ಡಿಸೆಂಬರ್ 2 ರಿಂದ ಬೆಂಗಳೂರಿನಲ್ಲಿ 'ಡಾ.ರಾಜ್ ಕುಮಾರ್ ರಾಷ್ಟ್ರೀಯ ಉತ್ಸವ'
ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅವರ ಹೆಸರಿನಲ್ಲಿ ರಾಷ್ಟ್ರೀಯ ಉತ್ಸವವನ್ನ ಹಮ್ಮಿಕೊಳ್ಳಲಾಗಿದ್ದು, ಡಿಸೆಂಬರ್ 2 ರಿಂದ ಡಿಸೆಂಬರ್ 4 ವರೆಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
'ಕನ್ನಡ ಮತ್ತು ಸಂಸ್ಕೃತಿ ಇಲಾಖೆ'ಯ ಸಹಕಾರದೊಂದಿಗೆ 'ಡಾ.ರಾಜ್ ಕುಮಾರ್ ರಾಷ್ಟ್ರೀಯ ಉತ್ಸವ ಸಂಘಟನಾ ಸಮಿತಿ', ಈ ಉತ್ಸವವನ್ನ ಅಯೋಜಿಸಿದೆ. ಈ ಮೂರು ದಿನಗಳ ಶಿಬಿರದಲ್ಲಿ ಡಾ.ರಾಜ್ ಕುಮಾರ್ ಅವರ ವಿವಿದ ವಿಷಯಗಳ ಬಗ್ಗೆ ವಿಚಾರಣ ಸಂಕಿರಣ, ಸಂಗೀತ ಸಂಭ್ರಮ, ಛಾಯಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ 'ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ ಮಹಾಯಾನದ ಸಮಾರೂಪ' ಕಾರ್ಯಕ್ರಮವನ್ನ ಏರ್ಪಡಿಸಲಾಗಿದೆ.

ಡಿಸೆಂಬರ್ 2 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಡಾ.ರಾಜ್ ಕುಮಾರ್ ರಾಷ್ಟ್ರೀಯ ಉತ್ಸವ' ಉದ್ಗಾಟನೆ ಸಮಾರಂಭ ನೆರೆವೇರಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಟ ಅಂಬರೀಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದ ಉದ್ಗಾಟನಾ ದಿನ, ಅಪರೂಪದ ಅಭಿಮಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಜೊತೆಗೆ "ಡ್ರಾಮ ಜ್ಯೂನಿಯರ್ಸ್ ಮಕ್ಕಳು, ರಾಜ್ರ ಸ್ಮರಣೀಯ ಪಾತ್ರಗಳನ್ನು ಅಭಿನಯಿಸಿ ತೋರಿಸಲಿದ್ದಾರೆ. ಬಳಿಕ "ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆಯ ಇತಿಹಾಸ' ಎಂಬ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.

ಎರಡನೆಯ ದಿನ ಬೆಳಿಗ್ಗೆ "ಡಾ.ರಾಜ್ ಕುಮಾರ್: ಆಧುನಿಕ ಕನ್ನಡ ರಾಷ್ಟ್ರೀಯತೆಯ ಸಂಕೇತ' ಎಂಬ ವಿಚಾರವಾಗಿ ಇಂಗ್ಲೀಷ್ನಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ "ನಾ ಕಂಡಂತೆ ಡಾ.ರಾಜ್ ಕುಮಾರ್" ಎಂಬ ಇನ್ನೊಂದು ವಿಚಾರಗೋಷ್ಠಿ ಕನ್ನಡದಲ್ಲಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಹಿರಿಯ ನಟಿ ರೂಪಾದೇವಿ, ಪ್ರಕಾಶ್ ರೈ, ಪಿ. ಶೇಷಾದ್ರಿ ಮತ್ತು ಗಂಗಾವತಿ ಪ್ರಾಣೇಶ್ ವಿಚಾರ ಮಂಡನೆ ಮಾಡಲಿದ್ದಾರೆ. ಬಳಿಕ ಸಂಜೆ ಹಿರಿಯ ನಟಿ ಆದವಾನಿ ಲಕ್ಷ್ಮೀದೇವಿ ಅವರಿಗೆ ವಿಶೇಷ ಗೌರವ ಸಮರ್ಪಣೆ ನಡೆಯಲಿದೆ.

ಕಾರ್ಯಕ್ರಮದ ಕೊನೆಯ ದಿನ "ಕನ್ನಡ ನಾಡು ನುಡಿಯ ಅಸ್ಮಿತೆ: ಡಾ.ರಾಜ್ ಕುಮಾರ್' ಎಂಬ ವಿಷಯದ ಬಗ್ಗೆ ಪ್ರೊ.ಸಿ.ಎನ್. ರಾಮಚಂದ್ರನ್, ಡಾ.ಎಸ್.ಎಸ್. ರಾಘವೇಂದ್ರರಾವ್ ಮತ್ತು ಪ್ರೊ.ಆರ್.ಕೆ. ಹುಡಗಿ ವರು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ "ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆ'ಯ ಕುರಿತು ಕೃತಿ ಅವಲೋಕನ ನಡೆಯಲಿದ್ದು, ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಅಧ್ಯಕ್ಷತೆಯಲ್ಲಿ, ಕಥೆಗಾರ ಕೆ. ಸತ್ಯನಾರಾಯಣ, ಡಾ. ಮೊಗಳ್ಳಿ ಗಣೇಶ್ ಮತ್ತು ನಟ ಶ್ರೀಧರ್ ಅವರು ವಿಷಯ ಮಂಡಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ. ಸಿದ್ಧಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


Click it and Unblock the Notifications











