2 ದಿನದ ಅಂತರದಲ್ಲಿ ದಿಗ್ಗಜರಿಗೆ ಕರ್ನಾಟಕ ರತ್ನ: ಮೊದಲು ನನಗೆ ಪ್ರಶಸ್ತಿ ಬೇಡ ಎಂದು ಪಟ್ಟು ಹಿಡಿದಿದ್ಯಾಕೆ ಅಣ್ಣಾವ್ರು?
ತಮ್ಮ ಸರಳತೆ, ಕಲಾಪ್ರತಿಭೆ ಹಾಗೂ ಜೀವನಶೈಲಿಯಿಂದ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದವರು ಡಾ. ರಾಜ್ಕುಮಾರ್. ಸದ್ಯ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಿದ್ಧತೆ ನಡೆದಿದೆ. 30 ವರ್ಷಗಳ ಹಿಂದೆ ಡಾ. ರಾಜ್ಕುಮಾರ್ ಹಾಗೂ ಸಾಹಿತಿ ಕುವೆಂಪು ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದರು.
ಭಾರತ ಸರ್ಕಾರದಿಂದ ಭಾರತರತ್ನ ಪ್ರಶಸ್ತಿ ನೀಡುವಂತೆ ಕರ್ನಾಟಕ ರಾಜ್ಯದಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತೀರ್ಮಾನಿಸಿದ್ದರು. ಮೊದಲಿಗೆ ಡಾ. ರಾಜ್ಕುಮಾರ್ ಹಾಗೂ ಕುವೆಂಪು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿತ್ತು. ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕುವೆಂಪು ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಹಾಗಾಗಿ ವಿಧಾನ ಸೌಧದ ಮುಂಭಾಗದ ಮೆಟ್ಟಿಲ ಮೇಲಿನ ವೇದಿಕೆಯಲ್ಲಿ ಪ್ರಶಸ್ತಿ ಪಡೆದವರು ಡಾ. ರಾಜ್ಕುಮಾರ್ ಮಾತ್ರ.
ಮೊದಲು ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ನಂತರವೇ ನಾನು ಗೌರವ ಸ್ವೀಕರಿಸುವುದಾಗಿ ಅಣ್ಣಾವ್ರು ಪಟ್ಟು ಹಿಡಿದಿದ್ದರಂತೆ. ಈ ಸ್ವಾರಸ್ಯಕರ ವಿಚಾರದ ಬಗ್ಗೆ ಚಿತ್ರಲೋಕ ಡಾಟ್ ಕಾಮ್ ಈ ಹಿಂದೆ ವರದಿ ಮಾಡಿತ್ತು.

ಹಠ ಹಿಡಿದಿದ್ದ ಡಾ. ರಾಜ್!
ಪುಟ್ಟಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡದ ಹೊರತು ನನಗೆ ಆ ಪ್ರಶಸ್ತಿ ಬೇಡ ಎಂದು ಡಾ. ರಾಜ್ಕುಮಾರ್ ಪಟ್ಟು ಹಿಡಿದಿದ್ದರಂತೆ. ಅವರು ಅಕ್ಷರ ಸರಸ್ವತಿ. ಹಾಗಾಗಿ ಅವರಿಗೆ ಮೊದಲು ಆ ಗೌರವ ಸಲ್ಲಬೇಕು ಎನ್ನುವುದು ಅಣ್ಣಾವ್ರ ವಾದವಾಗಿತ್ತು. ಪುಟ್ಟಪ್ಪನವರು ಹಾಸಿಗೆ ಹಿಡಿದಿದ್ದರಿಂದ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು 12, ನವೆಂಬರ್ 1992ರಂದು ಮೈಸೂರಿನ ಅವರ ನಿವಾಸಕ್ಕೆ ತೆರಳಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದರು. ಸಾಹಿತ್ಯಲೋಕಕ್ಕೆ ಪುಟ್ಟಪ್ಪನವರು ಸಲ್ಲಿಸಿದ ಸೇವೆಗೆ ಮನ್ನಣೆಯಾಗಿ ಪ್ರಶಸ್ತಿ ನೀಡಲಾಗಿತ್ತು.

ರಾಜ್ಯಪಾಲರಿಂದ ಅಣ್ಣಾವ್ರಿಗೆ ಪ್ರಶಸ್ತಿ
ಪುಟ್ಟಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ 2 ದಿನಗಳ ನಂತರ ಬೆಂಗಳೂರಿನಲ್ಲಿ ಡಾ. ರಾಜ್ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. 1992 ನವೆಂಬರ್ 14ರಂದು ಸಂಜೆ 6.30ಕ್ಕೆ ನಿಮಿಷಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಕಷ್ಟು ಅಭಿಮಾನಿಗಳ ಸಮ್ಮುಖದಲ್ಲಿ ಅಂದಿನ ಕರ್ನಾಟಕದ ರಾಜ್ಯಪಾಲರಾದ ಖುರ್ಷಿದ್ ಆಲಂ ಖಾನ್ ಅವರು ಮುತ್ತುರಾಜನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದರು. ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸೇರಿದಂತೆ ಸಾಕಷ್ಟು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರರಂಗಕ್ಕೆ ಅಣ್ಣಾವ್ರ ಸೇವೆಯ ಗುರುತಾಗಿ ಪ್ರಶಸ್ತಿ ನೀಡಲಾಗಿತ್ತು.

ಅಭಿಮಾನಿಗಳೇ ದೇವರು ಎಂದಿದ್ದ ಡಾ. ರಾಜ್
ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಡಾ. ರಾಜ್ಕುಮಾರ್ ಅದೇ ವೇದಿಕೆಯಲ್ಲಿ ಮೊದಲ ಬಾರಿಗೆ ಅಭಿಮಾನಿ ದೇವರು ಎಂದು ಸಂಭೋದಿಸಿದ್ದರು. ನೀವು ದೇವರನ್ನು ನೋಡಿದ್ದೀರಾ ಎನ್ನುವ ಪ್ರಶ್ನೆಗೆ ಕಂಡಿತ ನೋಡಿದ್ದೀನಿ. ನನ್ನ ಕಣ್ಣಮುಂದೆ ಇರುವ ಈ ಅಭಿಮಾನಿಗಳೇ ನನಗೆ ದೇವರು ಎಂದಿದ್ದರು. ಕೊನೆಯವರೆಗೂ ಇದನ್ನೇ ಉಸಿರಾಗಿಸಿಕೊಂಡಿದ್ದರು. ಪುನೀತ್ ರಾಜ್ಕುಮಾರ್ "ಅಭಿಮಾನಿಗಳೇ ನಮ್ಮನೆ ದೇವ್ರು" ಎಂದು ಹಾಡಿದ್ದರು.

ಕೆಲವೇ ಕ್ಷಣಗಳಲ್ಲಿ ಅಪ್ಪುಗೆ ಪ್ರಶಸ್ತಿ
ಪುನೀತ್ ರಾಜ್ಕುಮಾರ್ ಚಿತ್ರರಂಗ ಹಾಗೂ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಪುರಸ್ಕರಿಸಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮ ಆರಂಭವಾಗಿದೆ.


Click it and Unblock the Notifications











