ಡಬ್ಬಿಂಗ್ ಬೇಕೋ ಬೇಡವೋ : ಸಂವಾದದಲ್ಲಿ ಪಾಲ್ಗೊಳ್ಳಿ
ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ 'ದೃಶ್ಯ ಮಾಧ್ಯಮಗಳಲ್ಲಿ ಡಬ್ಬಿಂಗ್ ಬೇಕೋ ಬೇಡವೋ' ಎನ್ನುವ ಪ್ರಸ್ತುತ ವಿಷಯದ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಡಬ್ಬಿಂಗ್ ನ ಸಾಧಕ ಬಾಧಕಗಳನ್ನು, ಡಬ್ಬಿಂಗ್ ಕನ್ನಡಕ್ಕೆ ಪೂರಕವೋ ಮಾರಕವೋ ಎನ್ನುವುದನ್ನು ಕುರಿತು ಅರ್ಥಪೂರ್ಣವಾದ ವಿಚಾರ ಮಂಡನೆ ಮತ್ತು ಸಂವಾದವನ್ನು ಆಯೋಜಿಸಲಾಗಿದೆ.
ಚಲನಚಿತ್ರ ನಿರ್ದೇಶಕರುಗಳಾದ ಬಿ.ಸುರೇಶ್ ಮತ್ತು ರಾಧಾಕೃಷ್ಣ ಪಲ್ಲಕ್ಕಿ ಹಾಗೂ ಸೃಷ್ಟಿ ಸಂಸ್ಥೆ ನಿರ್ದೇಶಕರಾದ ಶಶಿಕಾಂತ ಯಡಹಳ್ಳಿಯವರು ವಿಚಾರವನ್ನು ಮಂಡಿಸಲಿದ್ದಾರೆ. ಡಬ್ಬಿಂಗನ್ನು ಖಡಾಖಂಡಿತವಾಗಿ ವಿರೋಧಿಸುತ್ತಿರುವವರಲ್ಲಿ ನಟ ಮತ್ತು ನಿರ್ದೇಶಕ ಬಿ ಸುರೇಶ್ ಅವರು ಮೊದಲಿಗರಾಗಿದ್ದಾರೆ. ಸಂವಾದದಲ್ಲಿ ನೀವು ಕೂಡಾ ಭಾಗವಹಿಸಬಹುದಾಗಿದೆ.

02-02-2014 ರಂದು ಭಾನುವಾರ ಸಾಯಂಕಾಲ 4.30 ಗಂಟೆಗೆ 'ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ', ಶಾಂತಿನಿವಾಸ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪಕ್ಕ, ಆತ್ರಿಯಾ ಹೋಟೆಲಿನ ಎದುರು, ಪ್ಯಾಲೇಸ್ ರಸ್ತೆ, ಪ್ರೀಡಂ ಪಾರ್ಕ ಹತ್ತಿರ, ಬೆಂಗಳೂರು. ಇಲ್ಲಿ ಸೆಮಿನಾರ್ ನಡೆಯುತ್ತಿದ್ದು ಆಸಕ್ತರಿಗೆಲ್ಲಾ ಆಹ್ವಾನವಿದೆ. [ಡಬ್ಬಿಂಗ್ ವಿರುದ್ಧ ಪ್ರತಿಭಟನೆ]
ಡಬ್ಬಿಂಗ್ ವಿರೋಧಿಸುತ್ತಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ಕನ್ನಡಪರ ಹೋರಾಟಗಾರರು ಜನವರಿ 27ರಂದು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಹಲವಾರು ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಪ್ರತಿಭಟನೆಯಲ್ಲಿ ಡಬ್ಬಿಂಗ್ ಬೆಂಬಲಿಸುತ್ತಿರುವ ಹಿರಿಯ ಸಾಹಿತಿಗಳ ವಿರುದ್ಧ ಮಾತುಗಳು ಕೂಡ ಕೇಳಿಬಂದವು. [ಕಂಬಾರರ ವಿರುದ್ಧ ಪ್ರೇಮ್ ಕಿಡಿ]
ಡಬ್ಬಿಂಗ್ ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಆದರೆ, ಡಬ್ಬಿಂಗ್ ಸಾಧಕ ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಿದೆ. ಡಬ್ಬಿಂಗ್ ಬೇಡವೆಂದರೆ ರೀಮೇಕ್ ಕೂಡ ಬೇಡ. ಅದನ್ಯಾಕೆ ಪ್ರೋತ್ಸಾಹಿಸುತ್ತೀರಿ ಎಂಬ ಮಾತುಗಳು ಕನ್ನಡ ಚಿತ್ರ ಪ್ರೇಮಿಗಳು ಕೇಳುತ್ತಿದ್ದಾರೆ. ಆದರೆ, ರಿಮೇಕನ್ನೇ ಅತಿಯಾಗಿ ನೆಚ್ಚಿಕೊಂಡು, ಡಬ್ಬಿಂಗ್ ವಿರೋಧಿಸುತ್ತಿರುವ ತಾರಾಮಣಿಗಳ ಬಳಿ ಈ ಪ್ರಶ್ನೆಗೆ ಸದ್ಯ ಉತ್ತರವಿಲ್ಲ.


Click it and Unblock the Notifications











