ಬಾಗಲಕೋಟೆಯಲ್ಲಿ 'ಡಾ ರಾಜ್ ಕಪ್-3' ಝಲಕ್
ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ, ಶ್ರೀನಗರ ಕಿಟ್ಟಿ, ಯೋಗೇಶ್, ಮದನ್ ಪಟೇಲ್ ಸೇರಿದಂತೆ ಸಾಕಷ್ಟು ಕಲಾವಿದರು ಉತ್ತರ ಕರ್ನಾಟಕದ ನೆಲದಲ್ಲಿ ಬ್ಯಾಟ್ ಹಾಗೂ ಬಾಲ್ ಹಿಡಿದು ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದರು. ನೆತ್ತಿ ಸುಡುವ ಬಿಸಿಲು ಹಾಗೂ ಪೊಲೀಸ್ ಲಾಠಿ ಪ್ರಹಾರವನ್ನೂ ಲೆಕ್ಕಿಸದೇ ಸಾವಿರಾರು ಜನರು ಅಲ್ಲಿ ತಾರೆಗಳ ಕ್ರಿಕೆಟ್ ಪಂದ್ಯವನ್ನು ನೋಡಿ ಕೇಕೆ ಚಪ್ಪಾಳೆಗಳ ಸುರಿಮಳೆಗೆ ಸಾಕ್ಷಿಯಾದರು.
ಕನ್ನಡ ಸಿನಿಮಾಗಳನ್ನು ನೋಡಿದಷ್ಟೇ ಪ್ರೀತಿಯಿಂದ ಸಿನಿಮಾ ನಟರಾಡಿದ ಕ್ರಿಕೆಟ್ ಪಂದ್ಯಾಟ ಕೂಡ ನೋಡಿ ಉತ್ತರ ಕರ್ನಾಟಕದ ಮಂದಿ ನೀಡಿದ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯ ಎನಿಸಿತು. ಅಲ್ಲಿದ್ದ ಕಲಾವಿದರು ಜನರ ಪ್ರೀತಿ ಕಂಡು ಅಚ್ಚರಿಗೊಳಗಾಗಿದ್ದು ಕಂಡುಬಂತು. ದಸರಾ ಹಬ್ಬವನ್ನು ಮುಗಿಸಿದ್ದ ಅಲ್ಲಿನ ಮಂದಿ ಈ ಪಂದ್ಯಾಟವನ್ನೂ ಕೂಡ ಮಹಾಹಬ್ಬವೆಂಬಂತೆ ಆಚರಿಸಿದರು. ಪಂದ್ಯದ ಪ್ರಾರಂಭದಿಂದ ಕೊನೆಯವರೆಗೂ ಇದ್ದು ಉತ್ತರ ಕರ್ನಾಟಕದ ಮಂದಿ ಭಾರಿ ಅಭಿಮಾನ ಮೆರೆದರು.
ಮೊದಲು ಫೀಲ್ಡ್ ಗೆ ಇಳಿದ ವಿಲನ್ ತಂಡ, ಎಂಎಲ್ಎ ಲೆನ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಜಯ ರೋಚಕ ಗೆಲುವು ಪಡೆಯುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿತು. ಫೈಟರ್ಸ್ ಮತ್ತು ಆರ್ ಜಿ ಮೀಡಿಯನ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಫೈಟರ್ಸ್ ತಂಡ ಸುಲಭ ಗೆಲುವು ಸಾಧಿಸಿತು. ನಂತರ ಪ್ರೆಸ್ ಕ್ಲಬ್ ಹಾಗೂ ಯಂಗ್ ಸ್ಟಾರ್ ತಂಡಗಳ ನಡುವೆ ನಡೆದ ಮೂರನೇ ಪಂದ್ಯದಲ್ಲಿ ಯಂಗ್ ಸ್ಟಾರ್ ತಂಡದ ವಿರುದ್ಧ ಪ್ರೆಸ್ ಕ್ಲಬ್ ತಂಡ 95 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. (ಒನ್ ಇಂಡಿಯಾ ಕನ್ನಡ)


Click it and Unblock the Notifications












