Exclusive: ನೇರವಾಗಿ ಓಟಿಟಿಗೆ 'ರಾಘವೇಂದ್ರ ಸ್ಟೋರ್ಸ್'? ಸಂತೋಷ್ ಆನಂದ್ರಾಮ್ ಪ್ರತಿಕ್ರಿಯೆ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ಸಿನಿಮಾಗಳು ಒಂದರ ಹಿಂದೆ ಒಂದು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. KGF - 2 ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದ ಬೆನ್ನಲ್ಲೇ 'ಕಾಂತಾರ' ಸಿನಿಮಾ ಅಬ್ಬರಿಸುತ್ತಿದೆ. ಇದರ ನಡುವೆ ಸಂಸ್ಥೆಯ ಮುಂದಿನ ಸಿನಿಮಾ 'ರಾಘವೇಂದ್ರ ಸ್ಟೋರ್ಸ್' ಬಗ್ಗೆ ಚರ್ಚೆ ಶುರುವಾಗಿದೆ.
'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಹಾಗೂ 'ರಾಜಕುಮಾರ' ರೀತಿಯ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟ ಸಂತೋಷ್ ಆನಂದ್ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜಗ್ಗೇಶ್ ಸಿನಿಮಾ ಅಂದಮೇಲೆ ಹಾಸ್ಯಕ್ಕೆ ಬರ ಇರುವುದಿಲ್ಲ. ಈಗಾಗಲೇ 'ರಾಘವೇಂದ್ರ ಸ್ಟೋರ್ಸ್' ಟೀಸರ್ ಕೂಡ ರಿಲೀಸ್ ಆಗಿ ಗಮನ ಸೆಳೆದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಚಿತ್ರತಂಡ ರಿಲೀಸ್ ಡೇಟ್ ಕೂಡ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.
'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗುವ ಬದಲು ನೇರವಾಗಿ ಓಟಿಟಿಗೆ ಬರುತ್ತೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಇದು ಕೆಲವರಿಗೆ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಫಿಲ್ಮಿಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

100% ಸಿನಿಮಾ ಥಿಯೇಟರ್ಗೆ ಬರುತ್ತೆ
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ 12ನೇ ಸಿನಿಮಾ 'ರಾಘವೇಂದ್ರ ಸ್ಟೋರ್ಸ್'. ಶ್ವೇತಾ ಶ್ರೀವಾಸ್ತವ್ ಚಿತ್ರದಲ್ಲಿ ನವರಸ ನಾಯಕನಿಗೆ ಜೋಡಿಯಾಗಿ ಮಿಂಚಿದ್ದಾರೆ. ಸಂತೋಷ್ ಆನಂದ್ ರಾಮ್ ಹಾಗೂ ಜಗ್ಗೇಶ್ ಕಾಂಬಿನೇಷನ್ ಹೇಗಿರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇನ್ನು ಸಿನಿಮಾ ನೇರವಾಗಿ ಓಟಿಟಿಗೆ ಬರುತ್ತಾ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿರುವ ಸಂತು, "ಅದೆಲ್ಲ ಸುಳ್ಳು. ಹಾಗೊಂದು ವೇಳೆ ಇದ್ದಿದ್ದರೆ ನಾವೇ ಹೇಳುತ್ತಿದ್ದೆವು. ಅದು ಬರೀ ಗಾಳಿ ಸುದ್ದಿ ಅಷ್ಟೆ. 100% ಸಿನಿಮಾ ಥಿಯೇಟರ್ಗೆ ಬರುತ್ತದೆ." ಎಂದಿದ್ದಾರೆ.

'ರಾಘವೇಂದ್ರ ಸ್ಟೋರ್ಸ್' ರಿಲೀಸ್ ಯಾವಾಗ?
ಸಿನಿಮಾ ನೇರವಾಗಿ ಓಟಿಟಿಗೆ ಬರುವುದಿಲ್ಲ ಎನ್ನುವುದು ಕನ್ಫರ್ಮ್ ಆಯಿತು. ಹಾಗಾದರೆ ಜಗ್ಗಣ್ಣ ಥಿಯೇಟರ್ಗೆ ಬಂದು ಹಾಸ್ಯದ ನಳಪಾಕ ಉಣಬಡಿಸುವುದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಂತೋಷ್ ಆನಂದ್ ರಾಮ್ "ಸದ್ಯ ಹೊಂಬಾಳೆ ಸಂಸ್ಥೆ 'ಕಾಂತಾರ' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅದು ಮುಗಿದ ಮೇಲೆ 'ರಾಘವೇಂದ್ರ ಸ್ಟೋರ್ಸ್' ರಿಲೀಸ್ ಬಗ್ಗೆ ಮಾಹಿತಿ ಸಿಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ಮದುವೆ ಆಗದ ಅಡುಗೆ ಭಟ್ಟನ ಗೋಳು
'ರಾಘವೇಂದ್ರ ಸ್ಟೋರ್ಸ್' ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ಹೋಟೆಲ್ನಲ್ಲಿ ಅಡುಗೆ ಭಟ್ಟನ ಕೆಲಸ ಮಾಡಿಕೊಂಡಿರುವ ನಾಯಕನಿಗೆ ವಯಸ್ಸು 40 ದಾಟಿದರೂ ಮದುವೆ ಆಗಿರಲ್ಲ. ಮದುವೆ ಆಗಲು ಆತ ಏನೆಲ್ಲಾ ಪಾಡು ಪಟ್ಟುತ್ತಾನೆ ಎನ್ನುವುದನ್ನು ಫನ್ನಿಯಾಗಿ ಸಂತೋಷ್ ಆನಂದ್ರಾಮ್ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನು ಸಾಕಷ್ಟು ಅಂಶಗಳು ಸಿನಿಮಾದಲ್ಲಿದೆ. ಜಗ್ಗಣ್ಣ ತಮ್ಮ ಹಾವಭಾವ ಹಾಗೂ ಕಾಮಿಡಿ ಟೈಮಿಂಗ್ನಿಂದ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡಲು ಬರುತ್ತಿದ್ದಾರೆ.

ಶೀಘ್ರದಲ್ಲೇ ಯುವ ಸಿನಿಮಾ ಅಪ್ಡೇಟ್
ಯುವ ರಾಜ್ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಜವಾಬ್ದಾರಿಯನ್ನು ಕೂಡ ಹೊಂಬಾಳೆ ಸಂಸ್ಥೆ ವಹಿಸಿಕೊಂಡಿದೆ. ಈ ಚಿತ್ರದ ಸಾರಥ್ಯ ಕೂಡ ಸಂತೋಷ್ ಆನಂದ್ ರಾಮ್ ಹೆಗಲೇರಿದೆ. ಯುವ- ಸಂತು ಕ್ರೇಜಿ ಕಾಂಬಿನೇಷನ್ನಲ್ಲಿ ಒಂದು ಬೊಂಬಾಟ್ ಸಿನಿಮಾ ನಿರೀಕ್ಷೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಸಿನಿಮಾ ಅಪ್ಡೇಟ್ ನೀಡುವುದಾಗಿ ನಿರ್ದೇಶಕರು ಟ್ವೀಟ್ ಮಾಡಿ ತಿಳಿಸಿದ್ದಾರೆ.


Click it and Unblock the Notifications











