ವಿವಾದಾತ್ಮಕ ಚಿತ್ರವಾಗಲಿದೆಯಾ 'ಶಂಕರಾಚಾರ್ಯ'?
ಚಿತ್ರದ ಶೀರ್ಷಿಕೆ ಕೇಳಿ ಇದೊಂದು ಭಕ್ತಿಪ್ರಧಾನ ಚಿತ್ರ ಎಂದುಕೊಂಡರೆ ಅದು ನಿಮ್ಮ ತಪ್ಪಲ್ಲ ಬಿಡಿ. ಇತ್ತೀಚೆಗೆ ಸೆಟ್ಟೇರಿದ 'ಶಂಕರಾಚಾರ್ಯ' ಚಿತ್ರ ಸಾಹಸ ಪ್ರಧಾನದ್ದಾಗಿದೆ. ನಟ ಡಾಕ್ಟರ್ ಸಿದ್ಧಾಂತ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ 'ಶಂಕರಾಚಾರ್ಯ' ಎಂದು ಹೆಸರಿಡಲಾಗಿದೆ.
ಯಾರೇ ಆಗಲಿ ಶಂಕರಾಚಾರ್ಯ ಎಂದರೆ ಥಟ್ಟನೆ ನೆನಪಾಗುವುದು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ, ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಆದರೆ ಈ ಸಿನಿಮಾಗೂ ಸನಾತನ ಸಂಸ್ಕೃತಿಗೂ ಸಂಬಂಧ ಇದೆಯೋ ಇಲ್ಲವೋ ಸದ್ಯಕ್ಕೆ ಗೊತ್ತಿಲ್ಲ.

ಸಿದ್ಧಾಂತ್ ಅವರ ಈ ವರ್ಷದ ಜನುಮದಿನಕ್ಕೆ (19ನೇ ಅಕ್ಟೋಬರ್) ಹೊಸ ಕನ್ನಡ ಸಿನಿಮಾ ನವೆಂಬರ್ ಎರಡನೇ ವಾರದಲ್ಲಿ ಆರಂಭವಾಗುತ್ತಿದೆ. ಲಿಬ್ರಾ ಪ್ರೊಡಕ್ಷನ್ ಹಾಗೂ ವೆಂಕ್ ಐ ಟಿ ಎಲ್ ಎಲ್ ಸಿ, ಯು ಎಸ್ ಎ ಜೊತೆಯಾಗಿ ಅರ್ಪಿಸುತ್ತಿರುವ ಚಿತ್ರ ಇದು.
ಚಿತ್ರದ ವಿಶೇಷ ಪಾತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಎಕೆ 56, ಛತ್ರಪತಿ ನಂತರ ಸಿದ್ಧಾಂತ್ ನಟಿಸುತ್ತಿರುವ ಮತ್ತೊಂದು ಸಾಹಸ ಪ್ರಾಧಾನ ಸಿನಿಮಾ ಇದಾಗಿದೆ. ವೆಂಕಟ್ ಪ್ರಖ್ಯ, ಯುಎಸ್ಎ, ಬಿ ಹೇಮ ಸುಂದರ ರೆಡ್ಡಿ ಅವರ ಸಹ ನಿರ್ಮಾಣದ 'ಶಂಕರಾಚಾರ್ಯ' ಸಿನಿಮಾದ ನಿರ್ದೇಶಕರು ಶಾಹುರಾಜ್ ಶಿಂಧೆ. ಈ ಹಿಂದೆ ಶಿಂಧೆ ಅವರು 'ಸ್ನೇಹನಾ ಪ್ರೀತಿನಾ' ಹಾಗೂ 'ಪ್ರೇಮ ಚಂದ್ರಮ' ಎಂಬ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ಮಳವಳ್ಳಿ ಸಾಯಿ ಕೃಷ್ಣ ಅವರ ಸಂಭಾಷಣೆ, ಎಂ ಸೆಲ್ವಮ್ ಅವರ ಛಾಯಾಗ್ರಹಣ, ತ್ರಿಭುವನ್ ಅವರ ನೃತ್ಯ ನಿರ್ದೇಶನ ಜೊತೆಗೆ ತಾಂತ್ರಿಕ ವರ್ಗದಲ್ಲಿ ಹರಿವರಾಸನಮ್, ರಘುನಾಥ್, ಚೇತನ್, ಎಸ್ ರಾಜು ಹಾಗೂ ಇನ್ನಿತರರು ಇದ್ದಾರೆ. ಶೀರ್ಷಿಕೆಯಿಂದಾಗಿ ಇದು ಮತ್ತೊಂದು ವಿವಾದಾತ್ಮಕ ಸಿನಿಮಾ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











