ಬಹುಮುಖಿ ಪ್ರತಿಭೆ ಅರುಣ್ ಸಾಗರ್ ಡಬಲ್ ಧಮಾಕಾ
ಸ್ಯಾಂಡಲ್ ವುಡ್ ನಲ್ಲಿ ಪರಭಾಷಾ ನಟರು ಮಿಂಚಿದ್ದು ಕಡಿಮೆ. ಆದರೆ ಸ್ಯಾಂಡಲ್ ವುಡ್ ಪ್ರತಿಭೆಗಳು ಮಾತ್ರ ಇದಕ್ಕೆ ತದ್ವಿರುದ್ಧ. ಪರಭಾಷಾ ಚಿತ್ರಗಳಲ್ಲಿ ಮಿಂಚಿದವರೇ ಅಧಿಕ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಅರ್ಜುನ್ ಸರ್ಜಾ, ಕಿಶೋರ್, ಮುರಳಿ, ಪ್ರಕಾಶ್ ರೈ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಇದೀಗ ಈ ಪಟ್ಟಿಗೆ ಹೊಸದಾಗಿ ಕಲಾ ನಿರ್ದೇಶಕ, ನಿರ್ದೇಶಕ ಹಾಗೂ ಬಹುಮುಖಿ ಪ್ರತಿಭೆ ಅರುಣ್ ಸಾಗರ್ ಸೇರ್ಪಡೆಯಾಗಿದ್ದಾರೆ. 'ಸಂಡಮಾರುತಂ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಚಿತ್ರದಲ್ಲಿ ಅವರದು ಖಳನಟನ ಪಾತ್ರ.

ಜನಪ್ರಿಯ ನಟ ಸರತ್ ಕುಮಾರ್ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ ಅರುಣ್ ಸಾಗರ್. ವಿಶೇಷ ಎಂದರೆ ಅರುಣ್ ಸಾಗರ್ ಅಭಿನಯದ ಬೆಂಕಿಪಟ್ಣ ಚಿತ್ರ ಹಾಗೂ ತಮಿಳಿನ ಸಂಡಮಾರುತಂ ಚಿತ್ರಗಳು ಒಂದೇ ದಿನ ಅಂದರೆ ಫೆಬ್ರವರಿ 20ರಂದು ತೆರೆಕಾಣುತ್ತಿರುವುದು.
ಬೆಂಕಿಪಟ್ಣ ಚಿತ್ರದಲ್ಲಿ ಅರುಣ್ ಸಾಗರ್ ಅವರದು ಪ್ರಮುಖ ಪಾತ್ರವಾದರೆ 'ಸಂಡಮಾರುತಂ' ಚಿತ್ರದಲ್ಲಿ ಸೆಲ್ವಂ ಆಗಿ ಗಮನಸೆಳೆಯಲಿದ್ದಾರೆ. ಸರತ್ ಕುಮಾರ್ ಅವರ ಸ್ವಂತ ನಿರ್ಮಾಣದ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಸರತ್ ಕುಮಾರ್ ಅವರೇ ಕಥೆ ಬರೆದಿರುವುದು ಇನ್ನೊಂದು ವಿಶೇಷ.
ಈ ಚಿತ್ರದಲ್ಲಿ ಮತ್ತೊಬ್ಬ ಕನ್ನಡ ನಟ ಅವಿನಾಶ್ ಸಹ ಅಭಿನಯಿಸಿದ್ದಾರೆ. ಈಟಿವಿ ಕನ್ನಡದಲ್ಲಿ ಆರಂಭವಾದ 'ಬಿಗ್ ಬಾಸ್' ಸೀಸನ್ 1ರಲ್ಲಿ ಅರುಣ್ ಸಾಗರ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕೂದಲೆಳೆ ಅಂತರದಲ್ಲಿ ಅವರಿಗೆ ಬಿಗ್ ಬಾಸ್ ಕಿರೀಟ ತಪ್ಪಿಹೋಗಿತ್ತು. ಅರುಣ್ ಸಾಗರ್ ಅವರಿಗೆ 'ಬಿಗ್ ಬಾಸ್' ಪಟ್ಟ ತಪ್ಪಿದ್ದಕ್ಕೆ ಅವರ ಅಪಾರ ಅಭಿಮಾನಿ ಬಳಗ ಅತೀವ ನಿರಾಸೆ ಪಟ್ಟಿತ್ತು.


Click it and Unblock the Notifications











