ವಿಷ್ಣು-ಅಂಬಿಯನ್ನ ದೂರ ಮಾಡಬೇಡಿ, ಇದ್ಯಾವ ನ್ಯಾಯ ಎನ್ನುತ್ತಿದೆ 'ದಿಗ್ಗಜರ' ಬಳಗ.!
ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ನಂತರ ಕಾಡುತ್ತಿದ್ದ ಪ್ರಶ್ನೆ ಅಂತ್ಯಕ್ರಿಯೆ ಎಲ್ಲಿ ಮಾಡಲಾಗುತ್ತೆ. ಹುಟ್ಟೂರಿನಲ್ಲಿ ಅಂಬಿನ ಅಂತಿಮ ಸಂಸ್ಕಾರ ಆಗುತ್ತಾ ಅಥವಾ ಬೆಂಗಳೂರಿನಲ್ಲಿ ಆಗುತ್ತಾ ಎಂದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿತ್ತು.
ಅಂತಿಮವಾಗಿ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸಮಾಧಿ ಮಾಡಲು ಸರ್ಕಾರ ಅಧೀಕೃತವಾಗಿ ಘೋಷಣೆ ಮಾಡಿತು. ಡಾ ರಾಜ್ ಕುಮಾರ್ ಸ್ಮಾರಕವಿರುವ ಸ್ಟುಡಿಯೋದಲ್ಲೇ ಒಂದೂವರೆ ಎಕರೆ ಸರ್ಕಾರಿ ಜಾಗವಿದೆ. ಅಲ್ಲಿ ಅಂಬಿಯ ಸಮಾಧಿ ಮಾಡಿ, ನಂತರ ಅಲ್ಲೇ ಸ್ಮಾರಕ ನಿರ್ಮಿಸುವ ಬಗ್ಗೆ ಸಿಎಂ ಕುಮಾರಸ್ವಾಮಿ ಖಚಿತಪಡಿಸಿದ್ದರು.
ಅಲ್ಲಿಯವರೆಗೂ ಆರಾಮಾಗಿದ್ದ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರ ಅಭಿಮಾನಿಗಳು, ಏಕಾಏಕಿ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ಅಂಬಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಬೇಸರಕ್ಕೆ ಕಾರಣವೇನು.? ಮುಂದೆ ಓದಿ....

ಸಾವಿನಲ್ಲಿ ಒಂದಾದ 'ದಿಗ್ಗಜರು'
ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಎಷ್ಟು ಪವಿತ್ರವಾದ್ದದು ಎಂದು ಎಲ್ಲರಿಗೂ ಗೊತ್ತಿದೆ. ಒಬ್ಬರನ್ನ ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ವಿಷ್ಣುವರ್ಧನ್ ಅವರು ಹೊರೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರು, ಅಂಬಿ ಜೊತೆಯಲ್ಲಿರಬೇಕಿತ್ತು. ಅಂಬಿಯಿಲ್ಲದೇ ವಿಷ್ಣು ಊಹಿಸಲು ಕಷ್ಟವಾಗುತ್ತಿತ್ತು. ಆದ್ರೆ, ಅಂಬಿಯನ್ನ ಬಿಟ್ಟು ದಾದಾ 2009ರಲ್ಲೇ ಇಹಲೋಕ ತ್ಯಜಿಸಿದರು. ಅಲ್ಲಿಂದ ಸ್ನೇಹಿತ ಅಗಲಿಕೆಯನ್ನ ನೆನೆದು ಕೊರಗುತ್ತಿದ್ದ ಅಂಬಿ, ಈಗ ಅಂತಿಮವಾಗಿ ಸ್ನೇಹಿತನಲ್ಲಿಗೆ ಹೋಗಿದ್ದಾರೆ.

ವಿಷ್ಣು ಸಾವಿನ ದಿನ 'ಅಂಬಿ' ಸಾರಥ್ಯ
ವಿಷ್ಣುವರ್ಧನ್ ಅವರ ಸಾವಿನ ಸುದ್ದಿ ಕೇಳಿ ಇಡೀ ರಾಜ್ಯದಲ್ಲಿ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದರು. ಆ ವೇಳೆ ಅಭಿಮಾನಿಗಳ ನಡುವೆ ನೂಕುನುಗ್ಗಲು, ಲಾಠಿ ಚಾರ್ಜ್ ಎಲ್ಲವೂ ಆಗಿತ್ತು. ಇಂತಹ ಸಂದರ್ಭದಲ್ಲಿ ಏಕಾಂಗಿ ನಿಂತ ಅಂಬಿ, ವಿಷ್ಣು ಅಂತ್ಯಕ್ರಿಯೆಯನ್ನ ಶಾಂತಿಯುತವಾಗಿ ನಡೆಸಿಕೊಟ್ಟಿದ್ದರು. ಇದೀಗ, ಅದೇ ಸನ್ನಿವೇಶ ಅಂಬರೀಶ್ ಗೆ ಬಂದಿದ್ದು, ಇಡೀ ಚಿತ್ರರಂಗ ಕಣ್ಣಿರಿಟ್ಟಿದೆ.

