'ಶ್ರೀ ಭರತ ಬಾಹುಬಲಿ' ಚಿತ್ರದಲ್ಲಿ ಅಣ್ಣಾವ್ರ ಅಂಬಾಸಡರ್ ಕಾರ್
ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಸೂಪರ್ ಹಿಟ್ ಚಿತ್ರ "ಮಾಸ್ಟರ್ ಪೀಸ್" ನಿರ್ದೇಶನದ ನಂತರ ಮಂಜು ಮಾಂಡವ್ಯ ಈಗ "ಶ್ರೀ ಭರತ ಬಾಹುಬಲಿ" ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಪ್ರಿಯರ ಎದುರು ಬರ್ತಿದ್ದಾರೆ.
ಈ ಬಾರಿ ನಿರ್ದೇಶಕರಾಗಿ ಅಲ್ಲದೆ, ಮಂಜು ಮಾಂಡವ್ಯ ನಾಯಕರಾಗಿಯೂ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಿರ್ದೇಶನ ಜೊತೆಗೆ ಮಂಜು ಮಾಂಡವ್ಯ ಅವರೇ ಸಂಭಾಷಣೆ ಹಾಗೂ ಸಾಹಿತ್ಯ ಕೂಡ ರಚಿಸಿದ್ದಾರೆ.
ಇತ್ತೀಚೆಗೆ ಚಿತ್ರದ ಒಂದು ಪ್ರಮುಖ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಆ ದೃಶ್ಯದಲ್ಲಿ ಈ ಹಿಂದೆ ಅಣ್ಣಾವ್ರ ಕ್ರೇಜ್ ಎಷ್ಟು ದೊಡ್ಡದು ಎಂದು ತೋರಿಸುವ ಸನ್ನಿವೇಶ ಇತ್ತು. ಆ ದೃಶ್ಯಕ್ಕೆ ಚಿತ್ರತಂಡ ಕಾಂಟೆಸ್ಸಾ ಕಾರ್ ಒಂದನ್ನು ಬುಕ್ ಮಾಡಿತ್ತು.

ಅನಿರೀಕ್ಷಿತವಾಗಿ ಬರಬೇಕಾಗಿದ್ದ ಕಾಂಟೆಸ್ಸಾ ಕಾರು ಬರದೇ ಕೈ ಕೊಟ್ಟಿತು. ಆಗ ಬೇರೊಂದು ಮೂಲದಿಂದ ಪ್ರಯತ್ನಿಸಿದಾಗ ಚಿತ್ರತಂಡಕ್ಕೆ ಅಣ್ಣಾವ್ರು ಬಳಸಿದ್ದ ಅಂಬಾಸಡರ್ ಕಾರು ಸಿಕ್ಕಿಬಿಟ್ಟಿತ್ತು. ಆದ್ರೆ, ಇದನ್ನ ಯಾವಾಗ ಅಣ್ಣಾವ್ರು ಬಳಿಸಿದ್ದರು, ಈಗ ಯಾರ ಬಳಿಯಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಹಲವು ವರ್ಷಗಳ ಹಿಂದೆ ಈ ಕಾರನ್ನ ಮಾರಲಾಗಿತ್ತಂತೆ.
ಈ ಬೆಳವಣಿಗೆಯಿಂದ ವಿಪರೀತ ಥ್ರಿಲ್ಲಾದ ಚಿತ್ರತಂಡ ಅಣ್ಣಾವ್ರ ದೃಶ್ಯಕ್ಕೆ ಅಣ್ಣಾವ್ರ ಕಾರೇ ಬಂದಿದ್ದು ನೋಡಿ, ಇದು ಅಣ್ಣಾವ್ರ ಆಶೀರ್ವಾದವೇ ಸರಿ ಎಂದು ಭಾವಿಸಿ ಚಿತ್ರೀಕರಣ ಮಾಡುತ್ತಿದೆ.
ಇನ್ನುಳಿದಂತೆ ಮಂಜು ಮಾಂಡವ್ಯ ಜೊತೆ ಮತ್ತೊಂದು ಬಹುಮುಖ್ಯ ಪಾತ್ರದಲ್ಲಿ ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಐಶ್ವರ್ಯ ಫಿಲಂಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.


Click it and Unblock the Notifications











