ತಾರೆ ಅನುಷ್ಕಾ ಶೆಟ್ಟಿಗೆ ನಾಯಿ ಕಡಿತ ಆಸ್ಪತ್ರೆಗೆ ದಾಖಲು
ಸದ್ಯಕ್ಕೆ ಅನುಷ್ಕಾ ಅವರು ತಮಿಳಿನ 'ಇರಂಡಮ್ ಉಲಗಂ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ ನಟ ಆರ್ಯ. ಆಕ್ಷನ್ ಕಟ್ ಹೇಳುತ್ತಿರುವವರು ಸೆಲ್ವರಾಘವನ್. ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಜಾರ್ಜಿಯಾದಲ್ಲಿ ನಡೆಯಿತು.
ಆದರೆ ಅಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಚಿತ್ರತಂಡ ಬಹಳಷ್ಟು ತೊಂದರೆ ಅನುಭವಿಸಿತ್ತು. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲವಂತೆ. ಸೂಕ್ತ ಶೌಚಾಲಯ ವ್ಯವಸ್ಥೆಯಾಗಲಿ ಮಲಗಲು ಹಾಸಿಗೆ ಆಗಲಿ ಇರಲಿಲ್ಲವಂತೆ. ಇಷ್ಟೆಲ್ಲಾ ತೊಂದರೆ ಅನುಭವಿಸಿ ಚಿತ್ರತಂಡ ಚೆನ್ನೈಗೆ ಹಿಂತಿರುಗಿದೆ.
ಇದೇ ಖುಷಿಗೆ ಚಿತ್ರದ ನಿರ್ದೇಶಕ ಸೆಲ್ವರಾಘವನ್ ಚಿತ್ರತಂಡಕ್ಕೆ ಪಂಚತಾರಾ ಹೋಟೆಲ್ ಒಂದರಲ್ಲಿ ಸಂತೋಷ ಕೂಟವೊಂದನ್ನು ಏರ್ಪಡಿಸಿದ್ದರು. ಆ ಸಂತೋಷ ಕೂಟವೇನೋ ಜೋರಾಗಿಯೇ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಯಾರೋ ಕೈ ಒರೆಸಿಕೊಂಡು ಬಿಸಾಕಿದ್ದ ಟಿಶ್ಯೂ ಪೇಪರ್ ಗೆ ಸಾಕುನಾಯಿಯೊಂದು ಗಬಕ್ಕನೆ ಬಾಯಿ ಹಾಕಿದೆ.
ಇದನ್ನು ನೋಡಿದ ಅನುಷ್ಕಾ ಅಯ್ಯೋ ಪಾಪ ಪೇಪರ್ ತಿನ್ನುತ್ತಿದೆಯಲ್ಲಾ ಈ ಪಪ್ಪಿ ಎಂದುಕೊಂಡು ಟಿಶ್ಯೂ ಪೇಪರನ್ನು ನಾಯಿಯ ಬಾಯಿಂದ ಹೊರಗೆಳೆಯಲು ಹೋಗಿದ್ದಾರೆ. ಆದರೆ ನಾಯಿಗೇನು ಗೊತ್ತಾಗುತ್ತದೆ ಅನುಷ್ಕಾ ಕಳಕಳಿ. "ಅಯ್ಯೋ ನನ್ನ ಪೇಪರ್ ಕಿತ್ತುಕೊಳ್ತೀಯಾ ತಡಿ ಮಾಡ್ತೀನಿ..." ಎಂದು ಅನುಷ್ಕಾ ಕೈಗೆ ಬಾಯಿ ಹಾಕಿದೆ.
ಅಷ್ಟೇ ಆಕೆಯ ಕೋಮಲವಾದ ಕೈ ಮೇಲೆ ನಾಯಿಯ ಕೋರೆ ಹಲ್ಲುಗಳು ಇಳಿದಿವೆ. ಬಳಿಕ ಆಕೆಗೆ ಚಿಕಿತ್ಸೆ ನೀಡಿ ರೇಬೀಸ್ ಲಸಿಕೆ ಹಾಕಿಸಲಾಗಿದೆ. ಒಟ್ಟಾರೆಯಾಗಿ ಅನುಷ್ಕಾ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ. ಅತ್ತ ನಾಯಿ ಕೂಡ ಪ್ರಾಣಾಪಾಯದಿಂದ ಪಾರಾಗಿದೆಯಂತೆ! (ಏಜೆನ್ಸೀಸ್)


Click it and Unblock the Notifications












