ಭಾರತಿ ವಿಷ್ಣುವರ್ಧನ್ ಗೆ ಗೋಲ್ಡನ್ ಜ್ಯೂಬಿಲಿ ಹಬ್ಬ
ಅಭಿಮಾನಿಗಳ ಆರಾಧ್ಯ ದೈವ ಡಾ. ವಿಷ್ಣುವರ್ಧನ್ ಅವರ ಪತ್ನಿ ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಈ ವರ್ಷ ಸುವರ್ಣ ಸಂಭ್ರಮಾಚರಣೆ ವರ್ಷ.
ಬಣ್ಣದ ಲೋಕಕ್ಕೆ ಕಾಲಿಟ್ಟ ಮರಾಠಿ ಬೆಡಗಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಯಾಗಿ, ಧಾರಾವಾಹಿಗಳ ಮೂಲಕ 'ಅಮ್ಮ' ನಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ಸದಾ ಕಾಲ ಸ್ನೇಹಜೀವಿಯಾಗಿ ಬೆಳೆದ ಪರಿ ಅನುಕರಣೀಯ.
ಆಗಸ್ಟ್ ಹದಿನೈದರಂದು ಹುಟ್ಟಿದ ಕಾರಣಕ್ಕಾಗಿಯೇ ಅಪ್ಪ ಅಮ್ಮ ಪ್ರೀತಿಯಿಂದ "ಭಾರತಿ" ಎಂದು ಹೆಸರಿಟ್ಟಿದ್ದರು. 1964ರಲ್ಲಿ 'ಗೀತ್ ಗಾಯ ಪತ್ತರೋ ನೆ' ಹಿಂದಿ ಚಿತ್ರದಲ್ಲಿ 'ಚಂಚಲ್' ಎಂಬ ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿತೆರೆಗೆ ಬಂದ ಈ ತಾರೆ ನಂತರ 'ಲವ್ ಇನ್ ಬೆಂಗಳೂರು' ಎನ್ನುವ ಮೂಲಕ ಬೆಂಗಳೂರಿನ ಗಾಂಧಿನಗರಕ್ಕೆ ಕಾಲಿಟ್ಟರು. ಭಾರತಿ ಅವರು ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದು 50 ವರ್ಷಗಳು ತುಂಬಿವೆ.

ಹಿಂದಿ ಭಾಷೆ ಚಿತ್ರದಿಂದ ಆರಂಭವಾದ ಸಿನಿಪಯಣ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಮುಂದುವರೆಯಿತು. ಎಲ್ಲಾ ಭಾಷೆಗಳಲ್ಲೂಸಿನಿರಸಿಕರನ್ನು ಮೆಚ್ಚಿಸಿದ ನಾಯಕಿ.
ಡಾ. ರಾಜ್ ಕುಮಾರ್ ಜೋಡಿಯಾಗಿ ಮೇಯರ್ ಮುತ್ತಣ್ಣ, ಸಂಧ್ಯಾರಾಗ, ಶ್ರೀಕೃಷ್ಣದೇವರಾಯ, ಬಂಗಾರದ ಮನುಷ್ಯ, ಹೃದಯ ಸಂಗಮ, ಎಮ್ಮೆ ತಮ್ಮಣ್ಣ, ದೂರದ ಬೆಟ್ಟ ಚಿತ್ರ ಮರೆಯಲು ಸಾಧ್ಯವಿಲ್ಲ. ಡಾ. ವಿಷ್ಣುವರ್ಧನ್ ಜೋಡಿಯಾಗಿ ಬಂಗಾರದ ಜಿಂಕೆ, ನಾಗರಹೊಳೆ, ಮಕ್ಕಳ ಭಾಗ್ಯ, ಅಣ್ಣ ಅತ್ತಿಗೆ, ದೇವರ ಗುಡಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. [ವಿಷ್ಣುವರ್ಧನ್ ಬಗ್ಗೆ ಹಲವು ಆಸಕ್ತಿಕರ ಸಂಗತಿ]
ದಿಲೀಪ್ ಕುಮಾರ್, ಅಕ್ಕಿನೇನಿ ನಾಗೇಶ್ವರ್ ರಾವ್, ಡಾ. ಎನ್ಟಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಮನೋಜ್ ಕುಮಾರ್, ಜೈಶಂಕರ್, ವಿ ರವಿಚಂದ್ರನ್, ಅನಂತ್ ನಾಗ್, ಶೋಬನ್ ಬಾಬು, ಕೃಷ್ಣ, ಕಲ್ಯಾಣ್ ಕುಮಾರ್, ಉದಯ ಕುಮಾರ್, ಕಾಂತರಾವ್, ಎವಿಎಂ ರಾಜನ್, ಕೃಷ್ಣಮ್ ರಾಜು, ಶಿವಕುಮಾರ್, ವಿನೋದ್ ಖನ್ನ, ಸುನಿಲ್ ದತ್, ರಾಕೇಶ್ ರೋಷನ್, ಅಂಬರೀಷ್, ಚಲಂ, ರಾಜೇಶ್, ಗಂಗಾಧರ್, ವಿನೋದ್ ಮೆಹ್ರಾ, ಮೋಹನ್ ಲಾಲ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ನಟರ ಜತೆ ಭಾರತಿ ನಟಿಸಿ ಸೈ ಎನಿಸಿಕೊಂಡವರು.
ಭಾರತಿ ವಿಷ್ಣುವರ್ಧನ್ ಅವರ ಸುವರ್ಣ ಸಿನಿ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಭಾರತಿ ವಿಷ್ಣುವರ್ಧನ್ ಅವರ ಪುತ್ರಿ ಕೀರ್ತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ್ ನಿರ್ಧರಿಸಿದ್ದಾರೆ. ಈ ಬಗ್ಗೆ ವಿವರ ನೀಡಲು ಹಾಗೂ ತಮ್ಮ ಸಂತಸ ಹಂಚಿಕೊಳ್ಳಲು ಸ್ವತಃ ಭಾರತಿ ಅವರೇ ನಗರದ ಬೆಲ್ ಹೊಟೆಲ್ ನಲ್ಲಿ ಆ.2ರಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಿತ್ರರಂಗ ಹಾಗೂ ಕಿರುತೆರೆಯನ್ನು ಬೆಳಗಿದ ತಾರೆ ಭಾರತಿ ಅವರಿಗೆ ಒನ್ ಇಂಡಿಯಾ ಕನ್ನಡ ತುಂಬು ಹೃದಯದ ಶುಭ ಹಾರೈಕೆ ಸಲ್ಲಿಸುತ್ತದೆ.


Click it and Unblock the Notifications











