಣಿ, ಮುಂದಕ್ಕೆ ಮಗನನ್ನ ಹೀರೋ ಮಾಡಿದರು. ತಮ್ಮ ಆಕ್ಷನ್ ಕಟ್ ನಲ್ಲೇ ಪಂಕಜ್ ಗೋಸ್ಕರ ಸಾಲು ಸಾಲು ಸಿನಿಮಾಗಳನ್ನ ಮಾಡಿದ್ರೂ, ಪಂಕಜ್ 'ಅಜೇಯ'ನಾಗಲಿಲ್ಲ. ಇದೀಗ ಪಂಕಜ್ ಸಹೋದರನ ಸರದಿ.

ಸದ್ಯದಲ್ಲೇ ಪಂಕಜ್ ಸಹೋದರ ಪವನ್ ಕೂಡ 'ಚಾಕಲೇಟ್ ಹೀರೋ' ಆಗಿ ಬೆಳ್ಳಿತೆರೆ ಮೇಲೆ ಕಾಲಿಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಗಳನ್ನ ನಡೆಸುತ್ತಿದ್ದಾರೆ. ಅಪ್ಪನೊಂದಿಗೆ 'ದಕ್ಷ' ಚಿತ್ರದ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿರುವ ಪವನ್ ಗೆ ಫಿಲ್ಮ್ ಮೇಕಿಂಗ್ ಬಗ್ಗೆ ಹೆಚ್ಚಿನ ಜ್ಞಾನ ಇದೆ. [ಶ್ರೀನಿವಾಸ್ ಕೈಹಿಡಿದ ಎಸ್ ನಾರಾಯಣ್ ಪುತ್ರಿ ವಿದ್ಯಾಶ್ರೀ]
ಕಿರಿಯ ಪುತ್ರ ಪವನ್ ಗೆ ಒಳ್ಳೆಯ ಲಾಂಚ್ ನೀಡಬೇಕು ಅಂತ ಪ್ಲಾನ್ ಮಾಡಿರುವ ಎಸ್.ನಾರಾಯಣ್, ನಿರ್ದೇಶನದ ಹೊಣೆಯನ್ನ 'ಚಾರ್ಮಿನಾರ್' ಚಂದ್ರುಗೆ ವಹಿಸಿದ್ದಾರಂತೆ. ಮೊದಲಿನಿಂದಲೂ ಆರ್.ಚಂದ್ರು ಮತ್ತು ಎಸ್.ನಾರಾಯಣ್ ಅತ್ಯಾಪ್ತರು. ಅಲ್ಲದೇ, ನವಿರಾದ ಪ್ರೇಮಕಥೆಗಳಿಗೆ ಹೆಸರಾಗಿರುವ ಚಂದ್ರು, ಟಾಲಿವುಡ್ ನಲ್ಲೂ ಖ್ಯಾತಿ ಪಡೆಯುತ್ತಿರುವುದರಿಂದ ಪವನ್ ಗೆ ಬ್ರೇಕ್ ಸಿಗಬಹುದು ಅನ್ನುವ ನಂಬಿಕೆ ನಾಣಿಗಿದೆ.

ಬಂದಿರುವ ಆಫರ್ ನ ಒಪ್ಪಿಕೊಂಡಿರುವ ಆರ್.ಚಂದ್ರು, ಮೂರು ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಸಂಭಾವನೆ ಎಷ್ಟೇ ಕೊಟ್ಟರೂ ಆರ್.ಚಂದ್ರು, ಇದೀಗ 'ಚಾರ್ಮಿನಾರ್' ತೆಲುಗು ಅವತರಣಿಕೆಯ ಚಿತ್ರದಲ್ಲಿ ಬಿಜಿಯಾಗಿದ್ದಾರೆ. 'ಮಳೆ' ಚಿತ್ರ ನಿರ್ಮಾಣದ ಹೊಣೆಯೂ ಅವರ ಮೇಲಿರುವುದರಿಂದ, ಅದನ್ನೆಲ್ಲಾ ಮುಗಿಸಿದ ಬಳಿಕ ಪವನ್ ಆರಂಗೇಟ್ರಂ ಬಗ್ಗೆ ಯೋಚಿಸುತ್ತಾರಂತೆ. [ರಣ ಬರುವ ಮೊದಲೇ ಪಂಕಜ್ 'ರೆಡ್' ಸಿಗ್ನಲ್]
ಅಲ್ಲಿಗೆ, ವಿನಯ್ ರಾಜ್ ಕುಮಾರ್, ಮನೋರಂಜನ್ ರವಿಚಂದ್ರನ್, ರಾಜವರ್ಧನ್ ರಂತಹ 3G ಸ್ಟಾರ್ಸ್ ಸಾಲಿಗೆ ನಾಣಿ ಪುತ್ರ ಪವನ್ ನಾರಾಯಣ್ ಅಧಿಕೃತ ಸೇರ್ಪಡೆಯಾಗಿದ್ದಾರೆ. (ಏಜೆನ್ಸೀಸ್)


Click it and Unblock the Notifications











