ಇದು ಹಠ ಮತ್ತು ಹಂಬಲದ 'ಮೈತ್ರಿ' ಅಂದ್ರು ಶಶಾಂಕ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಮೈತ್ರಿ' ಚಿತ್ರದ ಬಗ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಈ ಚಿತ್ರದಲ್ಲಿನ ಪುನೀತ್ ಅವರ ಅಮೋಘ ಅಭಿನಯ, ಬಿ.ಎಂ ಗಿರಿರಾಜ್ ಅವರ ಅದ್ಭುತ ನಿರ್ದೇಶನಕ್ಕೆ ಸ್ಯಾಂಡಲ್ ವುಡ್ ಥ್ರಿಲ್ ಆಗಿದೆ.
ಈ ಬಗ್ಗೆ ನಿರ್ದೇಶಕ ಶಶಾಂಕ್ ಅವರು ತಮ್ಮ ಶಿಷ್ಯ ಗಿರಿರಾಜ್ ಅವರ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಪುಟದಲ್ಲಿ ಅವರು 'ಮೈತ್ರಿ' ಚಿತ್ರವನ್ನು ಕೊಂಡಾಡಿದ್ದಾರೆ. ಅದರ ಯಥಾವತ್ತು ಹೇಳಿಕೆ ಇಲ್ಲಿದೆ ನೋಡಿ. [ಮೈತ್ರಿ ಚಿತ್ರ ವಿಮರ್ಶೆ]
"ಕಮರ್ಷಿಯಲ್ ಸಿನಿಮಾ ಸೂತ್ರಗಳಿಗೆ ಹೊರತಾದ ಸಿನಿಮಾ ಮಾಡಬೇಕೆಂಬ ನಿರ್ದೇಶಕನೊಬ್ಬನ ಹಠ! ಯಾವ ಸೂತ್ರಗಳಿರದಿದ್ದರೂ ಸರಿ, ಜನ ಮೆಚ್ಚುವಂತಹ ಹೊಸತನದ ಸಿನಿಮಾ ಮಾಡಬೇಕೆಂಬ ಸ್ಟಾರ್ ನಟನೊಬ್ಬನ ಹಂಬಲ! ಇವೆರಡರ ಮೈತ್ರಿಯೇ 'ಮೈತ್ರಿ' ಎಂಬ ಅಪರೂಪದ ಸಿನಿಮಾ!"

"ಒಂದೆಡೆ ಪ್ರಬುದ್ಧ ಸಿನಿಮಾ ಎನಿಸಿಕೊಳ್ಳುತ್ತಾ, ಮತ್ತೊಂದೆಡೆ ಜನಾಕರ್ಷಣೆಗೂ ಒಳಗಾಗುತ್ತಿರುವ ಮೈತ್ರಿಯ ಗೆಲುವು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪನ್ನು ತುಂಬುವುದು ಖಚಿತ. ನನ್ನ ಶಿಷ್ಯನೊಬ್ಬ ಇಂತಹ ಚಿತ್ರವನ್ನು ನಿರ್ದೇಶಿಸಿರುವುದು ನಿಜಕ್ಕೂ ನಾನು ಹೆಮ್ಮೆ ಪಡುವಂತಹ ವಿಚಾರ".
"ತಮ್ಮ ಸ್ಟಾರ್ ಇಮೇಜನ್ನು ಬದಿಗಿಟ್ಟು ಗಿರಿರಾಜನ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪುನೀತ್ ರಾಜ್ ಕುಮಾರ್ ನಿಜಕ್ಕೂ ಅಭಿನಂದನಾರ್ಹರು. ಕನ್ನಡ ಪ್ರೇಕ್ಷಕರಿಗೆ ಅವರ ಮೇಲಿರುವ ಅಭಿಮಾನ ಮತ್ತು ಗೌರವ ಈ ಚಿತ್ರದಿಂದ ಇನ್ನಷ್ಟು ಹೆಚ್ಚಾಗುವುದು ಖಂಡಿತ ಮತ್ತು ಅದರ ಕ್ರೆಡಿಟ್ಟು ಅಂತಹ ಪಾತ್ರ ಸೃಷ್ಟಿಸಿದ ಗಿರಿರಾಜ್ ಗೂ ಸಹ ಸಲ್ಲಬೇಕು".
"ಇಂತಹ ಉತ್ತಮ ಚಿತ್ರ ನಿರ್ಮಿಸಿದ, ನಿರ್ಮಾಪಕ ರಾಜ್ ಕುಮಾರ್ ಮತ್ತು ಇಡಿ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು" ಎಂದಿದ್ದಾರೆ ಶಶಾಂಕ್. ಒಟ್ಟಾರೆ ನಿರ್ದೇಶಕರೊಬ್ಬರ ಉತ್ತಮ ಪ್ರಯತ್ನವನ್ನು ಇನ್ನೊಬ್ಬ ನಿರ್ದೇಶಕರು ಗುರುತಿಸಿ ಬೆನ್ನುತಟ್ಟುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