8 ವರ್ಷವಾದ್ರು ಸ್ಮಾರಕವಿಲ್ಲ
ವಿಷ್ಣುವರ್ಧನ್ ಅವರು ವಿಧಿವಶರಾಗಿ ಸುಮಾರು 8 ವರ್ಷಗಳು ಕಳೆದಿವೆ. ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಆಗಿಲ್ಲ. ಅಂಬರೀಶ್ ಅವರು ಹೇಗೋ ಮಾಡಿ ಸ್ಮಾರಕ ನಿರ್ಮಾಣ ಮಾಡಲು ಸಹಾಯ ಮಾಡ್ತಾರೆ ಎಂಬ ಆಸೆ ಅಭಿಮಾನಿಗಳಲ್ಲಿತ್ತು. ಇದ್ದ ಒಂದು ಆಸೆಯೂ ಈಗ ಕಮರಿದೆ. ಬಟ್, ಅಂಬರೀಶ್ ಸಾವಿನ ಬಳಿಕ ಅಭಿಮಾನಿಗಳಲ್ಲಿ ಒಂದು ಆಸೆ ಚಿಗುರಿತ್ತು.

ಏನಿದು ಅಂಬಿ-ವಿಷ್ಣು ಅಭಿಮಾನಿಗಳ ಆಸೆ
ವಿಷ್ಣುವರ್ಧನ್ ಅವರ ಸಮಾಧಿ ಆಗಿರುವ ಅಭಿಮಾನ್ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸಮಾಧಿಯಾಗಬೇಕು. ಇಬ್ಬರಿಗೂ ಒಟ್ಟಿಗೆ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಆಸೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಸಾವಿನಲ್ಲದಾರೂ ಅಂಬಿ-ವಿಷ್ಣುವನ್ನ ಒಂದಾಗಲು ಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಈ ಕೂಗು ದೊಡ್ಡ ಮಟ್ಟದಲ್ಲಿದೆ.

ಒಬ್ಬಂಟಿಯಾದ್ರಾ ವಿಷ್ಣುದಾದ.!
ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಡಾ ಅಂಬರೀಶ್ ಕನ್ನಡ ಚಿತ್ರರಂಗದ ತ್ರಿಮೂರ್ತಿಗಳು ಎಂದು ಕರೆಯಿಸಿಕೊಳ್ಳುತ್ತಾರೆ. ಆದ್ರೀಗ, ವಿಷ್ಣು ಅವರನ್ನ ಒಬ್ಬಂಟಿ ಮಾಡಿ, ಉಳಿದ ಇಬ್ಬರ ಸ್ಮಾರಕ ಒಂದು ಕಡೆ ಮಾಡಲು ಮುಂದಾಗಿರುವುದಕ್ಕೆ ಅಭಿಮಾನಿಗಳು ಬೇಸರವಾಗಿದ್ದಾರೆ.

ತ್ರಿಮೂರ್ತಿಗಳ ಸ್ಮಾರಕ ಒಂದೇ ಕಡೆ
ಮತ್ತೊಂದೆಡೆ ರಾಜ್, ವಿಷ್ಣು, ಅಂಬಿಯ ಮೂರು ಜನರ ಸ್ಮಾರಕಗಳನ್ನ ಒಂದೇ ಕಡೆ ಇರಲಿ ಎಂಬ ಚಿಂತನೆಯನ್ನ ಸರ್ಕಾರ ಮಾಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ ಸ್ಮಾರಕದ ಬಳಿಯೇ ಅಂಬಿ ಜೊತೆಗೆ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಯೋಚಿಸಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹೀಗೆ ಯೋಚಿಸಿದರೂ, ಅದು ಸಾಧ್ಯವಾಗುತ್ತಾ.?


Click it and Unblock the Notifications











